“ಮಾತೆಯ ಮಡಿಲು” – ಪುಸ್ತಕ ಪರಿಚಯ…..

ಇಂದು ಜಗತ್ತಿನಲ್ಲಿ ವಿಶ್ವವಿದ್ಯಾಲಯಗಳು ಹೆಚ್ಚಾಗುತ್ತಿದ್ದು ಅಂತೆಯೇ ಪದವೀಧರರ ಸಂಖ್ಯೆಯೂ ಹೆಚ್ಚುತ್ತಿದೆ. ಪದವಿ ಮೇಲೆ ಪದವಿಗಳಿಸಿದರೂ ಸಾಮಾಜಿಕ ಸಮಸ್ಯೆಗಳೇನು ಕಡಿಮೆಯಾಗಿಲ್ಲ. ಇದಕ್ಕೆ ವಿರುದ್ಧವಾಗಿ ಹೆಚ್ಚಾಗುತ್ತಲ್ಲೇ ಇವೆ. ಮನುಷ್ಯ ಇಂದು ಸ್ವಾರ್ಥಿಯಾಗಿ, ನಿಷ್ಪ್ರಯೋಜಕನಾಗಿ, ದಿನಕ್ಕೊಂದು ವಿಚ್ಛೇದನ, ಕೌಟುಂಬಿಕ ಕಲಹ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಇಂತಹ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಂತಹ ಮೌಲ್ಯಯುತ ಆಲೋಚನೆಗಳನ್ನು ಎತ್ತಿ ಹಿಡಿಯುವಂತಹ ಆಧ್ಯಾತ್ಮಿಕ ಚಿಂತನೆಗಳನ್ನು ಒಳಗೊಂಡ ಪುಸ್ತಕಗಳ ಅವಶ್ಯಕತೆ ನಮಗಿದೆ. ಆಧ್ಯಾತ್ಮಿಕ ಉನ್ನತಿಯಿಂದ ಸಾತ್ವಿಕ ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ನಾವು “ಮಾತೆಯ ಮಡಿಲು” ಎಂಬ ಈ ಪುಸ್ತಕ ದಿಂದ ತಿಳಿಯಬಹುದು. ಅನಾದಿ ಕಾಲದಿಂದಲೂ ನಮ್ಮದು ಪುರುಷ ಪ್ರಧಾನ ಸಮಾಜ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮಾತೃತ್ವದ ಆದರ್ಶವನ್ನು ಸಾರಿದ ಅನೇಕ ಉದಾಹರಣೆಗಳು ನಮಗೆ ಪೂರ್ವದಿಂದಲೂ ದೊರೆಯುತ್ತವೆ. ಕವಯಿತ್ರಿ ‘ಸಂಚಿಯ ಹೊನ್ನಮ್ ” ಹೇಳುವಂತೆ “ಪೆಣ್ಣಲ್ಲವೇ ನಮ್ಮನ್ನೆಲ್ಲ ಪಡೆದ ತಾಯಿ ಪೆಣ್ಣಲ್ಲವೇ ನಮ್ಮನ್ನೆಲ್ಲ ಪೊರೆದವಳು” ಎಂದು ಮಾತೃತ್ವಕ್ಕೆ ಒತ್ತು ನೀಡಿ ಬರೆದಿದ್ದಾರೆ.

ಸ್ವಾಮಿ ಬ್ರಹ್ಮೇಶಾನಂದಜೀ ಮಹಾರಾಜ್
ಹಾಗೆಯೇ ದಾಸ ಶ್ರೇಷ್ಠರಾದ ಪುರಂದರದಾಸರು “ತುಳಸಿ ಮಾಲೆ ಹಾಕುವುದಕ್ಕೆ ಅರಸನಾಗಿ ನಾಚುತಲಿದ್ದೆ ಹೆಂಡತಿ ಸಂತತಿ ಸಾಸಿರವಾಗಲಿ ತುಳಸಿ ಮಾಲೆ ಹಾಕಿಸಿದಳಯ್ಯ”!! ಎಂಬಲ್ಲಿ ಕೂಡ ಸ್ತ್ರೀಯರ ಪ್ರಾಧಾನ್ಯತೆಯನ್ನು ಎತ್ತಿ ಹಿಡಿದಿರುವುದನ್ನು ಗಮನಿಸಬಹುದು. ಹೀಗೆ ಮಾತೃತ್ವದ ಆದರ್ಶವನ್ನು ಸಾರಿದ ಅನೇಕ ಉದಾಹರಣೆಗಳನ್ನು ಶ್ರೀರಾಮಕೃಷ್ಣರನ್ನು ಹೊರತು ಪಡಿಸಿ ಹಲವು ಕಡೆ ಕಾಣಬಹುದು. ಹಿಂದಿನ ಎಲ್ಲಾ ಪೌರಾಣಿಕ ಅವತಾರಗಳಲ್ಲಿ ಮಹಾ ಪುರುಷರೆಲ್ಲರಲ್ಲಿ ಕಂಡು ಅರಿಯದ ಒಂದು ವೈಶಿಷ್ಟ್ಯ ಪೂರ್ಣವಾದ ಸ್ತ್ರೀ ಪ್ರಾಧಾನ್ಯತೆ ಶ್ರೀರಾಮಕೃಷ್ಣರ ಜೀವನದಲ್ಲಿ ಎದ್ದು ಕಾಣುತ್ತದೆ. ಶ್ರೀರಾಮಕೃಷ್ಣರ ಆರಾಧ್ಯ ದೈವ ಸ್ತ್ರೀ ಅವರ ಗುರು ಸ್ತ್ರೀ ಹಾಗೆಯೇ ಅವರ ಪತ್ನಿ ಶಾರದೆಯನ್ನು ದೇವಿಯ ಪೀಠದಲ್ಲಿ ಕುಳ್ಳಿರಿಸಿ ಷೋಡ ಶೋಪಚಾರ ಪೂಜೆಗೈದು “ಶಾರದಾ ದೇವಿ” ಯಾಗಿ ಪ್ರತಿ ಬಿಂಬಿಸಿದವರು ಶ್ರೀರಾಮಕೃಷ್ಣರು. ಸ್ತ್ರೀ ಎಂದರೆ ಅದು “ಶಕ್ತಿ” ಎಂದು ಬಿಂಬಿಸಿದವರು ಶ್ರೀರಾಮಕೃಷ್ಣರು. ಇದೇ ರೀತಿ ಜನ್ಮ ನೀಡಿದ ತಾಯಿಯಲ್ಲಿ ಅಪಾರ ಶ್ರದ್ಧೆ ಭಕ್ತಿಯನ್ನು ಹೊಂದಿದ್ದರು. ಜೊತೆಗೆ ಅವರ ಈ ಸದ್ಭಾವಗಳನ್ನು ತಮ್ಮ ಶಿಷ್ಯ ವರ್ಗಕ್ಕೂ ಕಲಿಸಿ ಕೊಟ್ಟರು “ಮಾತೆಯ ಮಡಿಲು” ಎಂಬ ಶೀರ್ಷಿಕೆಯೇ ಪ್ರೇಮ ಆನಂದ ವಾತ್ಸಲ್ಯಗಳ ಸಂಕೇತವಾಗಿದೆ.

ಮಾತಾಜೀ ತ್ಯಾಗಮಯೀ
ಈ ” ಮಡಿಲು” ಜಗಜ್ಜನನಿ ಕ್ಷೇಮಂಕರಿಯ ದಿವ್ಯವಾದ ರಾಗ ಭಯ ಕ್ರೋಧಗಳಿಂದ ಮುಕ್ತವಾದ ಒಂದು ಸುರಕ್ಷಿತವಾದ ತೆಕ್ಕೆಯಾಗಿದೆ. ಪ್ರಸ್ತುತ ಪುಸ್ತಕದಲ್ಲಿ ಪೂಜ್ಯ ಮಾತಾಜೀ ತ್ಯಾಗಮಯೀಯವರು ಭಗವಂತನ ಮಾತೃತ್ವ ಹಾಗೂ ಶ್ರೀ ಶಾರದಾದೇವಿ ಮಹಾತ್ಮೆ ಹಾಗೂ ಅವರ ಸಂದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.ಭಗವತ್ ತತ್ವದ ವಿಕಾಸದಲ್ಲಿ ಮನುಷ್ಯನ ಆಲೋಚನೆಗಳಿಗೆ ತಕ್ಕಂತೆ ಅವನ ದೇವರ ಕಲ್ಪನೆ ಇರುತ್ತದೆ. ಹಂತ ಹಂತವಾಗಿ ವಿಕಾಸ ಹೊಂದಿ ಭಗವಂತ ತನ್ನ ತಾಯಿ ಎಂದು ಕಲ್ಪಿಸಿ, ಅವಳು ತನ್ನ ಪಾಪಗಳನ್ನು ಪರಮ ದಯೆ ಯಿಂದ ಕ್ಷಮಿಸಿ, ತನ್ನನ್ನು ಕರ್ಮ ಬಂಧನ ದಿಂದ ಮುಕ್ತವಾಗಿಸಲಿ, ಎಂಬ ಶರಣಾಗತಿ ಭಾವದವರೆಗೂ ವಿಕಾಸ ಹೊಂದಿರುವುದನ್ನು ಇಲ್ಲಿ ನೋಡುತ್ತೇವೆ. ಪ್ರಸ್ತುತ ಜಗತ್ತಿನ ಎಲ್ಲೆಡೆ ಚಿಂತನಾಶೀಲ ಮನುಷ್ಯ ಕೊಡ ಬೇಕಾದ ಕಡೆ, ಪಡೆಯುವ ಬಯಕೆ ಸಹಜ ಸ್ವಭಾವವಾಗಿಸಿ ಕೊಂಡಿದ್ದಾನೆ. ಅಂದರೆ ಫಲಾಪೇಕ್ಷೆ ಯಿಂದ ಕೆಲಸ ಮಾಡುತ್ತಿದ್ದಾನೆ. ಇದು ಮನುಷ್ಯನ ಲಕ್ಷಣವಾದರೆ, ಪ್ರತಿಫಲ ಅಪೇಕ್ಷೆ ಇಲ್ಲದೆ, ಯಾವ ಕಾರಣವೂ ಇಲ್ಲದೆ, ಕೊಡುತ್ತಲೇ ಹೋಗುವುದು ದೇವತೆಗಳ ಲಕ್ಷಣವಾಗಿದೆ. ಇದನ್ನೇ “ಭಗವತ್ ಕೃಪೆ” ಎನ್ನಲಾಗಿದೆ. ಈಗ ನಾವು ಯೋಚಿಸ ಬೇಕು ಮನುಷ್ಯ ದೇವರಾಗುವುದು ಹೇಗೆ ಎಂಬುದನ್ನು. ಇಂತಹ ಒಂದು ಅದ್ಭುತ ವಿಶ್ಲೇಷಣೆ ಈ ಪುಸ್ತಕದಲ್ಲಿ ಸೊಗಸಾಗಿ ಮೂಡಿ ಬಂದಿದೆ.ನಾವು ಇಡೀ ವಿಶ್ವದಲ್ಲಿ ಎರಡು ಪರಸ್ಪರ ವಿರುದ್ಧವಾಗಿರುವ ತತ್ವಗಳು ಒಟ್ಟಿಗೆ ಕಾರ್ಯ ನಿರತವಾಗಿರುವುದನ್ನು ನೋಡುತ್ತೇವೆ. ಇದನ್ನು ಸಾಂಕೇತಿಕವಾಗಿ ಪುರುಷ ಮತ್ತು ಪ್ರಕೃತಿ, ಶಿವ ಮತ್ತು ಶಕ್ತಿ, ನರ ಮತ್ತು ನಾರಿ, ಬ್ರಹ್ಮ ಮತ್ತು ಶಕ್ತಿ (ಮಾಯೆ) ಎಂದು ಕರೆಯಲಾಗಿದೆ.ಮನುಷ್ಯನ ಆರೋಗ್ಯಕರ ಸಂತುಲಿತ ವಿಕಾಸಕ್ಕೆ ಈ ಎರಡು ಅಂಶಗಳು ಅವಶ್ಯಕ ಒಂದು ಸ್ನೇಹಮಯಿ ಮಾತೆಯ ಸಂರಕ್ಷಣೆ ಇನ್ನೊಂದು ದಂಡದಾತ ಪಿತನ ಹತೋಟಿ. ಶ್ರೇಷ್ಠತಮ ಸಮಾಜಕ್ಕೆ ಈ ಇಬ್ಬರ ಔಚಿತ್ಯವೇನು ಎಂಬುದನ್ನು ವಿವರಿಸಿದ್ದಾರೆ. ಪುರುಷ ಸಹಜ ಗುಣಗಳೇನು?ಸ್ತ್ರೀ ಸಹಜ ಗುಣಗಳೇನು? ಎಂಬುದನ್ನು ವಿವರಿಸಿದ್ದಾರೆ.ಎಲ್ಲಾ ಸ್ತ್ರೀಯರು ಜಗನ್ಮಾತೆಯ ಸ್ವರೂಪವೆಂದು ಕಂಡು ಗೌರವಿಸುವುದನ್ನು ಪುರುಷರು ಕಲಿತು ಕೊಳ್ಳಬೇಕು. ಹಾಗೆಯೇ ಸ್ತ್ರೀಯರು ಹೇಗೆ ಮುನ್ನಡೆಯಬೇಕು ಎಂದರೆ, ಸ್ತ್ರೀ ತನ್ನಲ್ಲಿ ಅಂತರ್ಗತವಾಗಿರುವ ಮಾತೃತ್ವವನ್ನು ಜಾಗೃತ ಗೊಳಿಸಿ ಕೊಳ್ಳಬೇಕು. ಪುರುಷರೊಂದಿಗೆ ಸ್ಪರ್ಧಿಸುವ ಭರದಲ್ಲಿ ಪುರುಷ ಗುಣಗಳನ್ನು ಬೆಳೆಸಿ ಕೊಳ್ಳಲು ಹೋರಾಡ ಬಾರದು ಎಂದಿದ್ದಾರೆ .ಈ ಮಾತು ಇಂದಿನ ಸ್ತ್ರೀ ಕುಲಕ್ಕೆ ತುಂಬಾ ಅವಶ್ಯಕವೆಂದು ತೋರುತ್ತದೆ.ನಮ್ಮ ಸ್ವಾರ್ಥ ಮತ್ತು ಅನುಕೂಲಕ್ಕನು ಗುಣವಾಗಿ ನಾವು ಜಗತ್ತನ್ನು ನೋಡುವ ದೃಷ್ಟಿ ಬೆಳಸಿ ಕೊಂಡಿದ್ದೇವೆ. ಸ್ತ್ರೀಯರು ಶಕ್ತಿ ಮತ್ತು ಬಲದಿಂದ ಪುರುಷರನ್ನು ಗೆಲ್ಲದೆ, ‘ಮಾತೃತ್ವ’ ವೆಂಬ ಪ್ರೇಮದಿಂದ ಪುರುಷರನ್ನು ಸುಲಭವಾಗಿ ಗೆಲ್ಲಬಹುದು ಎಂಬ ವಿಶ್ಲೇಷಣೆ ಇಂದಿನ ಸಮಾಜಕ್ಕೆ ಔಚಿತ್ಯ ಪೂರ್ಣ ವಿಶ್ಲೇಷಣೆಯಾಗಿ ಪ್ರಸ್ತುತ ಪುಸ್ತಕದಲ್ಲಿ ಮೂಡಿ ಬಂದಿದೆ. ಸ್ವಾಮಿ ವಿವೇಕಾನಂದರ ಸಂದೇಶಗಳು ನಮ್ಮ ಬುದ್ಧಿಯನ್ನು ಬೆರಗು ಗೊಳಿಸಿದರೆ, ಶ್ರೀಮಾತೆಯವರ ಸಂದೇಶಗಳು ನಮ್ಮ ಹೃದಯವನ್ನು ತಟ್ಟುತ್ತವೆ. ಸ್ವಾಮಿ ವಿವೇಕಾನಂದರು ಪೌರುಷವನ್ನು ಪ್ರತಿ ಪಾದಿಸಿದರೆ, ಶ್ರೀಮಾತೆಯವರು ಶರಣಾಗತಿಯನ್ನು ಸಾರುವ ಬೋಧನೆಗಳನ್ನು ನೀಡಿದ್ದಾರೆ.ಶ್ರೀರಾಮಕೃಷ್ಣರ ಮಹಾ ಸಮಾಧೀಯ ತರುವಾಯ ಶ್ರೀಮಾತೆಯವರು ಮೂವತ್ನಾಲ್ಕು ವರ್ಷಗಳು ಬದುಕಿದ್ದರು. ಜಗತ್ತಿನಲ್ಲಿ ಮಾತೃತ್ವವನ್ನು ಪ್ರತಿಷ್ಠಾಪಿಸಲು ಶ್ರೀರಾಮಕೃಷ್ಣರು ಶ್ರೀಮಾತೆಯವರನ್ನು ಬಿಟ್ಟು ಹೋದರು.

ಪುಸ್ತಕ ಪರಿಚಯ:ಶ್ರೀ ಮತಿ ಡಿ.ಕಾವೇರಿ ಸುರೇಶ್ ಯಾದವ್.
ಪುರಾಣಗಳಲ್ಲಿ ತಾಯಿ, ದುರ್ಗೆ, ದಕ್ಷಿಣ ಕಾಳಿ ಇತ್ಯಾದಿ ಮಾತೃ ಮೂರ್ತಿಯರ ವರ್ಣನೆ ಇದೆ. ಆದರೆ ಭಗವಂತ ತನ್ನ ಪ್ರೇಮ ಪ್ರತಿಷ್ಠಾಪನೆಗಾಗಿ ದೇವಿಯಾಗಿ ಅವತರಿಸಿದ್ದು ಶ್ರೀ ಮಾತೆಯವರ ರೂಪದಲ್ಲಿಯೇ ಎಂಬುದು ಸ್ಪಷ್ಟವಾಗಿದೆ. ಪ್ರಾಪಂಚಿಕವಾದ ಎಲ್ಲವುಗಳಲ್ಲಿ ಅವರು (ಶ್ರೀಮಾತೆ) ಅನಾಸಕ್ತಿಯನ್ನು ಹೊಂದಿದ್ದರು. ಯಾವುದೇ ಬಾಹ್ಯ ಲಕ್ಷಣಗಳಿಲ್ಲದ ಸಂತರ ಸಾಲಿಗೆ ಶ್ರೀಮಾತೆಯವರು ಸೇರುತ್ತಾರೆ. ಸ್ವಾರ್ಥ ದಾಸ್ಯ ಅವಲಂಬನೆಗಳನ್ನು ಇನ್ನಿತರ ಪ್ರಾಪಂಚಿಕರ ಲಕ್ಷಣಗಳನ್ನು ಮೆಟ್ಟಿ ನಿಂತ ಅತಿಮಾನವ ಆಸಕ್ತಿ ಶ್ರೀಮಾತೆಯವರದು ಎಂದು ಹೇಳಬಹುದು. ಕಡೆಯಲ್ಲಿ ಶ್ರೀಮಾತೆ ಯವರು ಪ್ರಾಪಂಚಿಕರಿಗೆ ಅತ್ಯದ್ಭುತವಾದ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಂತಹ ಸಂದೇಶವನ್ನು ಕೊಟ್ಟಿದ್ದಾರೆ. ಶ್ರೀಮಾತೆಯವರ ಕುರಿತಾದ ಹಲವು ಲೇಖನಗಳ ಸಂಗ್ರಹ “ಮಾತೆಯ ಮಡಿಲು” ಪುಸ್ತಕದಲ್ಲಿವೆ. ಮಾತೆಯ ಮಡಿಲು ಕೃತಿಯ ಮೊದಲ ಭಾಗದಲ್ಲಿ ಭಗವಂತನ ಮಾತೃತ್ವದ ಮೂರ್ತರೂಪ ಶ್ರೀಮಾತೆಯವರು, ಆ ಮಾತೃತ್ವದ ತಾತ್ತ್ವಿಕ ಅರ್ಥ ವಿವೇಚನೆಯನ್ನು ಮಾಡಲಾಗಿದೆ. ಎರಡನೆಯ ಭಾಗದಲ್ಲಿ ಶ್ರೀಮಾತೆಯವರ ವ್ಯಕ್ತಿತ್ವದ ಮಹಿಮಾ ಪೂರ್ಣ ಮುಖಗಳನ್ನು ಲಜ್ಜಾ ಶೀಲತೆ, ಅವರ ಆಧ್ಯಾತ್ಮಿಕ ಸಾಧನೆಗಳು, ನಿರಹಂಕಾರ, ಪಾವಿತ್ರ್ಯ, ಸೇವಾಭಾವ, ಮಾಹಾತ್ಮ್ಯ, ವೈಶಿಷ್ಟ್ಯ ಮತ್ತು ಅಂತರ್ಯಾಮಿ ತಾಯಿಯಾಗಿ ಶ್ರೀಶಾರದಾದೇವಿ ಯವರ ವಿವಿಧ ಗುಣವಿಶೇಷಗಳನ್ನು ಉದಾಹರಣೆ ಸಹಿತವಾಗಿ ವಿವರಿಸಲಾಗಿದೆ. ಮೂರನೆಯ ಭಾಗದಲ್ಲಿ ನಮ್ಮ ದಿನ ನಿತ್ಯದ ಜೀವನಕ್ಕೆ ದಾರಿ ದೀಪವಾದಂತಹ ಶ್ರೀಮಾತೆಯವರ ಉದಾತ್ತ ವಾಣಿಗಳನ್ನು ಚರ್ಚಿಸಲಾಗಿದೆ.ಒಟ್ಟಾರೆಯಾಗಿ ಈ ಪುಸ್ತಕ ನಮ್ಮಲ್ಲಿ ಉತ್ತಮ ಸಂಸ್ಕಾರಗಳನ್ನು ಬೆಳೆಸಿ ರೂಪಿಸುವಲ್ಲಿ ಅತ್ಯುಪಯುಕ್ತವಾಗಿದೆ ಎಂದು ಹೇಳಬಹುದು. ಇಂತಹ ಒಂದು ಅದ್ಭುತವಾದ “ಮಡಿಲ” ನ್ನು ನಮಗೆ ತೋರಿಸಿ ಕೊಟ್ಟವರು ಶ್ರೀರಾಮಕೃಷ್ಣ ಮಹಾ ಸಂಘದ ಹಿರಿಯ ಸಾಧುಗಳು ಮತ್ತು ವಾರಾಣಾಸಿಯ ರಾಮಕೃಷ್ಣ ಮಿಷನ್ ಹೋಮ್ ಆಫ್ ಸರ್ವೀಸ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಪೂಜ್ಯ ಸ್ವಾಮಿ ಬ್ರಹ್ಮ್ಮೇಶಾನಂದಜೀ ಮಹಾರಾಜ್ ಅವರು ಹಾಗೂ ಪೂಜ್ಯರ ಅನುಜ್ಞೆಯಂತೆ, ಅವರ ಮಾರ್ಗದರ್ಶನದಲ್ಲಿ, ಅವರು ಹಾಕಿ ಕೊಟ್ಟ ವಿಧಾನದಲ್ಲಿ ತುಂಬಾ ಸೊಗಸಾಗಿ ಕನ್ನಡಕ್ಕೆ ಅನುವಾದಿಸಿ ದವರು ಆಧ್ಯಾತ್ಮಿಕ ನಗರಿ ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀಯವರು, ಈ ಇಬ್ಬರೂ ಸಾಧು ಮಹಾತ್ಮರಿಗೆ ನಮ್ಮ ಅನಂತ ಅನಂತ ಕೃತಜ್ಞತೆಗಳು ಸಲ್ಲುತ್ತವೆ.ನಿಜಕ್ಕೂ ಇದು ಇಂದಿನ ಸಮಾಜಕ್ಕೆ ಅತ್ಯವಶ್ಯಕವಾದ ಶಕ್ತಿ ತುಂಬುವ ಪುಸ್ತಕ ಎಂದು ಹೇಳಲು ಇಚ್ಚಿಸುತ್ತೇನೆ. ದಯವಿಟ್ಟು ತಾವೆಲ್ಲರೂ ಇಂತಹ ಅಮೂಲ್ಯ ಪುಸ್ತಕವನ್ನು ಖರೀದಿಸಿ ಓದಿ ನಮ್ಮ ಸಾಮಾಜಿಕ ಸ್ವಾಸ್ಥ್ಯವನ್ನು ಉನ್ನತಿ ಪಡಿಸಿ ಕೊಳ್ಳಬೇಕು, ಬಲಪಡಿಸಿ ಕೊಳ್ಳಬೇಕು ಎಂದು ಕೇಳಿ ಕೊಳ್ಳುತ್ತೇನೆ. ಪುಸ್ತಕ ಪರಿಚಯ ಶ್ರೀಮತಿ ಡಿ.ಕಾವೇರಿ ಸುರೇಶಯಾದವ್, ಲೇಖಕರು ಮತ್ತು ಸದ್ಭಕ್ತರು, ಶ್ರೀಶಾರದಾಶ್ರಮ, ಚಳ್ಳಕೆರೆ. ದೂರವಾಣಿ- 9110672012ಪುಸ್ತಕ ದೊರೆಯುವ ಸ್ಥಳ ಶ್ರೀಶಾರದಾಶ್ರಮ, ವಾಸವಿ ಕಾಲನಿ, ಬೆಂಗಳೂರು ರಸ್ತೆ, ಚಳ್ಳಕೆರೆ. ದೂರವಾಣಿ 9686177923 ವಿವೇಕಹಂಸ, ಬೆಂಗಳೂರು.ಬೆಲೆ:-120