ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಹೊಳೆ ಆಲೂರಿನ – ಹಳ್ಳಿ ಹೈದ ಕೃಷ್ಣಾ ಆಡಿನ ಸಾಧನೆ.
ಹೊಳೆ ಆಲೂರು ಜ.02

ತಮಿಳುನಾಡಿನ ಮೆಟ್ಟೂರನಲ್ಲಿ ಇತ್ತೀಚಿಗೆ ಆಯೋಜಿಸಿದ್ದ 2024-25 ನೇ. ಸಾಲಿನ ರಾಷ್ಟ್ರೀಯ ದಕ್ಷಿಣ ವಲಯ ಮಟ್ಟದ ಚಾಂಪಿಯನ್ ಶಿಪ್ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿ ನಿಧಿಸಿದ್ದ ಗದಗ ಜಿಲ್ಲೆಯ ಹೊಳೆ ಆಲೂರಿನ ಕೃಷ್ಣಾ ಕಲ್ಲಪ್ಪ ಆಡಿನ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾನೆ.58 ಕೆ.ಜಿ.ಯ 15 ವರ್ಷ ದೊಳಗಿನ ಜೂನಿಯರ್ ವಿಭಾಗದಲ್ಲಿ ಆಡಿನ ಸತತ ನಾಲ್ಕು ಸುತ್ತಿನಲ್ಲಿ ಮಣಿಪುರ, ಕೇರಳ, ಆಂಧ್ರಪ್ರದೇಶ, ತಮಿಳುನಾಡಿನ ಸ್ಪರ್ಧಿಗಳನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದ. ಅಂತಿಮ ಹಣಾಹಣಿಯಲ್ಲಿ ತೆಲಂಗಾಣದ ಈಶಾನ್ ಕಟಾರೆಯನ್ನು 10-0 ಅಂಕದೊಂದಿಗೆ ಚಿನ್ನದ ಪದಕ ಮುಡಿಗೇರಿಸಿ ಕೊಂಡಿದ್ದಾನೆ.ಕೃಷ್ಣಾ ಬಾಲ್ಯದಿಂದಲೂ ಆಟದಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದ ತಾಲೂಕು ಮತ್ತು ಜಿಲ್ಲಾ ಹಂತದ ಕ್ರೀಡಾಕೂಟದಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾನೆ. ಆಟದಲ್ಲಿ ಜನ ಗುರುತಿಸುವಂತಹ ಸಾಧನೆ ಮಾಡಬೇಕೆಂಬ ಹಂಬಲವನ್ನು ಪಾಲಕರ ಮುಂದೆ ವ್ಯಕ್ತಪಡಿಸಿದ್ದ. ಪಾಲಕರಾದ ಮುತ್ತವ್ವ ತಾಯಿ.ಕಲ್ಲಪ್ಪ.ಆಡಿನ ಕೂಲಿ ಕಾರ್ಮಿಕರು, ಆರ್ಥಿಕ ಮುಗ್ಗಟ್ಟಿನ ನಡುವೆಯೂ ಮಗನ ಆಸೆಗೆ ತಣ್ಣೀರು ಎರಚದೇ ಸಾಲ ಮಾಡಿ ದಾವಣಗೆರೆಯ ಯುವ ಜನಸೇವಾ ಕ್ರೀಡಾ ಇಲಾಖೆ ಹಾಗೂ ಸಬಲೀಕರಣ ನಿಲಯಕ್ಕೆ ಸೇರಿಸಿದ್ದರು. ಯುವ ಜನ ಸೇವಾ ಕ್ರೀಡಾ ತರಬೇತಿ ಕೇಂದ್ರದ ಡಾ, ಕೆ.ವಿನೋದ ಕುಮಾರ ಗರಡಿಯಲ್ಲಿ ಸತತ ಎರಡು ವರ್ಷ ತರಬೇತಿ ಪೂರೈಸಿದ ಕೃಷ್ಣಾ 2022 ಶಿಗ್ಗಾಂವಿಯಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದ 2023 ರಲ್ಲಿ ರಾಮನಗರದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲೂ ಚಿನ್ನದ ಪದಕ ಪಡೆದು ಕೊಂಡಿದ್ದನು. ಇಲ್ಲಿ ಸ್ಮರಿಸಬಹುದು ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ ಗದಗ