ಮತ ಕ್ಷೇತ್ರದಿಂದ ಹೊರಗಿರುವ ಮತದಾರರು ಮತದಾನ ದಿನ ಮತಗಟ್ಟೆಗೆ ಬಂದು ಮತದಾನ ಮಾಡಿ – ಶ್ರೀ ಮತಿ ತಾರಾ.
ಹುನಗುಂದ ಏಪ್ರಿಲ್.04

ಉದ್ಯೋಗ ಮತ್ತು ಕಾರ್ಯದ ನಿಮಿತ್ಯ ಬೇರೆ ಕಡೆ ಹೋಗಿದ್ದರೂ ಸಹಿತ ಚುನಾವಣೆ ದಿನದಂದು ತಮ್ಮ ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಾಪಂ ಇಒ ಶ್ರೀಮತಿ ತಾರಾ ಬೇರೆಡೆಗೆ ಇರುವ ಮತದಾರರಿಗೆ ಕರೆ ನೀಡಿದರು.ಮತಕ್ಷೇತ್ರದ 72 ನೇ. ಮತಗಟ್ಟೆಯ ಲಿಂಗದಕಟ್ಟಿ ಹತ್ತಿರ ಜಿಲ್ಲೆ ಮತ್ತು ತಾಲೂಕಾ ಸ್ವೀಪ್ ಸಮಿತಿ ಹಾಗೂ ಪುರಸಭೆ ಹುನಗುಂದ ಸಹಯೋಗದಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಮತಕ್ಷೇತ್ರದ ಮತದಾನ ಶೇಕಡಾವಾರು ಕಡಿಮೆ ಆಗಿರುವದರಿಂದ ಈ ಬಾರಿ ಶೇ. 100 ರಷ್ಟು ಮತದಾನ ಆಗುವ ನಿಟ್ಟಿನಲ್ಲಿ ಈ ಸ್ವೀಪ್ ತಂಡದ ಜೊತೆಗೆ ಮತದಾರರ ಕರ್ತವ್ಯವೂ ಅಷ್ಟೆ ಮುಖ್ಯವಾಗಿದೆ. ತಮ್ಮವರು, ನಮ್ಮವರನ್ನು ಒಗ್ಗೂಡಿ ಕೊಂಡು ನಮ್ಮ ಮತದಾನದ ಹಕ್ಕು ಮತ ಚಲಾಯಿಸುವ ಮೂಲಕ ದೇಶದ ಭವಿಷ್ಯ ಕಾಯುವ ಕಾರ್ಯವಾಗಬೇಕು. ಸಂವಿಧಾನದ ಆಶಯದಂತೆ ದೇಶದ ಮತ್ತು ನಮ್ಮ ನಿಮ್ಮೆಲ್ಲರ ಅಭಿವೃದ್ದಿಪಡಿಸುವ ಅರ್ಹರರಿಗೆ ಮತದಾನ ಮಾಡಬೇಕೆಂದು ಎಂದರು. ತಹಶೀಲ್ದಾರ ನಿಂಗಪ್ಪ ಬಿರಾದಾರ ಮಾತನಾಡಿ ಯಾರೂ ಮತದಾನದ ಬಗ್ಗೆ ನಿಷ್ಕಾಳಜಿ ಮಾಡಬಾರದು.ಮತದಾನದ ಮೇಲೆ ನಮ್ಮ ದೇಶದ ಭವಿಷ್ಯ ನಿಂತಿದೆ.ಸೋಲು ಮತ್ತು ಗೆಲುವಿಗೆ ಕೇವಲ ಒಂದೆ ಮತ, ಹೀಗಿರುವಾಗ ತಮ್ಮ ಒಂದು ಮತವೂ ಪ್ರಜಾಪ್ರಭುತ್ವಕ್ಕೆ ಅಷ್ಟೆ ಮುಖ್ಯವಾಗಿದೆ. ಆದ್ದರಿಂದ ಈ ಚುನಾವಣೆಯಲ್ಲಿ ಎಲ್ಲರೂ 100 ರಷ್ಟು ಮತದಾನವಾಗಲು ಪ್ರಯತ್ನಿಸೋಣ ಎಂದರು. ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ ಮಾತನಾಡಿ ಮತ ಹಾಕಿದರೆ ನನಗೇನು ಬರುತ್ತದೆ ಎಂದು ಅಲಕ್ಷ್ಯ ಬೇಡ, ನಿಮ್ಮ ಪ್ರತಿಯೊಬ್ಬರ ಮತವೂ ಅಭಿವೃದ್ದಿ ಪುಟಕ್ಕೆ ಸಾಕ್ಷಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಲಿಂಗರಾಜ ಹುನಗುಂಡಿ, ಗ್ರಾಮ ಆಡಳಿತಾಧಿಕಾರಿ ಶಿವಾನಂದ ಕುಂಬಾರ, ಗ್ರಾಮ ಸೇವಕ ಪರಶೂರಾಮ ಚಿಕ್ಕಣ್ಣವರ, ಅಂಗನವಾಡಿ ಕಾಯಕರ್ತೆಯರಾದ ವಿಜಯಲಕ್ಷ್ಮೀ ನಾಶಿ, ಅಕ್ಕಮ್ಮ ಚಿತ್ತರಗಿ, ದೇವಕ್ಕವ್ವ ಈಟಿ, ಸೆಕ್ಟರ್ ಅಧಿಕಾರಿ ಎಚ್.ಜಿ. ಕೊಡಗಲಿ,ಮುತ್ತುರಾಜ ಕಳ್ಳಿಗುಡ್ಡ, ಮುತ್ತು ಹುಣಶಾಳ, ಮಹಾಂತೇಶ ತಾರಿವಾಳ, ಬಾಬು ಲೈನ,ಎಚ್.ಎಚ್. ಚಲವಾದಿ, ಮುತ್ತು ಚಲವಾದಿ, ಬಸವರಾಜ,ಐ.ಕೆ. ಗುಡ್ಡದ ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು. ನಂತರ ಮತದಾನ ಜಾಗೃತಿ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ