ಪವರ್ ಟಿವಿಯ ಕರುನಾಡ ಕಣ್ಮಣಿ ಪ್ರಶಸ್ತಿಗೆ – ಬುರ್ರಕಥಾ ಕಮಲಮ್ಮ ಭಾಜನ.
ಲಿಂಗಸ್ಗೂರ ಅ.19

ಪವರ್ ಟಿವಿ 6 ನೇ ವಾರ್ಷೀಕೋತ್ಸವದ ಅಂಗವಾಗಿ ಬೆಂಗಳೂರಿನ ಇಬಿಸು ಪ್ಯಾಲೇಸ್ನಲ್ಲಿ ಹಮ್ಮಿ ಕೊಂಡಿದ್ದ ಪವರ್ ಹಬ್ಬದಲ್ಲಿ ರಾಯಚೂರು ಜಿಲ್ಲೆಯಿಂದ ಮಹಿಳಾ ಕ್ಷೇತ್ರದಲ್ಲಿ ಸಾಧನೆ ಮನಗಂಡು ಪ್ರಸೂತಿ ತಜ್ಞೆ ಹಾಗೂ ಹಟ್ಟಿ ಪಟ್ಟಣದ ಹಿರಿಯ ಬುರ್ರಕಥಾ, ಜನಪದ ಕಲಾವಿದೆ ಕಮಲಮ್ಮ ಕರುನಾಡ ಕಣ್ಮಣಿ ಪ್ರಶಸ್ತಿಗೆ ಭಾಜನರಾಗಿ ಪುರಸ್ಕೃತರಾಗಿದ್ದಾರೆ. ಆಂಧ್ರ ಮತ್ತು ಕರ್ನಾಟಕದ ಗಡಿ ಭಾಗದಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿರುವ ಬುರ್ರಕಥಾ ಕಲಾವಿದೆ ಈ ಕಮಲಮ್ಮ. ಒಮ್ಮೆ ಹಾಡಲು ನಿಂತರೆ ಹಗಲು-ರಾತ್ರಿ ಗಂಟೆ ಗಟ್ಟಲೇ ಹಾಡುವ ಇವರ ಶೈಲಿಗೆ ಫಿದಾ ಆಗದವರಿಲ್ಲ. ಕಮಲಮ್ಮ ಕಲಾವಿದೆ ಮಾತ್ರವಲ್ಲ, ಸೂಲಗಿತ್ತಿಯೂ ಹೌದು. ಸುಮಾರು 500 ಕ್ಕೂ ಹೆಚ್ಚು ನಾರ್ಮಲ್ ಹೆರಿಗೆ ಮಾಡಿಸಿದ್ದಾರೆ. ಸುತ್ತ ಮುತ್ತಲಿನ ತಮ್ಮ ಸಮುದಾಯದ ಯಾರದೇ ಹೆರಿಗೆ ಇದ್ದರೂ ಕಮಲಮ್ಮನಿಗೆ ಒಂದು ಕರೆಯೊಂದು ಇರುತ್ತಿತ್ತು. ಅಷ್ಟರ ಮಟ್ಟಿಗೆ ಹೆರಿಗೆಯ ಬಾಣಂತಿಯ ಹಾರೈಕೆಯ ಬಗ್ಗೆ ಇವರ ಬಳಿ ಪಿ.ಎಚ್.ಡಿ ಮಾಡುವಷ್ಟು ಮಾಹಿತಿ ಇದೆ ಅಂದರೆ ತಪ್ಪಾಗುವುದಿಲ್ಲ. ಜೊತೆಗೆ ತಂದೆ ತಾಯಿ ಮೂಲಕ ನಾಟಿ ಔಷಧಿ ಕೊಡುವುದನ್ನು ಸಹ ಕಲಿತಿದ್ದಾರೆ.

ಬೆಟ್ಟ-ಗುಡ್ಡಗಳಲ್ಲಿ, ಕಾಡಿನಲ್ಲಿ ಸಿಗುವ ಸಸ್ಯೌಷಧಿಗಳನ್ನು ತಾವೇ ತಂದು ಕೂಡ ಕೂಸುಗಳಿಗೆ ಬರುವ ನೆಗಡಿ, ಜ್ವರ ಸೇರಿದಂತೆ ದೊಡ್ಡವರಿಗೂ ಇವರು ಔಷಧಿ ಕೊಡುತ್ತಾರೆ. ಆದರೆ ಇವರ ಕಲೆಯ ತಕ್ಕಂತೆ ಮಾಹಿತಿ ದೊರೆತಿಲ್ಲ ಹಾಗಾಗಿ ಕರ್ನಾಟಕ ಜಾನಪದ ಅಕಾಡೆಮಿ, ಯಕ್ಷಗಾನ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಕಲೆಯನ್ನು ಗುರುತಿಸಿ, ರೆಕಾರ್ಡ್ ಮಾಡಿಸಿ ಮುಂದಿನ ಪೀಳಿಗೆಗೆ ಪರಿಚಯಿಸ ಬೇಕಿದೆ. ಅದೇ ಆಶಯದೊಂದಿಗೆ ಪ್ರತಿಷ್ಠಿತ ಕರುನಾಡ ಕಣ್ಮಣಿ ಪ್ರಶಸ್ತಿಯನ್ನು ನೀಡಿ ಕಮಲಮ್ಮ ಅವರನ್ನು ಗೌರವಿಸಲು ಪವರ್ ಟಿವಿ ಹರ್ಷ ಪಡುತ್ತದೆ ಎಂದು ಪವರ್ ಟಿವಿಯ ವ್ಯವಸ್ಥಾಪಕ, ನಿರ್ದೇಶಕರಾದ ರಾಕೇಶ್ ಶೆಟ್ಟಿ ಹೇಳಿದರು. ವೇದಿಕೆಯಲ್ಲಿ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳು ಡಾ. ವೀರೇಂದ್ರ ಹೆಗ್ಗಡೆ, ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಹಾಗೂ ಪವರ್ ಟಿವಿಯ ಲೋಕೇಶ ಗೌಡ ಎಚ್. ಸಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ