ಸಿಂಗಟಗೆರೆಯಲ್ಲಿ 287 ನೇ. ಸಂತ ಸೇವಾಲಾಲ್ ಜಯಂತಿ ಸಂಭ್ರಮ – ತ್ರಿವಳಿ ಸಂಗಮದಲ್ಲಿ ಅದ್ಭುತ ಸಂಗೀತ ಸುಧೆ ಕಾರ್ಯಕ್ರಮ ಜರಗಿತು.
ಸಿಂಗಟಗೆರೆ ಮಾ.09

ದಿನಾಂಕ 08/03/2026 ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಸಿಂಗಟಗೆರೆ ಗ್ರಾಮದಲ್ಲಿ ಶ್ರೀ ಸಂತ ಸೇವಾಲಾಲ್ ಮಹಾರಾಜರ 287 ನೇ. ಜಯಂತಿ ಪ್ರಯುಕ್ತ ಬಂಜಾರ ಸಮಾವೇಶ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅತ್ಯಂತ ವೈಶಿಷ್ಟವಾಗಿ ಮತ್ತು ಅದ್ದೂರಿಯಾಗಿ ಆಯೋಜಿಸಲಾಯಿತು.
ಈ ಮಹೋತ್ಸವಕ್ಕೆ ಚಿತ್ರದುರ್ಗದ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿಗಳು, ಪ್ರಭುಕುಮಾರ್ ಮಹಾರಾಜ್ ಶಿವಾಚಾರ್ಯ ಸ್ವಾಮೀಜಿ, ಹಾಗೂ ಶ್ರೀ ನಂದ ಮಸಂದ್ ಸ್ವಾಮೀಜಿಗಳು ದಿವ್ಯ ಸಾನಿಧ್ಯವನ್ನು ವಹಿಸಿ ಕಾರ್ಯಕ್ರಮಕ್ಕೆ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಕೆ.ಎಸ್ ಆನಂದ್ ವಹಿಸಿದ್ದರು. ಅವರು ತಮ್ಮ ಭಾಷಣದಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ ಆದರ್ಶಗಳು ಸಮಾಜಕ್ಕೆ ಮಾರ್ಗದರ್ಶನವಾಗಿವೆ ಎಂದು ತಿಳಿಸಿ, ಬಂಜಾರ ಸಮುದಾಯದ ಏಕತೆ ಮತ್ತು ಅಭಿವೃದ್ಧಿಗೆ ಒತ್ತು ನೀಡಿದರು.

ಉಪನ್ಯಾಸವನ್ನು ಶ್ರೀ ಮತಿ ಮೀನಾಕ್ಷಿ ಬಾಯಿ ಐ.ಎಂ ಉಪನ್ಯಾಸಕರು ನೀಡಿದರು. ವಿಶೇಷ ಸನ್ಮಾನವನ್ನು ಭಾರತೀಯ ಶಸಸ್ತ್ರ ಪಡೆಯ ರಂಜಿತಾ ಕಲ್ಲೇಶ ನಾಯ್ಕ್ ಸ್ವೀಕರಿಸಿದರು ಈ ಸಂದರ್ಭದಲ್ಲಿ ಸಂಗೀತ ಲೋಕದ ತ್ರಿಮೂರ್ತಿಗಳಂತೆ ಖ್ಯಾತಿ ಪಡೆದ ಸರಿಗಮ ಪ ಖ್ಯಾತಿಯ ರಮೇಶ್ ಲಮಾಣಿ, ನಾಗರಕಟ್ಟೆಯ ಕರುನಾಡ ಕೋಗಿಲೆ ಹನುಮಂತ ನಾಯ್ಕ್ ಸಿ, ಹಾಗೂ ಚಿನ್ನ ಸಮುದ್ರದ ಜಾನಪದ ಗಾನ ಗಾರುಡಿಗ ಉಮೇಶ್ ನಾಯ್ಕ್ ಅವರುಗಳು ತಮ್ಮ ಅದ್ಭುತ ಗಾಯನದಿಂದ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.
ಇವರು ಸ್ವರಚಿತ ಬಂಜಾರ ಗೀತೆಗಳು, ಜಾನಪದ ಗೀತೆಗಳು, ಭಕ್ತಿ ಗೀತೆಗಳು ಹಾಗೂ ಕನ್ನಡ ಗೀತೆಗಳನ್ನು ಮನಮೋಹಕವಾಗಿ ಹಾಡಿ, ತಮ್ಮ ಮೈನವಿರೇಳಿಸುವ ಗಾಯನದಿಂದ ಅಲ್ಲಿದ್ದ ಸಾವಿರಾರು ಜನರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು. ಈ ಸಂಗೀತ ರಸದೌತಣ ಕಾರ್ಯಕ್ರಮವನ್ನು ಮತ್ತಷ್ಟು ಕಂಗೊಳಿಸಿತು.
ಒಟ್ಟಾರೆಯಾಗಿ, ಶ್ರೀ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಮಹೋತ್ಸವವು ಭಕ್ತಿ, ಸಂಸ್ಕೃತಿ ಮತ್ತು ಸಮುದಾಯ ಏಕತೆಯನ್ನು ಸಾರುವ ರೀತಿಯಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.

