ಕಲ್ಮೇಶ್ವರ ಕಾಲೇಜಿನಲ್ಲಿ ಹಳ್ಳಿ ಹಬ್ಬ ಆಚರಣೆ.

ಹೊಳೆಆಲೂರು ಆಗಷ್ಟ.12

ಮೈದಾನ ತುಂಬ ಇಲಕಲ್ ಸೀರೆಯುಟ್ಟು, ಗುಳೇದಗುಡ್ಡ ಕುಬಸ ತೊಟ್ಟು, ಬುತ್ತಿ ಗಂಟು ತಲೆಮೇಲೆ ಹೊತ್ತು ಹಳ್ಳಿಯ ಕಳೆಯನ್ನೇ ಸೃಷ್ಟಿಸಿದ ವಿದ್ಯಾರ್ಥಿನಿಯರು, ನಾವೇನು ಕಮ್ಮಿ ಎನ್ನುವಂತೆ ಧೋತುರ, ಜುಬ್ಬಾ, ಪೈಜಾಮ ಟೊಪ್ಪಿಗೆ, ಪಟಗಾ ಹಾಕಿಕೊಂಡು ಎತ್ತುಗಳನ್ನು, ಕೊಲ್ಲಾರಿ ಬಂಡಿ , ಟ್ರ್ಯಾಕ್ಟರ್ ಗಳನ್ನು ಅಲಂಕರಿಸಿಕೊಂಡು ಬಂದ ವಿದ್ಯಾರ್ಥಿಗಳು, ಡೊಳ್ಳುಗಳ ಸದ್ದು ಮೈದಾನದ ತುಂಬ ತುಂಬಿ ಹೊಸದೊಂದು ಲೋಕವನ್ನೇ ಸೃಷ್ಟಿಸಿದ್ದು ಬೇರೆಲ್ಲಿಯೂ ಅಲ್ಲ , ಇಲ್ಲಿನ ಶ್ರೀ ಕಲ್ಮೇಶ್ವರ ವಿದ್ಯಾಪ್ರಸಾರಕ ಸಮಿತಿಯ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಹಮ್ಮಿಕೊಂಡ ಹಳ್ಳಿ ಸೊಗಡಿನ ಹಳ್ಳಿಹಬ್ಬದ ಕಾರ್ಯಕ್ರಮದ ನೋಟ. ಕಾಲೇಜಿನ ಆವರಣದಲ್ಲಿ ಕಳೆ ಕಟ್ಟಿದ್ದು ಹೀಗೆ. ಡೊಳ್ಳು ಬಡೆಯುವ ಮೂಲಕ ಡಾ.ಸಂಗಮೇಶ ಸಜ್ಜನರ ಹಳ್ಳಿಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆಗೆ ಕಾಲೇಜಿನ ಸಿಬ್ಬಂದಿಗಳೂ ಗ್ರಾಮೀಣ ವೇಷಭೂಷಣಗಳನ್ನು ತೊಟ್ಟು ಬಂದಿದ್ದು ನಿಜಕ್ಕೂ ಬಹಳಷ್ಟು ಖುಷಿ ತಂದಿದೆ. ಪ್ರತಿವರ್ಷವೂ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವೇಷಭೂಷಣಗಳ ಜೊತೆಗೆ ಕಾಲೇಜಿನಲ್ಲೂ ವಿವಿಧ ಆಟಗಳ ಆಡುವ ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪ್ರಭು ಗಂಜಿಹಾಳರು ಮಾತನಾಡಿ ಇಂದು ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳಾದ ಸಕ್ಕಸರಗಿ, ಕುಂಟೆಬಿಲ್ಲೆ, ಚಿನ್ನಿದಾಂಡು, ಲಗೋರಿ, ಗೋಲಿಗಜಗ, ಹಗ್ಗಜಗ್ಗಾಟ, ದುಬ್ಬಚಂಡು ಅಂತವುಗಳನ್ನು ಆಡುವ ಅವಕಾಶ ಕಲ್ಪಿಸುವ ಉದ್ದೇಶ ನಮ್ಮದು ಜೊತೆಗೆ ಇವತ್ತು ಎಲ್ಲರೂ ಕಾಲೇಜಿನ ಮೈದಾನದಲ್ಲೇ ಮನೆಯಿಂದ ತಂದ ಬುತ್ತಿಯನ್ನು ಜೊತೆಯಲ್ಲೇ ಕುಳಿತು ಊಟ ಮಾಡುತ್ತಿದ್ದಾರೆ, ಇದು ಸಮಾನತೆ, ಸಹಬಾಳ್ವೆ, ಸಹಕಾರ, ಹೊಂದಾಣಿಕೆ, ಭ್ರಾತೃತ್ವದ ಜೊತೆಗೆ ನಾವೆಲ್ಲ ಒಂದೆಂಬ ಮನೋಭಾವ ಮೂಡಿಸುತ್ತದೆ ಎಂದರು. ಈ ಸಂದರ್ಭದಲ್ಲಿ ರೇಶ್ಮಾ ಟಕ್ಕೇದ , ಶಿಲ್ಪಾ ಮೆದನಪೂರ ಮತ್ತು ಜಯಶ್ರೀ ಪಾಟೀಲ, ನಡೆಸಿಕೊಟ್ಟ ಕೇಶವಿನ್ಯಾಸ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಲಾವಣ್ಯ ಗಂಗೋಜಿ, ನಿಸರ್ಗ ಜಾಲಿಹಾಳ, ದ್ವಿತೀಯ ಸುಕನ್ಯಾ ಡುರೆ, ತೃತೀಯ ತಸ್ವಿಯಾ ಹಾಳಕೇರಿ ಪಡೆದರು. ಕ್ಯಾಟವಾಕ್ ದಲ್ಲಿ ಪ್ರಥಮ ನಿಸರ್ಗ ಜಾಲಿಹಾಳ, ದ್ವಿತೀಯ ತಸ್ವಿಯಾ ಹಾಳಕೇರಿ, ತೃತೀಯ ಶರಣಮ್ಮ ಪೂಜಾರ, ಪುರುಷರ ಕ್ಯಾಟವಾಕ್ ದಲ್ಲಿ ಪ್ರಥಮ ಮಹೆಶ ಅಸೂಟಿ, ದ್ವಿತೀಯ ಶಿವಕುಮಾರ ಗಡಾದ, ತೃತೀಯ ರವಿಚಂದ್ರ ಕುರಿ, ಸಮಾಧಾನಕರ ರಾಕೇಶ ಕುರಿ ಪಡೆದುಕೊಂಡರು.

ಮೇಘಾ ಮಡಿವಾಳರ ಅಕ್ಷತಾ ಮಣ್ಣೂರ ಪ್ರಾರ್ಥಿಸಿದರು. ಸ್ವಾಗತವನ್ನು ಅಕ್ಷತಾ ಮಣ್ಣೂರ ಮಾಡಿದರೆ ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ ರವಿಚಂದ್ರ ಕುರಿ ಕೊನೆಯಲ್ಲಿ ವಂದಿಸಿದರು. ನಿರೂಪಣೆಯನ್ನು ಕು. ಮಧು ಗಾಣಿಗೇರ ಮಾಡಿದರು. ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ನಾಗರಾಜ ಹುಡೇದ, ಮಹಿಳಾ ಪ್ರತಿನಿಧಿ ಅನ್ನಪೂರ್ಣ ಪಾಟೀಲ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಗ್ರಾಮೀಣ ಕ್ರೀಡೆಗಳ ಸ್ಪರ್ಧೆ ಜರುಗಿತು. ನಂತರ ಸಾಮೂಹಿಕ ಭೋಜನ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಪ್ರೊ.ಎನ್.ಆರ್.ಹಿರೇಸಕ್ಕರಗೌಡರ, ಪ್ರಾಧ್ಯಾಪಕರಾದ. ವಿಶ್ವನಾಥ ಪಾಟೀಲ, ಸಂತೋಷ ಮಾಳವಾಡ, ಮಲ್ಲಿಕಾರ್ಜುನ ಬೇವೂರ, ಎಸ್.ಬಿ.ಹಳ್ಳೂರ, ಅಲ್ತಾಫ ನದಾಫ, ವಿನೋದ ಕಪ್ಪಲಿ, ಎಂ.ಟಿ.ಆರೇರ, ವಿ.ಬಿ.ಜಾಲಿಹಾಳ, ಎಸ್.ಆರ್.ನಾಯಕ, ಕೆ.ಎ.ಕೊಪ್ಪದ, ಶ್ರೀಮತಿ ಎಸ್.ಆಯ್. ಗಡಗಿ, ಜಿ.ಎಂ.ಪೊಲೀಸಪಾಟೀಲ, ಶೇಖರಪ್ಪ ಮಾಳವಾಡ, ಎಸ್.ಆರ್.ಮುಂದಿನಮನಿ, ಆನಂದ ಕೆಂಚನಗೌಡ್ರ, ಅಶೋಕ ಹಡಪದ, ಬಾಳಪ್ಪ ಚಲವಾದಿ, ಎನ್ ಎಸ್ ಎಸ್ ಯೋಜನಾಧಿಕಾರಿ ಪ್ರೊ. ಎಸ್.ವಾಯ್.ಪೂಜಾರ, ಡಾ.ಕುಮಾರ ಹಂಜಗಿ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವರದಿ: ಡಾ.ಪ್ರಭು ಗಂಜಿಹಾಳ ಮುಖ್ಯಸ್ಥರು, ಕನ್ನಡ ವಿಭಾಗ- ಮೊ: ೯೪೪೮೭೭೫೩೪೬

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button