ಅಂಬೇಡ್ಕರ್ ರವರು ಶಾಲೆಗೆ ಸೇರಿದ ದಿನ:ಪ್ರತಿಭಾ ಪುರಸ್ಕಾರ ದಿನ – ಶಾಸಕ ತಮ್ಮಯ್ಯ.
ಚಿಕ್ಕಮಗಳೂರು ನವೆಂಬರ್.7

ಭಾರತ ರತ್ನ ಡಾ. ಬಿಆರ್ ಅಂಬೇಡ್ಕರ್ ನೀಡಿದ ಸಂವಿಧಾನವು ಪ್ರಪಂಚದಲ್ಲಿಯೇ ಸರ್ವ ಶ್ರೇಷ್ಠವಾಗಿದೆ ಆದ್ದರಿಂದಲೇ ಪ್ರಪಂಚದ ಎಲ್ಲಾ ದೇಶಗಳು ಸಹ ಅಂಬೇಡ್ಕರ್ ಅವರನ್ನು ಸ್ಮರಿಸುತ್ತಾರೆ ಎಂದು ಶಾಸಕರಾದ ತಮ್ಮಯ್ಯ ರವರು ಹೇಳಿದರು. ಅವರು ಇಂದು ಪಟ್ಟಣದ ನಗರ ಸಭಾ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಪಾಯಿ ಕರ್ಮಚಾರಿಗಳ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಚಿಕ್ಕಮಗಳೂರು, ಇವರ ಸಂಯುಕ್ತ ಆಶ್ರಯದಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ರವರು ಶಾಲೆಗೆ ಸೇರಿದ ದಿನ ನವಂಬರ್ 7 ಪ್ರತಿಭಾ ಪುರಸ್ಕಾರ ದಿನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಮ್ಯಾನುಯಲ್ ಸ್ಕ್ಯಾವೆಂಜರ್ ಗಳ ಮತ್ತು ಸಪಾಯಿ ಕರ್ಮಚಾರಿಗಳ ಮಕ್ಕಳು, ಎಸ್ ಎಸ್ ಎಲ್ ಸಿ, ಮತ್ತು ಪಿಯುಸಿ, ಹಾಗೂ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಮಕ್ಕಳಿಗೆ ಅವರ ವಿದ್ಯಾಭ್ಯಾಸವನ್ನು ಉತ್ತೇಜಿಸುವ ಸಲುವಾಗಿ ರಾಜ್ಯಾದ್ಯಂತ ಏಕಕಾಲದಲ್ಲಿ ಪ್ರತಿಭಾ ಪುರಸ್ಕಾರ ದಿನ ಆಚರಿಸಬೇಕೆಂದು ಸರ್ಕಾರ ಘೋಷಿಸಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ಮಾನ್ಯುಯಲ್ ಸ್ಕ್ಯಾವೇಂಜರ್ಸ್ ಮತ್ತು ಸಪಾಯಿ ಕರ್ಮಚಾರಿಗಳ ಜಾಗೃತಿ ಸಮಿತಿ ಸದಸ್ಯರಾದ ತರೀಕೆರೆ ಎನ್ ವೆಂಕಟೇಶ್ ಮಾತನಾಡಿ ಶೋಷಿತರಲ್ಲಿ ಅತ್ಯಂತ ಶೋಷಿತರಾದ ಮ್ಯಾನುಯೆಲ್ ಸ್ಕ್ಯಾವೆಂಜರ್ಸ್ ಮತ್ತು ಸಪಾಯಿ ಕರ್ಮಚಾರಿಗಳು, ಪೌರಕಾರ್ಮಿಕರ ಮಕ್ಕಳು ಐಎಎಸ್, ಐಪಿಎಸ್, ಡಾಕ್ಟರ್ಸ್ ಮುಂತಾದ ಅತ್ಯುನ್ನತ ವಿದ್ಯಾಭ್ಯಾಸ ಪಡೆಯಬೇಕು. ಪೋಷಕರು ಮಕ್ಕಳ ಉನ್ನತ ವ್ಯಾಸಂಗಕ್ಕೆ ಗುರಿ ತಲುಪಲು ಮಾರ್ಗ ದರ್ಶಕರಾಗಬೇಕು. ದೊಡ್ಡ ದೊಡ್ಡ ಸ್ಥಾನಮಾನದ ಕನಸು ಗುರಿಗಳನ್ನು ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಬೇಕೆಂದು ಹೇಳಿದರು. ಬಿಎಸ್ಪಿ ಜಿಲ್ಲಾ ಅಧ್ಯಕ್ಷರಾದ ಕೆ ಟಿ ರಾಧಾಕೃಷ್ಣ ಮತ್ತು ಅಧ್ಯಕ್ಷತೆ ವಹಿಸಿದ್ದ ನಗರ ಸಭಾ ಅಧ್ಯಕ್ಷರಾದ ವನಸಿದ್ಧಿ ವೇಣುಗೋಪಾಲ್ ರವರು ಮಾತನಾಡಿದರು. ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಗೌರವಿಸಲಾಯಿತು. ನಗರ ಸಭಾ ಉಪಾಧ್ಯಕ್ಷರಾದ ಅಮೃತೇಶ್, ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ನಾಗರತ್ನ, ನಗರ ಸಭಾ ಆಯುಕ್ತಾರಾದ ಬಸವರಾಜು, ಜಾಗೃತಿ ಸಮಿತಿ ಸದಸ್ಯರಾದ ಶೀಲಾ ಸುಕೇಶ್, ಉಪಸ್ಥಿತರಿದ್ದು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಸೋಮಶೇಖರ್ ರವರು ಸ್ವಾಗತಿಸಿ ವಂದಿಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ