ಶಿಷ್ಯನಲ್ಲಿ ಜ್ಞಾನ ಪ್ರಚೋದನೆಯನ್ನುಂಟು ಮಾಡುವವನೇ ಸದ್ಗುರು – ಮಾತಾಜೀ ತ್ಯಾಗಮಯೀ.

ಚಳ್ಳಕೆರೆ ಆ.02

ಶಿಷ್ಯನಲ್ಲಿ ಜ್ಞಾನ ಪ್ರಚೋದನೆಯನ್ನುಂಟು ಮಾಡುವವನೇ ಸದ್ಗುರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗದ ದಿವ್ಯ ಸಾನಿಧ್ಯ ವಹಿಸಿ ಅವರು “ಗುರು ಪೂರ್ಣಿಮೆ” ಯ ಬಗ್ಗೆ ವಿಶೇಷ ಪ್ರವಚನ ನೀಡಿದರು.

ಗುರು ಪೂರ್ಣಿಮೆಯನ್ನು ವ್ಯಾಸ ಪೂರ್ಣಿಮೆಯಾಗಿ ಆಚರಿಸಲಾಗುತ್ತದೆ.

ನಾಲ್ಕು ವೇದಗಳನ್ನು ವಿಂಗಡಿಸಿ ವೇದ ವ್ಯಾಸರಾಗಿ ಉಪ ನಿಷತ್ತುಗಳು, ಬ್ರಹ್ಮಸೂತ್ರಗಳು, ಹದಿನೆಂಟು ಪುರಾಣಗಳು, ಒಂದು ಲಕ್ಷ ಶ್ಲೋಕಗಳನ್ನು ಒಳಗೊಂಡ ಮಹಾ ಭಾರತವನ್ನು ಬರೆಯುವ ಮೂಲಕ ಭಾರತೀಯ ವೇದಾಂತ ಸಾಹಿತ್ಯಕ್ಕೆ ವ್ಯಾಸ ಮಹರ್ಷಿಗಳ ಕೊಡುಗೆ ಅನುಪಮವಾದದ್ದು ಎಂದು ಹೇಳಿದ ಅವರು ಶಿಷ್ಯನ ಆಧ್ಯಾತ್ಮಿಕ ಜೀವನದಲ್ಲಿ ಸದ್ಗುರುವಿನ ಪಾತ್ರ ಮಹತ್ವದ್ದು ಎಂದು ವಿವರಿಸಿದರು.

ಸತ್ಸಂಗದ ಆರಂಭದಲ್ಲಿ ಶ್ರೀಮತಿ ಗೀತಾ ಪ್ರಕಾಶ್ ಅವರಿಂದ ವಿಶೇಷ ಭಜನೆ ನಡೆದರೆ ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ಜ್ಯೋತಿ ನಾಗರಾಜ್, ಗೀತಾ ರವೀಂದ್ರನಾಥ, ಜಿ ಯಶೋಧಾ ಪ್ರಕಾಶ್, ಬಿ ಸುಮನಾ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಮಂಜುಳ, ಯತೀಶ್ ಎಂ ಸಿದ್ದಾಪುರ, ಪ್ರವಲ್ಲಿಕಾ, ರಶ್ಮಿ, ಯಶಸ್ವಿ, ಗೀತಾ, ವೆಂಕಟೇಶ್ ರೆಡ್ಡಿ, ಡಿ ಕಾವೇರಿ, ಅಂಬುಜಾ, ಮನೋಹರ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Check Also
Close
Back to top button