🚨 BREAKING NEWS 🚨ವಡ್ಡರ್ಸೆ ದೇವಸ್ಥಾನ ವಿವಾದ ವಕೀಲ ಕೆ.ಯು. ಶೆಟ್ಟಿ ವಿರುದ್ಧ ಗ್ರಾಮಸ್ಥರ ಆಕ್ರೋಶ – ಬಹಿರಂಗ ಸವಾಲು..!
ವಡ್ಡರ್ಸೆ/ಬ್ರಹ್ಮಾವರ ಜ.03

ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲರಾದ ಶ್ರೀ ಕೆ.ಯು ಶೆಟ್ಟಿ ಅವರು ಇತ್ತೀಚಿಗೆ ಮಾಧ್ಯಮಗಳಲ್ಲಿ ನೀಡಿರುವ ಹೇಳಿಕೆಗಳು ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಹತಾಶೆ ಪ್ರಯತ್ನವಾಗಿದೆ ಎಂದು ವಡ್ಡರ್ಸೆ ಗ್ರಾಮಸ್ಥರು ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಗ್ರಾಮಸ್ಥರು ಕಾನೂನಾತ್ಮಕ ಪ್ರಶ್ನೆಗಳನ್ನು ಮುಂದಿಟ್ಟು ಕೆ.ಯು ಶೆಟ್ಟಿ ಅವರಿಗೆ ಬಹಿರಂಗ ಸವಾಲು ಎಸೆದಿದ್ದಾರೆ. ವರದಿಯ ಪ್ರಮುಖ ಅಂಶಗಳು ಇಲ್ಲಿವೆ.
🔴 ಅಧಿಕಾರಾವಧಿಯ ಬಗ್ಗೆ ಸುಳ್ಳು ಮಾಹಿತಿ..?
ಕೆ.ಯು ಶೆಟ್ಟಿಯವರು ತಾವು ಸುಮಾರು 13 ವರ್ಷಗಳ ಕಾಲ ದೇವಾಲಯದ ಆಡಳಿತ ನಡೆಸಿದ್ದಾಗಿ ಹೇಳಿ ಕೊಂಡಿದ್ದಾರೆ. ಆದರೆ, ನಿಯಮಾನುಸಾರ ಅಧಿಕೃತ ಅಧಿಕಾರಾವಧಿ ಕೇವಲ 3 ವರ್ಷಗಳು ಮಾತ್ರ. ಉಳಿದ 10 ವರ್ಷಗಳ ಕಾಲ ಯಾವ ಕಾನೂನಿನ ಅಡಿಯಲ್ಲಿ ಅಥವಾ ಯಾರ ಅನುಮತಿಯೊಂದಿಗೆ ಅಧಿಕಾರ ಚಲಾಯಿಸಿದ್ದಾರೆ ಎಂಬ ಬಗ್ಗೆ ಗ್ರಾಮಸ್ಥರು ಸ್ಪಷ್ಟೀಕರಣ ಕೇಳಿದ್ದಾರೆ.
🔴 ಮಣಿಕಲ್ ದೇವಸ್ಥಾನದ ಪ್ರಕರಣದ ನೆನಪು:-
ಈ ಹಿಂದೆ ಮಣಿಕಲ್ ದೇವಸ್ಥಾನದ ರಿಸೀವರ್ ಆಗಿದ್ದಾಗ, ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಇವರನ್ನು ಅಧಿಕಾರದಿಂದ ಕೆಳಗಿಳಿಸಲಾಗಿತ್ತು ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ. ಈಗ ವಡ್ಡರ್ಸೆ ದೇವಸ್ಥಾನದ ವಿಷಯದಲ್ಲೂ ಅಂತಹದ್ದೇ ನಡವಳಿಕೆ ತೋರುತ್ತಿರುವುದು ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
🔴 “ದಾಖಲೆ ನೀಡಲ್ಲ” ಎಂಬ ಬೇಜವಾಬ್ದಾರಿ ಹೇಳಿಕೆ:-
“ನಾನು ವಕೀಲನಾಗಿದ್ದು ಯಾವುದೇ ದಾಖಲೆ ನೀಡುವುದಿಲ್ಲ” ಎಂಬ ಕೆ.ಯು ಶೆಟ್ಟಿಯವರ ಹೇಳಿಕೆಗೆ ಗ್ರಾಮಸ್ಥರು ತಿರುಗೇಟು ನೀಡಿದ್ದಾರೆ. ನ್ಯಾಯಾಲಯದಲ್ಲಿ ದಾಖಲೆಗಳ ಆಧಾರದ ಮೇಲೆ ವಾದಿಸುವ ವಕೀಲರೇ, ದೇವಸ್ಥಾನದ ವಿಷಯದಲ್ಲಿ ದಾಖಲೆ ಕೊಡಲು ಹಿಂದೇಟು ಹಾಕುತ್ತಿರುವುದು ಅವರ ವೃತ್ತಿ ಧರ್ಮಕ್ಕೆ ವಿರುದ್ಧವಾಗಿದೆ. ಎಲ್ಲವೂ ಕೇವಲ ಆಣೆ-ಪ್ರಮಾಣದಿಂದಲೇ ನಿರ್ಧಾರ ವಾಗುವುದಾದರೆ ನ್ಯಾಯಾಲಯಗಳ ಅಗತ್ಯವೇನಿತ್ತು ಎಂದು ಜನತೆ ಪ್ರಶ್ನಿಸಿದ್ದಾರೆ.
🔴 ದೇವಸ್ಥಾನದ ಪಾವಿತ್ರ್ಯತೆ ರಕ್ಷಣೆಗೆ ಪಣ:-
ದೇವಸ್ಥಾನದ ಹಣ ದುರುಪಯೋಗ ಮತ್ತು ಅಧಿಕಾರ ಲಾಲಸೆಯ ಸುಳ್ಳು ಹೇಳಿಕೆಗಳಿಂದ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ತರಲಾಗುತ್ತಿದೆ. ಯಾವುದೇ ದುರುದ್ದೇಶದ ಆಡಳಿತಕ್ಕೆ ಅವಕಾಶ ನೀಡುವುದಿಲ್ಲ ಮತ್ತು ಪಾವಿತ್ರ್ಯತೆಯನ್ನು ಕಾಪಾಡಲು ಕಾನೂನಾತ್ಮಕ ಹೋರಾಟಕ್ಕೂ ಸಿದ್ಧ ಎಂದು ವಡ್ಡರ್ಸೆ ಜನತೆ ಒಕ್ಕೊರಲಿನಿಂದ ಸಾರಿದ್ದಾರೆ.
“ವೈಯಕ್ತಿಕ ಹಿತಾಸಕ್ತಿಗಾಗಿ ದೇವಸ್ಥಾನದ ಹೆಸರನ್ನು ಬಳಸಿ ಕೊಳ್ಳುವ ಪ್ರಯತ್ನ ನಡೆಯುತ್ತಿದೆ. ದಾಖಲೆಗಳಿಲ್ಲದ ಆರೋಪಗಳನ್ನು ನಾವು ಸಾರಾಸಗಟಾಗಿ ತಿರಸ್ಕರಿಸುತ್ತೇವೆ.”ವಡ್ಡರ್ಸೆ ಗ್ರಾಮಸ್ಥರು.
ವರದಿ:ಆರತಿ.ಗಿಳಿಯಾರು.ಉಡುಪಿ

