🚨 BREAKING NEWS,ಲೋಕಾಯುಕ್ತ ಅಧಿಕಾರಿಯಿಂದಲೇ ಸಾಕ್ಷಿಗಳ ಮೇಲೆ ದೌರ್ಜನ್ಯದ ಆರೋಪ? ಕುಂದಾಪುರದ ಬೆಚ್ಚಿ ಬೀಳಿಸುವ – ‘ನಕಲಿ ಟ್ರ್ಯಾಪ್’ ಜಾಲದ ಅಸಲಿ ಮುಖವಾಡ ಬಯಲು..! 🚨
ಕುಂದಾಪುರ/ಉಡುಪಿ ಫೆ.22

ಭ್ರಷ್ಟಾಚಾರವನ್ನು ಮಟ್ಟಹಾಕ ಬೇಕಾದ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಯೇ ಅಧಿಕಾರ ದುರ್ಬಳಕೆ ಮಾಡಿ ಕೊಂಡು ದಲಿತ ಅಧಿಕಾರಿ ಯೊಬ್ಬರನ್ನು ಸಿಲುಕಿಸಲು ಸಂಚು ರೂಪಿಸಿದ್ದಾರೆಯೇ….? ಸಾಕ್ಷಿಗಳನ್ನು ಬೆದರಿಸಿ ಹೇಳಿಕೆ ಪಡೆಯಲಾಗಿದೆಯೇ..? ಹೀಗೊಂದು ಗಂಭೀರ ಚರ್ಚೆ ಈಗ ಇಡೀ ರಾಜ್ಯದಾದ್ಯಂತ ಸಂಚಲನ ಮೂಡಿಸಿದೆ. ಉಡುಪಿ ಲೋಕಾಯುಕ್ತ ನಿರೀಕ್ಷಕ ರಾಜೇಂದ್ರ ನಾಯ್ಕ್ ಎಂ.ಎನ್ ಅವರ ವಿರುದ್ಧ ಈಗ ಸಾರ್ವಜನಿಕ ವಲಯದಲ್ಲಿ ಆಕ್ರೋಶದ ಅಲೆ ಎದ್ದಿದೆ.
📍 ಏನಿದು ಪ್ರಕರಣ..?
ಗಂಗೊಳ್ಳಿ ಗ್ರಾಮ ಪಂಚಾಯತ್ ಪಿಡಿಓ ಹೆಚ್. ಉಮಾಶಂಕರ್ ಮತ್ತು ದ್ವಿತೀಯ ದರ್ಜೆ ಸಹಾಯಕ ಶೇಖರ್ ಜಿ. ಅವರ ಮೇಲೆ ದಾಖಲಾಗಿದ್ದ ಲೋಕಾಯುಕ್ತ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ನೀಡಿದ್ದ ಟ್ರ್ಯಾಪ್ ಮಹಜರ್ ಈಗ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಈ ಪ್ರಕರಣದಲ್ಲಿ ಸಾಕ್ಷಿಗಳಾಗಿದ್ದ ತಾಲ್ಲೂಕು ಪಂಚಾಯತ್ ಹಿಂದಿನ ಕಾರ್ಯ ನಿರ್ವಹಣಾಧಿಕಾರಿ ಡಾ, ರವಿಕುಮಾರ್ ಹುಕ್ಕೇರಿ ಮತ್ತು ಹಿಂದಿನ ವ್ಯವಸ್ಥಾಪಕ ರಾಮಚಂದ್ರ ಮಯ್ಯ ಅವರು ಟ್ರ್ಯಾಪ್ ದಿನದಂದು (18/01/2025) ಫಿರ್ಯಾದಿದಾರನಾದ ಮಹಮದ್ ಹನಿಫನ ಮೊಬೈಲ್ನಲ್ಲಿ ರೆಕಾರ್ಡ್ ಆದ ಲಂಚದ ಬೇಡಿಕೆಗೆ ಸಂಬಂಧ ಪಡದ ಧ್ವನಿಯನ್ನು ಗುರುತಿಸದಿದ್ದರೂ, ಗುರುತಿಸಲಾಗಿದೆ ಎಂದು ಟ್ರ್ಯಾಪ್ ಮಹಜರ್ನಲ್ಲಿ ಬರೆಸಿ ಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ದಿನಾಂಕ 22/01/2025 ರಂದು ಟ್ರ್ಯಾಪ್ ದಿನ ದಂದು ವಾಯ್ಸ್ ರೆಕಾರ್ಡ್ನಲ್ಲಿ ಲಂಚದ ಬೇಡಿಕೆಯ ಸಂಭಾಷಣೆಯು ರೆಕಾರ್ಡ್ ಆಗಿರುವುದಿಲ್ಲ. ಆದರೆ ದೂರುದಾರ ಮಹಮದ್ ಹನೀಫನ ಮೊಬೈಲ್ನಲ್ಲಿ ರೆಕಾರ್ಡ್ ಆಗಿದೆ ಎಂದು 28/01/2025 ರಂದು ತಿಳಿಸಿದ್ದು, ಮೊಬೈಲ್ನಲ್ಲಿ ಲಂಚದ ಬೇಡಿಕೆಯ ಸಂಭಾಷಣೆ ರೆಕಾರ್ಡ್ ಆಗಿದ್ದಲ್ಲಿ, ದಿನಾಂಕ 22/01/2025ರ ಟ್ರ್ಯಾಪ್ ದಿನ ದಂದು ಸಂಭಾಷಣೆಯನ್ನು ಸಾಕ್ಷಿದಾರರಾದ ಡಾ, ರವಿಕುಮಾರ್ ಹುಕ್ಕೇರಿ ಮತ್ತು ರಾಮಚಂದ್ರ ಮಯ್ಯ ಇವರಿಗೆ ಕೇಳಿಸದೇ ಇರುವ ಹಿಂದಿನ ಅಸಲಿ ಗುಟ್ಟಾದರೂ ಏನು..?
⚖️ ನಿಯಮ ಬಾಹಿರ ನಡೆ ಮತ್ತು ಬೆದರಿಕೆ ಆರೋಪ:-
ಕಾರ್ಯನಿವಾಹಕ ಅಧಿಕಾರಿ ಹುದ್ದೆಯು ಸಹಾಯಕ ಕಮಿಷನರ್ ಹುದ್ದೆಯ ದರ್ಜೆಗೆ ಸಮಾನಾಂತರವಾಗಿದ್ದು, ಇದರಲ್ಲಿ ಬೆದರಿಕೆ ಹಾಕುವ ಪ್ರಮೇಯವೇ ಉದ್ಭವಿಸುವುದಿಲ್ಲ. ಒಂದು ವೇಳೆ ಬೆದರಿಕೆ ಒಡ್ಡಿ ಛಾಪಾ ಕಾಗದದಲ್ಲಿ ಬರೆಯಿಸಿ ಕೊಂಡಿದ್ದಲ್ಲಿ, ರವಿ ಕುಮಾರ್ ಹುಕ್ಕೇರಿ ಮತ್ತು ರಾಮಚಂದ್ರ ಮಯ್ಯ ಇವರೇ ಪೊಲೀಸ್ ಠಾಣೆಗೆ ನೇರವಾಗಿ ದೂರು ನೀಡ ಬೇಕಿತ್ತು. ಅದನ್ನು ಬಿಟ್ಟು ಇವರ ಬದಲಿಗೆ ಒಂದು ವರ್ಷದ ನಂತರ ಲೋಕಾಯುಕ್ತ ಪಿಎಸ್ಐ ರಾಜೇಂದ್ರ ನಾಯ್ಕ್ ಖಾಸಗಿ ಫಿರ್ಯಾದಿ ನೀಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿ ಕೊಟ್ಟಿದೆ.
ಪಿಡಿಓ ಉಮಾಶಂಕರ್ ಅವರು ತನ್ನ ಮೇಲಾದ ನಕಲಿ ಲೋಕಾಯುಕ್ತ ಟ್ರ್ಯಾಪ್ ವಿರುದ್ಧ ಎಸ್/ಸಿ ಎಸ್/ಟಿ ದೌರ್ಜನ್ಯ ವಿಶೇಷ ನ್ಯಾಯಾಲಯ ಕುಂದಾಪುರ ಇಲ್ಲಿ ದೂರು ಸಲ್ಲಿಸಿದ್ದು, ಅದು ವಿಚಾರಣಾ ಹಂತದಲ್ಲಿರುವಾಗಲೇ ರಾಜೇಂದ್ರ ನಾಯಕ್ ನೀಡಿದ ಖಾಸಗಿ ಫಿರ್ಯಾದಿಗೆ ಎಫ್ಐಆರ್ (FIR) ದಾಖಲಾಗಿರುವುದು ನ್ಯಾಯ ಸಿಗುವ ಸಾಧ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿಸಿದೆ.
🚫 ಸಂವಿಧಾನ ವಿರೋಧಿ ಮತ್ತು ಅಧಿಕಾರ ವ್ಯಾಪ್ತಿ ಮೀರಿದ ಕ್ರಮ?
ಛಾಪಾ ಕಾಗದದ ವಿಚಾರಕ್ಕೆ ಸಂಬಂಧಿಸಿ ಉಡುಪಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಇಲಾಖಾ ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದಾರೆ ಎನ್ನಲಾದ ಮಾಹಿತಿ ಸುಳ್ಳಿನಿಂದ ಕೂಡಿದೆ ಎಂಬ ಆರೋಪ ಕೇಳಿ ಬಂದಿದೆ. ಸಿಸಿಎ ನಿಯಮ 1957ರ ಅಡಿ ಯಾವುದೇ ಅಧಿಕೃತ ವಿಚಾರಣೆ ನಡೆಸದೆ, ಆರೋಪ ಪಟ್ಟಿ ನೀಡದೆ ಇಲಾಖಾ ವಿಚಾರಣೆ ಮಾಡಲಾಗಿದೆ ಎಂದು ಹೇಳಿರುವುದು ಸಂವಿಧಾನಕ್ಕೆ ವಿರುದ್ಧವಾದ ನಡೆಯಾಗಿದೆ. ಅಲ್ಲದೆ, ಡಾ, ರವಿಕುಮಾರ್ ಹುಕ್ಕೇರಿ ಅವರಿಗೆ ಸರ್ಕಾರವೇ ವಿಚಾರಣಾ ಪ್ರಾಧಿಕಾರವಾಗಿದ್ದರೂ, ಜಿ.ಪಂ ಸಿ.ಇ.ಓ ಅವರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
📉 ಸಂತ್ರಸ್ತರಿಗೆ ಕಿರುಕುಳದ ಪರ್ವ:-
ಡಾ, po ರವಿಕುಮಾರ್ ಹುಕ್ಕೇರಿ ಮತ್ತು ರಾಮಚಂದ್ರ ಮಯ್ಯ ಅವರು ನೀಡಿದ ಛಾಪಾ ಕಾಗದ (ಅಫಿಡವಿಟ್) ಇನ್ನೂ ಊರ್ಜಿತದಲ್ಲಿದ್ದು, ಯಾವುದೇ ನ್ಯಾಯಾಲಯ ಅದನ್ನು ರದ್ದು ಪಡಿಸಿಲ್ಲ. ಹೀಗಿದ್ದರೂ ಕೇಸು ದಾಖಲಿಸಿರುವುದು ಕಾನೂನು ಬಾಹಿರ. ಈ ಪ್ರಕರಣದ ಬಳಿಕ ಡಾ, ರವಿಕುಮಾರ್ ಅವರನ್ನು ಬೆಳಗಾವಿಯ ಚಿಕ್ಕೋಡಿಗೆ ವರ್ಗಾಯಿಸಿ, ರಾಮಚಂದ್ರ ಮಯ್ಯ ಅವರನ್ನು ಮ್ಯಾನೇಜರ್ ಹುದ್ದೆಯಿಂದ ಕಿತ್ತೊಗೆಯಲಾಗಿದೆ.
ಒಟ್ಟಾರೆಯಾಗಿ, ಪಿಡಿಓ ಉಮಾಶಂಕರ್ ಅವರಿಗೆ ನಿರಂತರವಾಗಿ ಕಿರುಕುಳ ನೀಡುವ ದುರುದ್ದೇಶದಿಂದ ಮತ್ತು ತಾವು ಎಸಗಿರುವ ‘ನಕಲಿ ಟ್ರ್ಯಾಪ್’ ಕೃತ್ಯದಿಂದ ತಪ್ಪಿಸಿ ಕೊಳ್ಳುವ ಹುನ್ನಾರ ಲೋಕಾಯುಕ್ತ ಅಧಿಕಾರಿಗಳಿಂದ ನಡೆಯುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಹಾಗೂ ಸಂತ್ರಸ್ತರಿಗೆ ನ್ಯಾಯ ಸಿಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ

