ರಾಯಚೂರನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಲು ಕೆ.ಆರ್.ಎಸ್ ದ ಮನವಿ.
ಮಾನ್ವಿ ಜು.18

ರಾಯಚೂರು ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆಯಾಗಿ ಸರ್ಕಾರ ಘೋಷಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿ ಆಗ್ರಹಿಸಿದೆ. ಮನವಿ ಸಲ್ಲಿಸಿ ತಾಲೂಕು ಅಧ್ಯಕ್ಷರಾದ ಶಿವರಾಜ ದೊಡ್ಡಿ ಮಾತನಾಡಿದರು.
ಈ ವರ್ಷ ಎಲ್ನಿನೋ ಚಂಡಮಾರುತ ಕಾರಣದಿಂದ ದೇಶದಲ್ಲಿ ಮಳೆ ಕೊರತೆ ಆಗುತ್ತದೆ ಎಂದು ಕೇಂದ್ರ ಸರ್ಕಾರದ ಹವಾಮಾನ ಇಲಾಖೆ ಈಗಾಗಲೇ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯನ್ನು ಬರದ ಜಿಲ್ಲೆ ಎಂದು ಘೋಷಿಸಿ ಪ್ರತಿ ತಾಲೂಕಿಗೆ ನೂರು ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು.
ಸರ್ಕಾರ ವಿದ್ಯುತ್ ವಲಯವನ್ನು ಟಾಟಾ ಕಂಪನಿಗೆ ಗುತ್ತಿಗೆ ಕೊಡುವುದನ್ನು ಈ ಕೂಡಲೇ ನಿಲ್ಲಿಸಿ ಖಾಸಗೀಕರಣ ಮಾಡುವ ತೀರ್ಮಾನವನ್ನು ಕೈಬಿಡಬೇಕು.
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕಾಯ್ದೆ ತಿದ್ದುಪಡಿಯಿಂದ ಈ ವರ್ಷ ಜಿಲ್ಲೆಯಲ್ಲಿ ಕಾಮಗಾರಿ ನಡೆದಿರುವುದಿಲ್ಲ, ಈ ಕಾರಣದಿಂದ ಅನೇಕ ಗ್ರಾಮೀಣ ಭಾಗದ ಜನರು ನಗರಗಳಿಗೆ ಗೂಳೆ ಹೋಗುತ್ತಿದ್ದು ಅದನ್ನು ತಪ್ಪಿಸಬೇಕು.
ನರೇಗಾ ವೈಫಲ್ಯದ ಕಾರಣದಿಂದ 2002 ರಲ್ಲಿ ಜಾರಿಯಲ್ಲಿದ್ದ ಕೂಲಿಗಾಗಿ ಕಾಳು ಯೋಜನೆ ಜಾರಿ ಗೊಳಿಸಿ ಗ್ರಾಮೀಣ, ಪಟ್ಟಣ, ನಗರ ಪ್ರದೇಶಗಳ ಜನರಿಗೆ ಉದ್ಯೋಗ ಕೊಡಬೇಕು.
ಮನೆ ಮನೆಗೆ ಜಲಧಾರೆ ಜೆ.ಜೆ.ಎಂ ಹಾಗೂ ಇತರೆ ಕುಡಿಯುವ ನೀರಿನ ಯೋಜನೆಯಲ್ಲಿ ಸಂಪೂರ್ಣ ಭ್ರಷ್ಟಾಚಾರ ನಡೆದಿದ್ದು ತನಿಖೆ ನಡೆಸಬೇಕು. ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ನೂರಾರು ಕೋಟಿ ರೂಪಾಯಿ ಹಣವನ್ನು ವಾಪಸ್ ಪಡೆಯಬೇಕು.
ಜಿಲ್ಲೆಯಲ್ಲಿ ಕೆಟ್ಟು ಹೋಗಿರುವ ನೂರಾರು ಬೋರವೆಲ್ಗಗಳನ್ನು ಹಾಗೂ ಶುದ್ದ ಕುಡಿಯುವ ನೀರಿನ ಘಟಕಗಳನ್ನು ರಿಪೇರಿ ಮಾಡಿ ಸಮಪರ್ಕವಾಗಿ ಕುಡಿಯುವ ನೀರಿನ ಘಟಕಗಳ ಅನುಕೂಲ ಕಲ್ಪಿಸಿ, ಗ್ರಾಮೀಣ ಪ್ರದೇಶಗಳಿಗೆ ವಾಹನಗಳ ಮೂಲಕ ನೀರು ಸರಬರಾಜು ಮಾಡಬೇಕು.
ಮೇ ತಿಂಗಳಲ್ಲಿ ಜಿಲ್ಲೆಯ ಕೆಲವು ಭಾಗದಲ್ಲಿ ಅಲ್ಪ-ಸ್ವಲ್ಪ ಮಳೆಯಾಗಿದ್ದರಿಂದ ರೈತರು ಬಿತ್ತನೆ ಕಾರ್ಯ ಮಾಡಿದ್ದರೂ, ಆದರೆ ಒಂದುವರೆ ತಿಂಗಳಿಂದ ಮಳೆ ಬಾರದೆ ಇರುವುದರಿಂದ ಬಿತ್ತನೆ ಮಾಡಿದ ಬೆಳೆ ಒಣಗಿ ಹೋಗಿವೆ.
ಹಾಗಾಗಿ 05-00 ಎಕರೆಗಿಂತ ಕಡಿಮೆ ಇರುವ ಸಣ್ಣ ರೈತರಿಗೆ ಪ್ರತಿ ಎಕರೆಗೆ ರೂ. 25,000/-ಗಳ ಪರಿಹಾರ ಕೊಡಬೇಕು. ರೈತರು ಕೃಷಿಗಾಗಿ ಸ್ಥಳೀಯ ಮತ್ತು ರಾಷ್ಟ್ರೀಯ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು.
ಗೋ ಶಾಲೆ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುವುದರಿಂದ ಈಗಿದ್ದ ಗೋ ಶಾಲೆಯನ್ನು ಕೈಬಿಟ್ಟು ಜಾನುವಾರುಗಳಿಗೆ ಮನೆ ಮನೆಗೆ ಮೇವು ಸರಬರಾಜು ಮಾಡಲು ಅನುಕೂಲ ಕಲ್ಪಿಸಬೇಕು. ಇದಕ್ಕೆ ಕಾಲ ವಿಳಂಬ ಮಾಡಿದರೆ ಉಗ್ರ ಚಳುವಳಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮಾನ್ವಿ ತಾಲೂಕು ಅಧ್ಯಕ್ಷರಾದ ಶಿವರಾಜ ದೊಡ್ಡಿ, ಕಾರ್ಯದರ್ಶಿ ಮಲ್ಲೇಶ ಮದ್ಲಾಪೂರ, ಪ್ರಧಾನ ಕಾರ್ಯದರ್ಶಿ ಗುರುರಾಜ ಸುಂಕೇಶ್ವರ, ಜಿಲ್ಲಾ ಕಾರ್ಯಾದರ್ಶಿ ಹುಲಿಗೆಪ್ಪ ಸಿರವಾರ, ಜಿಲ್ಲಾ ಸಮಿತಿ ಸಂಚಾಲಕರಾದ ನಾಗರಾಜ ಬೊಮ್ಮನಾಳ, ಸಿ.ಪಿ.ಐ.ಎಮ್.ಎಲ್ ಮುಖಂಡರಾದ ಹನುಮಂತ ಕುಂಬಾರ, ಗೌರಪ್ಪ ಲಕ್ಕಂದಿನ್ನಿ, ವೆಂಕಟೇಶ ನಾಯಕ ಲಕ್ಕಂದಿನ್ನಿ, ಮಲ್ಲಯ್ಯ ನಾಯಕ ಲಕ್ಕಂದಿನ್ನಿ ಹಾಜರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

