ಜಿಲ್ಲಾ ಮಟ್ಟದ ಸಮಾಜ ವಿಜ್ಞಾನ ವಿಷಯ ಕಾರ್ಯಾಗಾರ ಒತ್ತಡ ಅಲ್ಲ ನಮ್ಮ ಜವಾಬ್ದಾರಿ – ಎಂ.ವಿವೇಕಾನಂದ.
ಇಲಕಲ್ಲ ಜ. 16

ಎಸ್.ಎಸ್.ಎಸ್.ಎಲ್ ಮಕ್ಕಳಿಗೆ ಅಚ್ಚು ಕಟ್ಟಾಗಿ ಪರೀಕ್ಷೆ ಬರೆಯುವ, ಅಧ್ಯಯನ ಮಾಡುವ ತಂತ್ರಗಳನ್ನು ಶಿಕ್ಷಕರು ತಿಳಿಸಬೇಕು, ವಿದ್ಯಾಥರ್ಗಳಿಂದ ಪರೀಕ್ಷೆಗೆ ಪೂರಕವಾಗುವ ರೀತಿಯಲ್ಲಿ ಅಭ್ಯಾಸದ ಕೆಲಸಗಳನ್ನು ಮಾಡಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ವಿವೇಕಾನಂದ ಹೇಳಿದರು.ಇಲಕಲ್ಲ ಎಸ್.ಎಸ್ ಕಂಠಿ ಬಾಲಕಿಯರ ಪ್ರೌಢ ಶಾಲೆಯ ಸಂಭಾಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಸಮಾಜ ವಿಜ್ಞಾನ ವಿಷಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಪರೀಕ್ಷೆ ಹತ್ತಿರ ಬಂದಾಗ ಜಿಲ್ಲಾ ಮಟ್ಟದ ಕಾರ್ಯಾಗಾರ ಮಾಡುವ ಮೂಲಕ ಫಲಿತಾಂಶ ಸುಧಾರಣೆ ತಂತ್ರಗಳನ್ನು ರೂಪಿಸಿರುವುದು ಉತ್ತಮ ಕಾರ್ಯ. ಮಕ್ಕಳ ಸಮಸ್ಯೆಗಳನ್ನು ತಿಳಿಯುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಈ ವರ್ಷ ಶೇ 100 ರಷ್ಟು ಫಲಿತಾಂಶ ನಮ್ಮ ಜಿಲ್ಲೆಯದಾಗಬೇಕು. ಇದು ಒತ್ತಡ ಅಲ್ಲ ನಮ್ಮ ಜವಾಬ್ದಾರಿ ಎಂದು ಎಲ್ಲ ಶಿಕ್ಷಕರು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಜ್ಞಾನ ಸಿರಿ, ಸವಿ ಸಿರಿ, ಏಣಿ ಪುಸ್ತಕವನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯ ಬಿ.ಕೆ ನಂದನೂರ ಬಿಡುಗಡೆ ಮಾಡಿ ಮಾತನಾಡಿ ಈ ಮೂರು ಪುಸ್ತಕಗಳು ಮಕ್ಕಳ ಕಲಿಕೆಗೆ ಉತ್ತಮವಾಗಿದ್ದು ಮಕ್ಕಳು ಇವುಗಳನ್ನು ಬಳಸಿ ಕೊಂಡು ಉತ್ತಮ ಫಲಿತಾಂಶ ಪಡೆಯಬೇಕು. ಗುಣಾತ್ಮಕ ಶಿಕ್ಷಣ ಪಾಲಕರ ಆಸೆಯಾಗಿದ್ದು ಶಿಕ್ಷಕರು ಜವಾಬ್ದಾರಿಯಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು ಎಂದರು. ಅಧ್ಯಕ್ಷತೆಯನ್ನು ಇಲಕಲ್ಲ ವಿಜಯ ಮಹಾಂತೇಶ ವಿದ್ಯಾ ವರ್ಧಕ ಸಂಘದ ಸದಸ್ಯ ಪ್ರಶಾಂತ ಪಟ್ಟಣಶೆಟ್ಟಿ ಮಾತನಾಡಿ ಜಿಲ್ಲೆಯ ಎಲ್ಲ ಸಮಾಜ ವಿಜ್ಞಾನ ಶಿಕ್ಷಕರು ಒಂದು ಕಡೆ ಒಗ್ಗೂಡಿ ಉತ್ತಮ ಫಲಿತಾಂಶಕ್ಕೆ ಕಾರ್ಯಾಗಾರ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.

ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮೀನ ಕಿಲ್ಲೆದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲಾ ವಿಷಯ ಪರಿವೀಕ್ಷಕ ಡಿ.ಎಂ.ಯಾವಗಲ್, ಎಸ್.ಎಸ್ ಹಾಲವರ, ವಾಯ್.ಬಿ ಸಾಲಿ, ಕ್ಷೇತ್ರ ಸಮನ್ವಯಾಧಿಕಾರಿ ಸದಾಶಿವ ಗುಡಗುಂಟಿ, ತಾಲೂಕು ಸಮಾಜ ವಿಜ್ಞಾನ ವಿಷಯ ನೋಡಲ ಅಧಿಕಾರಿ ಎಂ.ಪಿ ಗೋಟೂರ, ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಜಿ ತಿಪ್ಪರಡ್ಡಿ, ಎ.ಆರ್ ಹಂಚನಾಳ, ಹುನಗುಂದ-ಇಲಕಲ್ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂಗಣ್ಣ ಗದ್ದಿ, ಕಾರ್ಯದರ್ಶಿ ಡಿ.ಬಿ ನಧಾಪ ಮುಂತಾದವರು ಇದ್ದರು. ಜಿಲ್ಲೆಯ 340 ಕ್ಕೂ ಅಧಿಕ ಸಮಾಜ ವಿಜ್ಞಾನ ವಿಷಯ ಶಿಕ್ಷಕರು ಭಾಗವಹಿಸಿದರು. ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿ ಮಹದೇವಪ್ಪ ಕುಂದರಗಿ ನಾಲ್ಕು ಗಂಟೆ ಉತ್ತಮ ಫಲಿತಾಂಶದ ತಂತ್ರಗಳನ್ನು ತಿಳಿಸಿದರು.
ಬಾಕ್ಸ್ ಸುದ್ದಿ:-
ಇಲಕಲ್ಲ ಎಸ್.ಎಸ್ ಕಂಠಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಜಿಲ್ಲಾ ಮಟ್ಟದ ಸಮಾಜ ವಿಜ್ಞಾನ ವಿಷಯ ಕಾರ್ಯಾಗಾರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ವಿವೇಕಾನಂದ ಉದ್ಘಾಟಿಸಿದರು.
ಬಾಕ್ಸ್ ಸುದ್ದಿ:-
ಇಲಕಲ್ಲ ಎಸ್.ಎಸ್ ಕಂಠಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಜಿಲ್ಲಾ ಮಟ್ಟದ ಸಮಾಜ ವಿಜ್ಞಾನ ವಿಷಯ ಕಾರ್ಯಾಗಾರದಲ್ಲಿ ಜ್ಞಾನ ಸಿರಿ, ಸವಿ ಸಿರಿ, ಏಣಿ ಪುಸ್ತಕವನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯ ಬಿ.ಕೆ ನಂದನೂರ ಬಿಡುಗಡೆ ಮಾಡಿದರು.
ವರದಿ : ಡಾ, ಆದಪ್ಪ.ಮಲ್ಲಪ್ಪ.ಗೊರಚಿಕ್ಕನವರ ಕೂಡಲ ಸಂಗಮ.