ವಿಜಯ ಮಹಾಂತರ ಸೇವೆ ನಾಡಿಗೆಲ್ಲ ಮಾದರಿ – ಕಾಶಪ್ಪನವರ.
ಹುನಗುಂದ ಸಪ್ಟೆಂಬರ್.20

ವಚನಕಾರರ ಆಶಯಗಳಿಗೆ ನಿಷ್ಠವಾದ ಹಾದಿಯಲ್ಲಿ ಸಾಗಿದ ನಮ್ಮ ವಿಜಯ ಮಹಾಂತ ಮಠದ ಸೇವೆ ನಾಡಿಗೆಲ್ಲ ಮಾದರಿ. ಅವರ ಆಶೀರ್ವಾದದ ಬೆಳಕು ನಮ್ಮೆಲ್ಲರ ಮೇಲೆ ಸದಾ ಇರಲಿ. ಶ್ರೀಮಠದ ಕಟ್ಟಡಕ್ಕೆ ಸೂಕ್ತ ನೆರವು ನೀಡುವೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ಅವರು ಇಲ್ಲಿನ ಬಸವ ಮಂಟಪದಲ್ಲಿ ನಡೆದ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ನಿವೃತ್ತ ಕೆಎಎಸ್ ಅಧಿಕಾರಿ ಡಾ.ಸದಾಶಿವ ಮರ್ಜಿ ಮಾತನಾಡಿ, ನಮ್ಮ ಭಾರತ ದೇಶವೂ ಸೇರಿದಂತೆ ಇಂದು ವಿಶ್ವದ ಅನೇಕ ದೇಶಗಳು ನಡೆಸುತ್ತಿರುವ ಆಡಳಿತದ ಮಾದರಿಗಳಲ್ಲಿ ಬಸವಾದಿ ಶರಣರ ಜನಮುಖಿ ಅಂಶಗಳು ಒಳಗೊಂಡಿವೆ. ಇದು ಮನುಕುಲದ ಉತ್ತಮಿಕೆಗೆ ಪೂರಕವಾಗಿದೆ. ಇದಕ್ಕೆಲ್ಲ ಬಸವಣ್ಣನ ವಿಚಾರಸರಣಿಯೇ ಮೂಲ.

ವಚನಕಾರರ ಬರಹಗಳ ಮೂಲ ಉದ್ದೇಶ ಸರ್ವರ ಬದುಕು ಹಸನಾಗಿರುವುದು ಮತ್ತು ಪ್ರಜಾಪ್ರಭುತ್ವದ ನೆಲೆಯಲ್ಲಿ ಬಾಳುವುದಾಗಿತ್ತು. ಶರಣರ ಆಶಯಗಳಿಗೆ ತಕ್ಕಂತೆ ನಡೆದ ನಿಷ್ಠ ಮಠಗಳಲ್ಲಿ ಇಳಕಲ್ಲ ಮಠ ಉನ್ನತ ಮಾದರಿಯನ್ನು ಹಾಕಿಕೊಂಡು ಸಾಗಿದೆ ಎಂದರು. ಗುರುಮಹಾಂತ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಶಿರೂರ ಡಾ.ಬಸವಲಿಂಗ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಸಂತೆಕೆಲೂರ ನವಲಿಂಗ ಶರಣರು, ದಾವಣಗೆರೆ ಬಸವ ಚೇತನ ಸ್ವಾಮಿಗಳು ಉಪಸ್ಥಿತರಿದ್ದರು. ತಿಂಗಳ ಪರ್ಯಂತ ಪ್ರವಚನ ಹೇಳಿದ ಸದ್ಗುರು ಮಾತಾ ನೀಲಾಂಬಿಕಾದೇವಿ, ಮುಖ್ಯ ಅತಿಥಿ ಡಾ.ಸದಾಶಿವ ಮರ್ಜಿ, ಸಂಗೀತ ಸೇವೆ ನೀಡಿದ ಸದಾಶಿವ ಬೆಣಗಿ, ಯಮನಪ್ಪ ಭಜಂತ್ರಿ ಅವರನ್ನು ಸತ್ಕರಿಸಲಾಯಿತು. ವಿ.ಮ.ಶಾಲೆಯ ಮಕ್ಕಳಿಂದ ವಚನಾಧಾರಿತ ನೃತ್ಯಗಳು ಪ್ರದರ್ಶನಗೊಂಡವು. ಈ ನಿಮಿತ್ತ ನಗರದಲ್ಲಿ ವಚನ ಕಟ್ಟುಗಳ ಮೆರವಣಿಗೆ ನಡೆಯಿತು. ಶ್ರೀಮಠದಲ್ಲಿ ಪ್ರಸಾದ ವ್ಯವಸ್ಥೆಯಾಗಿತ್ತು. ವೀರಣ್ಣ ಬಳೂಟಗಿ ಸ್ವಾಗತಿಸಿದರು. ಮಲ್ಲು ದರಗಾದ ವಂದಿಸಿದರು. ನಾಗರತ್ನ ಭಾವಿಕಟ್ಟಿ ನಿರೂಪಿಸಿದರು.
ತಾಲೂಕ ವರದಿಗಾರರು:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ