ಗೋಲಗೇರಿ ಗೊಲ್ಲಾಳೇಶ್ವರ ಅದ್ದೂರಿ – ಜಾತ್ರಾ ಮಹೋತ್ಸವ
ಗೋಲಗೇರಿ ಏ.12

ಶ್ರೀ ಶೈಲ ಮಲ್ಲಿಕಾರ್ಜುನನನ್ನು ತನ್ನ ಭಕ್ತಿಯಿಂದ ಒಲಿಸಿ ಕೊಂಡು ತಾನಿರುವ ಕ್ಷೇತ್ರವೇ ಎರಡನೇ ಶ್ರೀಶೈಲ ಎಂಬ ಪ್ರಖ್ಯಾತ ಗೊಳಿಸಿದ ಯೋಗಿ ಸಿಂದಗಿ ತಾಲೂಕಿನ ಶ್ರೀ ಸುಕ್ಷೇತ್ರ ಗೋಲಗೇರಿ ಗೊಲ್ಲಾಳೇಶ್ವರ ಜಾತ್ರಾ ರಥೋತ್ಸವ ಶನಿವಾರ ಸಾಯಂಕಾಲ 6 ಗಂಟೆಗೆ ಅದ್ದೂರಿಯಾಗಿ ನೆರವೇರಿತು. ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳ ಭಕ್ತಾದಿಗಳು ಬೆಳಗಿನ ಜಾವ ಪಾದಯಾತ್ರೆ ಮೂಲಕ ಆಗಮಿಸಿದರು. ಇನ್ನೂ ನಸಗಿನ ಜಾವ ಸಾವಿರಾರು ಭಕ್ತರು ದೀರ್ಘ ದಂಡ ನಮಸ್ಕಾರ ಹಾಕಿ ಹರಕೆ ತೀರಿಸಿ ಕೊಂಡರು. ಧರ್ಮದರ್ಶಿಗಳು ವರಪುತ್ರ ಹೊಳೆಪ್ಪ ದೇವರಮನಿ ಹಾಗೂ ಸಿದ್ದರಾಮ ದೇವರಮನಿ ನೇತೃತ್ವದಲ್ಲಿ ಬೆಳಿಗ್ಗೆ ರುದ್ರಾಭಿಷೇಕ ಹಾಗೂ ವಿಶೇಷ ಅಲಂಕಾರ ಪೂಜೆ ಮಾಡಲಾಯಿತು. ಭಕ್ತಾದಿಗಳು ಸುಡು ಬಿಸಿಲನ್ನು ಲೆಕ್ಕಿಸದೆ ಸರದಿ ಸಾಲಿನಲ್ಲಿ ನಿಂತು ಗೊಲ್ಲಾಳೇಶ್ವರ ದರ್ಶನ ಪಡೆದು ಪುನೀತರಾದರು.

ದೇವಸ್ಥಾನಕ್ಕೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.ಸಂಜೆ ರಥದಲ್ಲಿ ಗೊಲ್ಲಾಳೇಶ್ವರನ ಮೂರ್ತಿ ಇಟ್ಟು ಪಂಚ ಲೋಹದ ಕಳಸಾರೋಹಣ, ಕಟ್ಟಿ ಭೂಚಕ್ರ ಕೊಡೆ ಏರಿಸಿದ ನಂತರ ಸಕಲ ವಾದ್ಯ ವೈಭವಗಳೊಂದಿಗೆ ಗೊಲ್ಲಾಳೇಶ್ವರ ಭವ್ಯ ರಥಕ್ಕೆ ಚಾಲನೆ ನೀಡಿದರು. ಭಕ್ತರು ರಥಕ್ಕೆ ಉತ್ತತ್ತಿ ಬಾಳೆ ಹಣ್ಣು ತೆಂಗಿನಕಾಯಿ ಸಮರ್ಪಿಸಿದರು. ಆಂಧ್ರ ಪ್ರದೇಶ, ಮಹಾರಾಷ್ಟ್ರ, ಸೇರಿದಂತೆ ರಾಜ್ಯದ ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಜನ ಭಕ್ತಾದಿಗಳು ಪಾಲ್ಗೊಂಡಿದ್ದರು. ಜಾತ್ರೆಗೆ ಬಂದ ಭಕ್ತಾದಿಗಳ ಸಲುವಾಗಿ ಅಲ್ಲಲ್ಲಿ ಕುಡಿಯುವ ನೀರಿನ ಹಾಗೂ ಮಹಾ ಪ್ರಸಾದ ವ್ಯವಸ್ಥೆಯು ಕೂಡ ದಾಸೋಹಿಗಳು ಮಾಡಿದ್ದರು. ರಾತ್ರಿ 10 ಗಂಟೆಗೆ ಕಲಾ ಸಿಂಚನ ಮೆಲೋಡಿಯಸ್ ರವರ ವತಿಯಿಂದ ರಸ ಮಂಜರಿ ಕಾರ್ಯಕ್ರಮ ನಡೆಸಿ ಕೊಟ್ಟರು.

ಸಿಂದಗಿಯ ಸಿಪಿಐ ನಾನಾಗೌಡ ಪೊಲೀಸ್ ಪಾಟೀಲ್, ಸಿಂದಗಿ ಪಿಎಸ್ಐ ಆರಿಫ್ ಮುಶಾಪಿರ ಝಳಕಿ ಠಾಣೆ ಪಿಎಸ್ಐ ಎಸ್ ಬಿ ಪಾಟೀಲ್, ಕಲಕೇರಿಯ ಠಾಣೆ ಪಿಎಸ್ಐ ಸುರೇಶ್ ಮಂಟೂರ್ ಹಾಗೂ ಆಲಮೇಲ ಸಿಂದಗಿ ದೇವರ ಹಿಪ್ಪರಗಿ, ಕಲಕೇರಿ ಎಲ್ಲಾ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ