ಸಮಾನತೆಯನ್ನು ಸಾಧಿಸುವದೇ ಭಾವೈಕ್ಯತೆ. ಆರ್.ಎಸ್.ಪಟ್ಟಣಶೇಟ್ಟಿ.
ಇಂಡಿ ಮೇ.12
ದೇವರು ಕೊಟ್ಟಿದ್ದನ್ನು ಇನ್ನೊಬ್ಬರಿಗೆ ಕೊಡುವದು ಸತ್ಸಂಗ. ಹಿಂದಿನ ಕಾಲದ ಶರಣರು ತಮ್ಮ ವಚನಗಳಲ್ಲಿ ಭಾವೈಕ್ಯತೆಯ ಒಳ್ಳೆಯ ಭಾವನೆಗಳನ್ನು ಮೂಡಿಸುತ್ತಾ ಸಮಾನತೆಯನ್ನು ಸಾಧಿಸಿದ್ದಾರೆ. ಈ ರೀತಿ ಸಮಾನತೆಯನ್ನು ಸಾಧಿಸುವದೇ ಭಾವೈಕ್ಯತೆ ಎಂದು ಉಪನ್ಯಾಸಕ ಆರ್.ಎಸ್.ಪಟ್ಟಣಶೆಟ್ಟಿ ಹೇಳಿದರು.
ಪಟ್ಟಣದ ಶ್ರೀ ಬಸವರಾಜೇಂದ್ರ ದೇವಸ್ಥಾನದಲ್ಲಿ ಶ್ರೀ ಬಸವರಾಜೇಂದ್ರ ಸತ್ಸಂಗ ಸಮಿತಿ ಹಾಗೂ ಬಸವರಾಜೇಂದ್ರ ಗಜಾನನ ಮಂಡಳಿ ಸಹಯೋಗದಲ್ಲಿ ನಡೆದ 70 ನೇ ಹುಣ್ಣಿಮೆ ಬೆಳಕು ಕಾರ್ಯಕ್ರಮದಲ್ಲಿ ಶರಣರ ದೃಷ್ಟಿಯಲ್ಲಿ ಭಾವೈಕ್ಯತೆ ವಿಷಯ ಕುರಿತು ಉಪನ್ಯಾಸ ನೀಡಿದರು.
ಧರ್ಮ ಮತ್ತು ಸಂಸ್ಕೃತಿ ಹಾಳಾದರೆ ಎಲ್ಲವೂ ನಶಿಸಿ ಹೋಗುತ್ತದೆ. ನೆಲವೊಂದೆ, ಜಲವೊಂದೆ ಇದ್ದಾಗ ಶಿವಾಲಯಕ್ಕೆ ಮತಬೇಧವೇಕೆ ಎಂದು ಬಸವಣ್ಣನವರೇ ಪ್ರಶ್ನಿಸಿದ್ದಾರೆ. ಬಸವನ ನೆಲದಲ್ಲಿ ಇಂದು ಬಸವನೇ ಇಲ್ಲದಂತ ಪರಿಸ್ಥಿತಿ ಬಂದಿದೆ. ಬಸವಾದಿ ಶರಣರು ಹಾಕಿದ ಭಾವೈಕ್ಯತೆಯ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ ಎಂದರು.

ಅಧ್ಯಕ್ಷತೆ ವಹಿಸಿದ ನಿವೃತ್ತ ಪ್ರಾಚಾರ್ಯ ಐ.ಬಿ.ಸುರಪುರ, ಸಾನಿಧ್ಯ ವಹಿಸಿದ ಜೈನಾಪುರದ ಶ್ರೀ ರೇಣುಕಾ ಶಿವಾಚಾರ್ಯರರು , ಶಸಾಪ ಅಧ್ಯಕ್ಷ ಆರ್.ವಿ.ಪಾಟೀಲ, ಹೆಚ್.ಎಸ್.ಎಳೆಗಾಂವ, ಬಿ.ಎಸ್.ಪಾಟೀಲ, ಕೆ.ಜಿ.ನಾಟಿಕಾರ, ಎಸ್.ಎಸ್.ಈರನಕೇರಿ ಮಾತನಾಡಿದರು.
ಪಿಯುಸಿ ಪರೀಕ್ಷೆಯಲ್ಲಿ ಇಂಡಿ ತಾಲೂಕಿಗೆ ವಿಜ್ಞಾನ ವಿಭಾಗದಲ್ಲಿ ಶೇ. 97.5 % ಅಂಕ ಪಡೆದ ತಬಸುಮ್ ಮುಜಾವರ, ಕಲಾ ವಿಭಾಗದಲ್ಲಿ ಶೇ. 97.16 ಅಂಕ ಪಡೆದ ಪ್ರಿಯಾಂಕಾ ಮಾದರ , ವಾಣಿಜ್ಯ ವಿಭಾಗದಲ್ಲಿ ಶೇ. 95.83 ಅಂಕ ಪಡೆದ ಮತ್ತಪ್ಪ ಪಡಸಲಗಿ ವಿದ್ಯಾರ್ಥಿಗಳನ್ನು ಸತ್ಸಂಗ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ನಿವೃತ್ತ ಆರೋಗ್ಯ ಇಲಾಖೆ ಅಧಿಕಾರಿ ಜಿ.ಎಸ್.ವಾಲಿ ಪ್ರಾಯೋಜಕತ್ವ ವಹಿಸಿಕೊಂಡಿದ್ದರು. ಪ್ರೊ.ಎಂ.ಜೆ.ಪಾಟೀಲ, ಸಿ.ಎಂ.ಉಪ್ಪಿನ, ಶಿವಲಿಂಗಪ್ಪ ಪಟ್ಟದಕಲ್ಲ, ಹೂಗಾರ ಗುರುಗಳು, ಜಾಮಗೊಂಡಿ ಗುರುಗಳು, ಎಲ್.ಎಲ್ ಹಚಡದ ಮತ್ತಿತರಿದ್ದರು.
ಜಿಲ್ಲಾ ವರದಿಗಾರರು : ಬೀ.ಎಸ್.ಹೊಸೂರ್. ವಿಜಯಪುರ