ವೀರೇಂದ್ರ ಪಾಟೀಲ್ ಅವರು ನಾಡು ಎಂದೆಂದೂ ಮರೆಯದ ಮುತ್ಸದ್ಧಿ ರಾಜಕಾರಣಿ…..

ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ದಕ್ಷತೆಯಿಂದ, ನಿಷ್ಕಳಂಕವಾಗಿ ಆಡಳಿತ ನಡೆಸಿದ ಅಪರೂಪದ ರಾಜಕಾರಣಿ. ಜೊತೆಗೆ ತಮ್ಮ ಸೇವಾ ಅವಧಿಯಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಅರ್ಪಿಸಿದ ಮಹಾನ್ ನಾಯಕ. ಇಂದು ಅವರ 100 ನೇ. ಜನ್ಮದಿನದ ಸವಿನೆನಪು. ಹಿರಿಯ ಮುತ್ಸದ್ದಿ ರಾಜಕಾರಣಿಗೆ ನಾಡಿನ ಜನತೆಯ ಪರವಾಗಿ ಜನುಮದಿನದ ಹಾರ್ದಿಕ ಶುಭಾಶಯಗಳು 🙏🌹🙏ಹಿರಿಯ ಗಾಂಧಿವಾದಿ ನಮ್ಮೆಲ್ಲರ ಅಚ್ಚುಮೆಚ್ಚಿನ ರಾಷ್ಟ್ರನಾಯಕ ಎಸ್ ನಿಜಲಿಂಗಪ್ಪನವರ ಶಿಷ್ಯರಾಗಿ ವೀರೇಂದ್ರ ಪಾಟೀಲರು ಅವರ ರಾಜಕೀಯ ಗರಡಿಯಲ್ಲಿ ಪಳಗಿದವರು. ಅವರು ಮುಖ್ಯ ಮಂತ್ರಿಯಾಗಿದ್ದಾಗ ವೀರೇಂದ್ರ ಪಾಟೀಲರಿಗೆ ಸಾಂಕೇತಿಕವಾಗಿ ವಾಚು ಕಟ್ಟುವ ಮೂಲಕ ೧೯೬೮ ರಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಅಧಿಕಾರ ಹಸ್ತಾಂತರ ಮಾಡುತ್ತಿರುವ ಈ ಅವಿಸ್ಮರಣೀಯ ಕ್ಷಣಗಳು ನಾಡಿನ ರಾಜಕೀಯ ಇತಿಹಾಸಕ್ಕೆ ಭಾಷ್ಯ ಬರೆದಿದೆ.ಯಾರೋ ವಿದೇಶೀ ಗಣ್ಯರು ಕರ್ನಾಟಕ ಸರಕಾರದ ಅತಿಥಿ ಆಗಿದ್ದಾಗ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ಕಾಣಿಕೆಯಾಗಿ ಕೊಟ್ಟ ಭಾರೀ ದುಬಾರೀ ಬೆಲೆಯ ‘ಒಮೇಗಾ ವಾಚ್’ (Omega Watch) ಇದು. ಆದರೆ, ನಿಜಲಿಂಗಪ್ಪನವರು ಈ Watch ಅನ್ನು ಸ್ವಂತಕ್ಕೆ ಬಳಸದೇ ಹಾಗಿಯೇ ಇಟ್ಟು, ‘ಮುಖ್ಯ-ಮಂತ್ರಿ ಆಫೀಸ್ ವಾಚ್’ ಅಂತ ಮಾಡಿದ್ದರು. ನಂತರ, ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿ ಬಂದ ವೀರೇಂದ್ರ ಪಾಟೀಲರಿಗೆ ಈ ‘ವಾಚ್’ ಅನ್ನು ಹಸ್ತಾಂತರಿಸಿದರು. ತದನಂತರ,ಈ ‘ವಾಚ್’ ಅನ್ನು ವೀರೇಂದ್ರ ಪಾಟೀಲರು ದೇವರಾಜ್ ಅರಸ್ ರ ಕೈಗೆ ಕಟ್ಟಿ ನಿಜಲಿಂಗಪ್ಪನವರು ಹಾಕಿದ ಸಂಪ್ರದಾಯವನ್ನು ಮುಂದುವರಿಸಿದರು.ಮುಂದೇನಾಯಿತು ? ಈ ದುಬಾರೀ ‘ವಾಚ್’ ಅರಸರ ಕೈಯಿಂದ ಮುಂದಕ್ಕೆ ಯಾರ ಕೈಗೆ ಹೋಯಿತು? ಗೊತ್ತಿಲ್ಲ !ಅರಸು ನಂತರ ಅಧಿಕಾರಕ್ಕೆ ಬಂದ ಗುಂಡೂರಾಯರು ತಮ್ಮ ಆಡಳಿತದಲ್ಲಿ ಮುಖ್ಯಮಂತ್ರಿ ಕಚೇರಿಯ ಸಂಗ್ರಹಾಲಯದಲ್ಲಿದ್ದ ಈ ಬೆಲೆ ಬಾಳುವ ಒಮೇಗಾ ವಾಚು ನಾಪತ್ತೆಯಾಯಿತು. ರಾಯರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದ ಸಿಎಂ ಇಬ್ರಾಹಿಂ ಸಾಹೇಬ್ ರನ್ನು ಕೇಳಿದರೆ ವಾಚಿನ ಹಿನ್ನೆಲೆ ಸಿಗಬಹುದೇನೋ. ಅಂದು ಲಂಕೇಶ್ ಪತ್ರಿಕೆಯ ಸಂಪಾದಕರಾಗಿದ್ದ ಪಿ ಲಂಕೇಶ್ ಅವರು ಇಬ್ರಾಹಿಂ ಅವರಿಗೆ “ಇಬ್ರಾಹಿಂ ಈಗ ಟೈಂ ಎಷ್ಟು”ಎಂದು ಕೇಳುವ ಮೂಲಕ ಲಂಕೇಶ್ ಪತ್ರಿಕೆಯಲ್ಲಿ ಅಗ್ರ ಲೇಖನವನ್ನೇ ಬರೆದು ಬಿಟ್ಟಿದ್ದರು.ಮುತ್ಸದ್ದಿ ನಾಯಕ ನಿಜಲಿಂಗಪ್ಪನವರ ಸುಧೀರ್ಘ ರಾಜಕೀಯ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಅವಲೋಕಿಸುವುದಾದರೆ ಪಾಟೀಲರಷ್ಟೇ ಅಲ್ಲ ಆತ್ಮೀಯ ಒಡನಾಡಿಯಾಗಿ ಅವರ ಮಾರ್ಗದರ್ಶನದಲ್ಲಿಯೇ ದೀರ್ಘ ಕಾಲದ ರಾಜಕಾರಣದ ಗರಡಿಯಲ್ಲಿ ಪಳಗಿ ಪಕ್ವಗೊಂಡು ‘ಲವ ಕುಶ’ ರೆಂದೇ ಖ್ಯಾತಿ ಪಡೆದಿದ್ದ ಇನ್ನೋರ್ವ ಶಿಷ್ಯ ರಾಷ್ಟ್ರ ನಾಯಕ ರಾಮಕೃಷ್ಣ ಹೆಗ್ಡೆಯವರದು ಕೂಡ ಹೆಗ್ಗಳಿಕೆಯ ರಾಜಕಾರಣ ಅಲ್ವಾ?.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button