🚨 BREAKING NEWS 🚨ಬ್ರಹ್ಮಾವರ, ನ್ಯಾಯ ಕೊಡಿಸ ಬೇಕಾದ ‘ಕರವೇ’ ಮುಖಂಡರಿಂದಲೇ ರೌಡಿಸಂ – ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ..!

ಉಡುಪಿ ಜ.20

ಸಂಕಷ್ಟದಲ್ಲಿರುವವರಿಗೆ ನ್ಯಾಯ ಕೊಡಿಸ ಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಮುಖಂಡರೇ ವ್ಯಕ್ತಿಯೊಬ್ಬರ ಮೇಲೆ ಸ್ಟೀಲ್ ರಾಡ್‌ ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘನ ಘೋರ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

📍 ಘಟನೆಯ ಹಿನ್ನೆಲೆ:-

ತೆಂಕನಿಡಿಯೂರು ನಿವಾಸಿ ಕಿರಣ್ ಪಿಂಟೋ ಎಂಬುವವರ ಮೇಲೆ ಈ ಹಲ್ಲೆ ನಡೆದಿದೆ. ಕರವೇ ಮುಖಂಡರಾದ ಸುಜೀತ್ ಡಿಸೋಜಾ ಹಾಗೂ ಸುಷ್ಮಾ ಗೌಡ ಅವರು ಕಿರಣ್ ಪಿಂಟೋ ಅವರ ಪರಿಚಯಸ್ಥರಾಗಿದ್ದರು. ಸುಷ್ಮಾ ಗೌಡ ಅವರ ಬಗ್ಗೆ ಕೇಳಿ ಬಂದ ತಪ್ಪು ಆರೋಪಗಳ ಕುರಿತು ಸ್ಪಷ್ಟನೆ ನೀಡಲು ಮತ್ತು ‘ಕೊರಗಜ್ಜನ’ ಮುಂದೆ ಪ್ರಮಾಣ ಮಾಡಲು ಕಿರಣ್ ಅವರನ್ನು ಜನವರಿ 18 ರ ರಾತ್ರಿ ಬ್ರಹ್ಮಾವರದ ಚಾಂತಾರು ಗ್ರಾಮದ ಕುಬೇರ ಬಾರ್ ಸಮೀಪಕ್ಕೆ ಕರೆಸಿ ಕೊಳ್ಳಲಾಗಿತ್ತು.

⚔️ ನಡೆದಿದ್ದೇನು..?

ದೂರುದಾರರ ಪ್ರಕಾರ, ಸ್ಥಳಕ್ಕೆ ಕಿರಣ್ ಆಗಮಿಸುತ್ತಿದ್ದಂತೆಯೇ ಅಲ್ಲಿ ಹೊಂಚು ಹಾಕಿ ಕುಳಿತಿದ್ದ ತಂಡ ದಾಳಿ ನಡೆಸಿದೆ.

ಕರವೇ ಮುಖಂಡರ ಉಪಸ್ಥಿತಿ:-

ಕರವೇ ತಾಲೂಕು ಅಧ್ಯಕ್ಷ ಸುಜೀತ್ ಡಿಸೋಜಾ, ಜಿಲ್ಲಾ ಸಂಚಾಲಕಿ ಸುಷ್ಮಾ ಗೌಡ ಮತ್ತು ಜಿಲ್ಲಾ ಉಪಾಧ್ಯಕ್ಷೆ ಅಶ್ವಿನಿ ನಾಯ್ಕ ಸ್ಥಳದಲ್ಲಿದ್ದರು.

ಬರ್ಬರ ಹಲ್ಲೆ:-

ಸುಜೀತ್ ಮತ್ತು ಸುಷ್ಮಾ ಅವರು ಕಿರಣ್ ಅವರ ಕೈಗಳನ್ನು ಭದ್ರವಾಗಿ ಹಿಡಿದುಕೊಂಡರೆ, ಆರೋಪಿ ಪ್ರವೀಣ್ ಕಾರಿನಲ್ಲಿದ್ದ ಸ್ಟೀಲ್ ರಾಡ್‌ನಿಂದ ಕಿರಣ್ ಅವರ ಎಡ ಭುಜಕ್ಕೆ ಬಲವಾಗಿ ಹೊಡೆದು ಜೀವಹಾನಿ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ.

🏥 ಪ್ರಸ್ತುತ ಸ್ಥಿತಿ:-

ತೀವ್ರವಾಗಿ ಗಾಯ ಗೊಂಡಿರುವ ಕಿರಣ್ ಪಿಂಟೋ ಅವರು ಸದ್ಯ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಯ ತೀವ್ರತೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

⚖️ ಕಾನೂನು ಕ್ರಮ:-

ಈ ಘಟನೆಗೆ ಸಂಬಂಧಿಸಿದಂತೆ ಕಿರಣ್ ಪಿಂಟೋ ನೀಡಿದ ದೂರಿನನ್ವಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಸಂಘಟನೆಯ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿ ಕೊಳ್ಳುವ ಇಂತಹ ಕೃತ್ಯಗಳು ಸಾಮಾಜಿಕ ಜಾ ಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸಂಘಟನೆಯ ನೈತಿಕತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button