ಗ್ರಾಮದಲ್ಲಿ ಮಳೆಗಾಗಿ ಆರಾಧ್ಯ ದೈವ ಶ್ರೀ ಮಾರಿಕಾಂಬ ದೇವಿ ದೇವಸ್ಥಾನದಲ್ಲಿ – ಸಪ್ತ ಭಜನೆ ಕಾರ್ಯಕ್ರಮ ಜರಗಿತು.
ನಕ್ಕುಂದಿ ಜು.14

ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿದ ಬೆಳೆಗಳನ್ನು ರಕ್ಷಿಸಲು ಉತ್ತಮ ಮಳೆಗಾಗಿ ಪ್ರಾರ್ಥಿಸಿ, ಮಾನ್ವಿ ತಾಲೂಕಿನ ನಕ್ಕುಂದಿ ಗ್ರಾಮದಲ್ಲಿ ಎರಡು ದಿನಗಳ ನಿರಂತರ ಸಪ್ತ ಭಜನೆ ಕಾರ್ಯಕ್ರಮ ಆರಂಭಿಸಲಾಗಿದೆ.
ಗ್ರಾಮದ ಆರಾಧ್ಯ ದೈವ ಶ್ರೀ ಮಾರಿಕಾಂಬ ದೇವಿ ದೇವಸ್ಥಾನದಲ್ಲಿ ಗ್ರಾಮಸ್ಥರು ಒಗ್ಗೂಡಿ ಈ ವಿಶೇಷ ಪ್ರಾರ್ಥನೆಯನ್ನು ಹಮ್ಮಿಕೊಂಡಿದ್ದಾರೆ. ಜೂನ್-ಜುಲೈ ತಿಂಗಳಲ್ಲಿ ಸುರಿಯ ಬೇಕಿದ್ದ ಮಳೆ ಸರಿಯಾಗಿ ಆಗದ ಕಾರಣ, ಬಿತ್ತನೆ ಮಾಡಿದ ಹತ್ತಿ, ತೊಗರಿ, ಸಜ್ಜೆ ಸೇರಿದಂತೆ ಇತರೆ ಬೆಳೆಗಳು ಒಣಗುವ ಹಂತಕ್ಕೆ ತಲುಪಿವೆ.
ಸಾವಿರಾರು ರೂಪಾಯಿ ಸಾಲ ಮಾಡಿ ಬಿತ್ತನೆ ಮಾಡಿರುವ ರೈತರು ಆತಂಕದಲ್ಲಿದ್ದಾರೆ. ಬೆಳೆ ಉಳಿಸಿ ಕೊಳ್ಳಲು ಕೊಳವೆ ಬಾವಿಯ ನೀರೂ ಸಾಲುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ.
ಸಪ್ತ ಭಜನೆ ಕಾರ್ಯಕ್ರಮದಲ್ಲಿ ಯುವಕರು, ಹಿರಿಯರು ಸೇರಿದಂತೆ ನೂರಾರು ಭಕ್ತರು ಭಾಗವಹಿಸಿ, ಹಗಲು-ರಾತ್ರಿ ಎನ್ನದೆ ಭಜನೆ, ಕೀರ್ತನೆ ಮೂಲಕ ವರುಣ ದೇವನನ್ನು ಪ್ರಾರ್ಥಿಸುತ್ತಿದ್ದಾರೆ.
“ರೈತರ ಸಂಕಷ್ಟ ಅರಿತ ದೇವಿ ಕೃಪೆ ತೋರುತ್ತಾಳೆ. ಶೀಘ್ರದಲ್ಲೇ ಉತ್ತಮ ಮಳೆಯಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಲಿದೆ” ಎಂದು ಗ್ರಾಮಸ್ಥರು ವಿಶ್ವಾಸವನ್ನು ವ್ಯಕ್ತಪಡಿಸಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

