ವಚನಗಳಂತೆ ಬದುಕನ್ನು ರೂಪಿಸಿ ಕೊಳ್ಳಬೇಕು – ಡಾ, ಬಸವರಾಜ ಸಾದರ.
ಹುಬ್ಬಳ್ಳಿ ಡಿ.29

ವಚನ ಸಾಹಿತ್ಯ ಇಂದಿಗೂ ಜೀವಂತವಾಗಿದೆ. ವಚನಗಳಂತೆ ಬದುಕನ್ನು ರೂಪಿಸಿ ಕೊಳ್ಳಬೇಕು. ರಾಜಕಾರಣ ಸೃಷ್ಟಿಸುತ್ತಿರುವ ಜಾತಿ, ಧರ್ಮಗಳ ಕಿತ್ತಾಟದಿಂದ ದೂರ ವಿರಬೇಕು ಎಂದು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ, ಬಸವರಾಜ ಸಾದರ ಹೇಳಿದರು.
ಇಲ್ಲಿನ ಪಿ.ಸಿ ಜಾಬಿನ್ ವಿಜ್ಞಾನ ಮಹಾ ವಿದ್ಯಾಲಯದ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಿದ್ದ ಡಾ, ಸಂಗಮೇಶ ಹಂಡಗಿ ಸಾಹಿತ್ಯ ಪ್ರತಿಷ್ಠಾನದಿಂದ ಸಂಗಮ ಸಿರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಡಾ, ಸಂಗಮೇಶ ಹಂಡಿಗಿ ಹಾಗೂ ಅವರ ತಲೆಮಾರಿನವರು ಆದರ್ಶ ಬದುಕು ಸಾಗಿಸಿದ್ದಾರೆ. ಹಿರಿಯರನ್ನು ಹಾಗೂ ಸಾಧಕರನ್ನು ಇಂತಹ ಕಾರ್ಯಕ್ರಮಗಳ ಮೂಲಕ ನೆನಪಿಸಿ ಕೊಳ್ಳಬೇಕು. ಜಗತ್ತಿಗೆ ನೋವಾದರೆ ಅದಕ್ಕೆ ಪರಿಹಾರ ಸೂಚಿಸುವುದು ವಚನ ಸಾಹಿತ್ಯ. ವಚನಗಳಂತೆ ಬದುಕನ್ನು ರೂಪಿಸಿ ಕೊಳ್ಳದಿದ್ದರೆ ಶರಣರನ್ನು ನಾವೇ ಸಾಯಿಸಿದಂತೆ ಎಂದರು.
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ, ಶಶಿಕಾಂತ ಪಟ್ಟಣ ಅವರು ಸಂಗಮ ಸಿರಿ ಪ್ರಶಸ್ತಿ ಸ್ವೀಕರಿಸಿ ನಂತರ ಮಾತನಾಡಿ, ಮನುಷ್ಯನಿಗೆ ಪ್ರಮುಖವಾಗಿ ಮಾನವ ಮೌಲ್ಯಗಳು ಇರಬೇಕು. ಪ್ರತಿಯೊಬ್ಬರು ಸಮಾಜದ ಋಣ ತೀರಿಸಬೇಕು. ಬಸವಣ್ಣ ಸೇರಿದಂತೆ ಎಲ್ಲಾ ವಚನಕಾರರನ್ನು ಇನ್ನಷ್ಟು ತಿಳಿದು ಕೊಳ್ಳಬೇಕು. ವಚನಗಳಲ್ಲಿನ ವೈಜ್ಞಾನಿಕ ತಳಹದಿ ಮೇಲೆ ಉಪನ್ಯಾಸಗಳು ನಡೆಯಬೇಕು. ವಚನಗಳನ್ನು ಅರ್ಥೈಸಿ ಕೊಳ್ಳಲು ಪಂಡಿತರಾಗ ಬೇಕೆಂದಿಲ್ಲ. ಆದರೆ ಅವುಗಳನ್ನು ಅರಿತು ಕೊಳ್ಳುವ ತಾಳ್ಮೆ ವ್ಯವದಾನ ಬೇಕಾಗುತ್ತದೆ ಎಂದರು.

ಜಿ.ಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿ, ೪೬ ಕೃತಿಗಳನ್ನು ಬರೆದಿರುವ ಸಂಗಮೇಶ ಹಂಡಿಗಿ ಅವರು ಇಂದಿಗೂ ಮುಂದಿಗೂ ಜೀವಂತ ವಾಗಿರುತ್ತಾರೆ. ಅವರ ಮಾಡಿಕೊಂಡು ಬಂದಿರುವ ಕಾರ್ಯವನ್ನು ಅವರ ಕುಟುಂಬ ಮುಂದೊರೆಸಿ ಕೊಂಡು ಹೊರಟಿದ್ದಾರೆ ಎಂದರು. ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಾ, ಬಂಡು ಕುಲಕರ್ಣಿ ಮಾತನಾಡಿ, ಇಂದಿನ ದಿನಮಾನಕ್ಕೆ ಸಾಹಿತ್ಯ ಚಟುವಟಿಕೆ ಅಗತ್ಯವಾಗಿದೆ. ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ರಾಜ್ಯ ಮಟ್ಟದಲ್ಲಿ ನೀಡುತ್ತಿರುವ ಪ್ರಶಸ್ತಿ ರಾಷ್ಟ್ರ ಮಟ್ಟಕ್ಕೆ ಬೆಳೆಯಲಿ. ಇನ್ನಷ್ಟು ಸಾಹಿತ್ಯಕ್ಕೆ ಚಟುವಟಿಕೆ ನಡೆಯಲಿ ಎಂದು ಆಶಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಗೋವಿಂದಪ್ಪ ಗೌಡಪ್ಪಗೋಳ ಮಾತನಾಡಿ ಸಾಹಿತಿ ಹಾಗೂ ಸಾಹಿತ್ಯಕ್ಕೆ ಸಾವಿಲ್ಲ. ನಡೆ ನುಡಿ ಒಂದಾಗಿರ ಬೇಕು. ಸ್ವಚ್ಛ ಸಮಾಜ ನಿರ್ಮಾಣವಾಗ ಬೇಕು. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಸಂಗಮೇಶ ಹಂಡಿಗಿ ಅವರ ಕೃತಿಗಳನ್ನು ಮರು ಮುದ್ರಣ ಮಾಡುವ ಕಾರ್ಯಕ್ಕೆ ಮುಂದಾಗುವುದಾಗಿ ಹೇಳಿದರು.

ಪ್ರತಿಷ್ಠಾನದ ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ ಮಾತನಾಡಿ, ಪ್ರತಿ ವರ್ಷವೂ ಪಾರದರ್ಶಕವಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದೆ. ಪ್ರಶಸ್ತಿಗೆ ಬರುವ ಕೃತಿಗಳಲ್ಲಿ ಪ್ರಾಮಾಣಿಕವಾಗಿ ಆಯ್ಕೆ ಮಾಡಲಾಗುತ್ತಿದೆ. ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಹಂಡಗಿ ಪ್ರತಿಷ್ಠಾನ ಕಾರ್ಯ ನಿರ್ವಹಿಸುತ್ತದೆ ಎಂದರು.
ರಾಯನಾಳ ರೇವಣಸಿದ್ದೇಶ್ವರ ಮಠದ ಶ್ರೀ ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ ಬಸವಣ್ಣನವರು ಮಾನವೀಯ ಮೌಲ್ಯಗಳನ್ನು ಸಾರಿದ್ದಾರೆ. ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಬಸವ ಧರ್ಮವನ್ನು ಪ್ರತಿಯೊಬ್ಬರು ಆಚರಿಸ ಬೇಕು. ಸತ್ಕಾರ್ಯಗಳನ್ನು ರೂಢಿಸಿ ಕೊಳ್ಳಬೇಕು ಎಂದರು. ಸಾಹಿತಿ ಮಹಾಂತಪ್ಪ ನಂದೂರು ಮಾತನಾಡಿದರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ, ವೀರೇಶ ಹಂಡಿಗಿ ಸ್ವಾಗತಿಸಿದರು. ಡಾ, ಬಿ.ಎಸ್ ಮಾಳವಾಡ ಪರಿಚಯಿಸಿದರು. ಪ್ರೊ. ಗುರು ಹಂಜಗಿಮಠ ನಿರೂಪಿಸಿದರು. ರವೀಂದ್ರ ರಾಮದುರ್ಗಕರ್ ವಂದಿಸಿದರು. ಪ್ರತಿಷ್ಠಾನದ ಡಾ, ಪ್ರಭು ಗಂಜಿಹಾಳ, ಜಿ. ಎಸ್ ಅಂಗಡಿ, ಸಂಭಾಜಿ ಕಲಾಲ್ ಇತರರು ಪಾಲ್ಗೊಂಡಿದ್ದರು.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಡಾ, ಪ್ರಭು ಗಂಜಿಹಾಳ ಗದಗ

