ಸತ್ಯ, ವಾಸ್ತವ ವರದಿಗಳಿಗೆ ಆದ್ಯತೆ ನೀಡಿ ಜನರ ವಿಶ್ವಾಸ ಗಳಿಸಿ – ಎನ್.ಎಸ್ ಬೋಸರಾಜು ಕರೆ.
ರಾಯಚೂರು ಸೆ.18

ಹೈದ್ರಾಬಾದ್ ಕರ್ನಾಟಕ ದಿನ ಪತ್ರಿಕೆಯು ಜನರ ಕಷ್ಟ ಕಾರ್ಪಣ್ಯಗಳನ್ನು ಆಲಿಸಿ, ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆಯುವ ಮೂಲಕ ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗ ಬೇಕು. ಸತ್ಯ ಹಾಗೂ ವಾಸ್ತವ ವರದಿಗಳನ್ನು ನಿರ್ಭೀತಿ ಯಿಂದ ಪ್ರಕಟಿಸಿ ಜನರ ವಿಶ್ವಾಸ ಮತ್ತು ಪ್ರೀತಿಗೆ ಪಾತ್ರವಾಗಬೇಕು ಎಂದು ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್ ಬೋಸರಾಜು ಅವರು ಶುಭ ಹಾರೈಸಿ ಕರೆ ನೀಡಿದರು.
ಆ.15 ರಂದು ಹೈದ್ರಾಬಾದ್ ಕರ್ನಾಟಕ ದಿನ ಪತ್ರಿಕೆಯನ್ನು ರಾಜ್ಯಮಟ್ಟದ ಪತ್ರಿಕೆಯಾಗಿ ಪ್ರಾರಂಭೋತ್ಸವ ಹಾಗೂ ನೂತನ ವರ್ಣ ರಂಜಿತ ಮುದ್ರಾಲಯದ ಉದ್ಘಾಟನಾ ಸಮಾರಂಭ ನಡೆದಿತ್ತು. ಅನಿವಾರ್ಯ ಕಾರಣಗಳಿಂದ ಅಂದು ಕಾರ್ಯಕ್ರಮಕ್ಕೆ ಗೈರಾಗಿದ್ದ ಬೋಸರಾಜು ಅವರು ಗುರುವಾರ ಪತ್ರಿಕಾ ಕಚೇರಿಗೆ ಭೇಟಿ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನೂತನ ವರ್ಣರಂಜಿತ ಮುದ್ರಾಲಯದ ಯಂತ್ರೋಪಕರಣಗಳನ್ನು ವೀಕ್ಷಿಸಿದ ಅವರು, ಸಿಟಿಪಿ ಯಂತ್ರ ಸೇರಿದಂತೆ ಆಧುನಿಕ ಮುದ್ರಣ ವ್ಯವಸ್ಥೆಯ ಕಾರ್ಯವಿಧಾನದ ಕುರಿತು ಮಾಹಿತಿ ಪಡೆದರು.
ನಂತರ ಮಾತನಾಡಿದ ಅವರು, ಹೈದ್ರಾಬಾದ್ ಕರ್ನಾಟಕ ಭಾಗದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅತ್ಯಾಧುನಿಕ ಮುದ್ರಣ ತಂತ್ರಜ್ಞಾನ ಅಳವಡಿಸಿರುವುದು ಗಮನಾರ್ಹ ಬೆಳವಣಿಗೆ ಯಾಗಿದೆ. ತಂತ್ರಜ್ಞಾನದಲ್ಲಿ ಮುನ್ನಡೆಯುವುದರ ಜೊತೆಗೆ ಪತ್ರಿಕೆ ಜನಪರ ಆಶಯಗಳೊಂದಿಗೆ ಮುನ್ನಡೆಯಬೇಕು ಎಂದರು.
ರೈತರು, ಕಾರ್ಮಿಕರು, ಬಡವರು ಸೇರಿದಂತೆ ವಿವಿಧ ವರ್ಗಗಳ ಸಮಸ್ಯೆಗಳಿಗೆ ಪತ್ರಿಕೆ ಧ್ವನಿಯಾಗ ಬೇಕು. ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ಗಮನಕ್ಕೆ ಬಾರದ ಜನರ ಸಮಸ್ಯೆಗಳನ್ನು ಬೆಳಕಿಗೆ ತಂದು, ಅವುಗಳ ಪರಿಹಾರಕ್ಕೆ ಮಾರ್ಗದರ್ಶನ ನೀಡುವ ಕಾರ್ಯ ಪತ್ರಿಕೆ ಯಿಂದ ಆಗಬೇಕು ಎಂದು ಹೇಳಿದರು.
ಸತ್ಯ, ವಾಸ್ತವ ಹಾಗೂ ಜನಪರ ಪತ್ರಿಕೋದ್ಯಮಕ್ಕೆ ಆದ್ಯತೆ ನೀಡಿ, ಈ ಭಾಗದ ಜನರ ವಿಶ್ವಾಸಗಳಿಸುವ ಪತ್ರಿಕೆಯಾಗಿ ಹೈದ್ರಾಬಾದ್ ಕರ್ನಾಟಕ ದಿನ ಪತ್ರಿಕೆ ಮತ್ತಷ್ಟು ಬೆಳೆಯಲಿ ಎಂದು ಬೋಸರಾಜು ಶುಭ ಹಾರೈಸಿದರು.
ಸಂಪಾದಕರಿಂದ ಸನ್ಮಾನ:-
ಪತ್ರಿಕಾ ಕಚೇರಿಗೆ ಭೇಟಿ ನೀಡಿದ ಎನ್.ಎಸ್. ಬೋಸರಾಜು ಅವರನ್ನು ಹೈದ್ರಾಬಾದ್ ಕರ್ನಾಟಕ ದಿನಪತ್ರಿಕೆಯ ಸಂಪಾದಕ ಪಿ. ಚನ್ನಬಸವ ಬಾಗಲವಾಡ ಹಾಗೂ ಸಂಸ್ಥೆಯ ಸಿಬ್ಬಂದಿಯಿಂದ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ನೂತನ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಶಾಂತಪ್ಪ, ಶಿವಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

