ವಿ.ಮ.ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಶಾಂತಿಯುತ ಮತದಾನ – ಮತ ಎಣಿಕೆ ಮತ್ತು ಫಲಿತಾಂಶ ವಿಳಂಬ.
ಹುನಗುಂದ ಜ.21

ಪಟ್ಟಣದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕಿನ ನಿರ್ದೇಶಕ ಮಂಡಳಿಗೆ ರವಿವಾರ ವಿಎಂಎಸ್ಆರ್ ವಸ್ತ್ರದ ಕಾಲೇಜ್ ಮೈದಾನದಲ್ಲಿ ನಡೆದ 18 ಸ್ಥಾನದ ಚುನಾವಣೆಯು ಶಾಂತಿಯುತ ಮತದಾನ ನಡೆಯಿತು. 38 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.ಹೌದು ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕಿನ 19 ಸ್ಥಾನಗಳ ಪೈಕಿ ಒಂದು ಸ್ಥಾನ ಈ ಮೊದಲು ಅವಿರೋಧವಾಗಿ ಆಯ್ಕೆಯಾಗಿದ್ದು. 18 ಸ್ಥಾನಗಳ ಚುನಾವಣೆಯ ಮತದಾನ ಆರಂಭದಲ್ಲಿ ಮಂದಗತಿ ಯಿಂದ ಸಾಗಿ ಮಧ್ಯಾಹ್ನದ ನಂತರ ಚುರುಕು ಪಡೆದು ಕೊಂಡಿತು.ಬ್ಯಾಂಕಿನ ಪ್ರಧಾನ ಕಚೇರಿ ಸೇರಿದಂತೆ 11 ಶಾಖೆಗಳ ಒಟ್ಟು 23,604 ಸದಸ್ಯರು ಮತದಾನದ ಹಕ್ಕು ಪಡೆದು ಕೊಂಡಿದ್ದರು.

ಅದರಲ್ಲಿ 16,105 (ಶೇ/ 68.23) ಮತದಾರರು ಮತ ಚಲಾಯಿಸಿದ್ದಾರೆ. ಮತದಾನಕ್ಕೆ ವಿವಿಧ ಜಿಲ್ಲೆ ಮತ್ತು ತಾಲೂಕುಗಳಿಂದ ಆಗಮಿಸಿದ ಸಾವಿರ ಸಾವಿರ ಮತದಾರರು ಮತ್ತು ವಾಹನಗಳು ಚಿತ್ತವಾಡಗಿ ಕ್ರಾಸ್ನಿಂದ ಹಿಡಿದು ಶ್ರೀ ವಿಎಂಎಸ್ಆರ್ ವಸ್ತ್ರದ ಕಾಲೇಜ್ ಮೈದಾನದ ವರೆಗೆ ಜನಸಾಗರವೋ ಜನಸಾಗರ ಕಂಡು ಬಂದಿತು. ಇದರಿಂದ ವಾಹನ ಸವಾರರು ಮತ್ತು ಕಾಲ್ನಡಿಗೆಯಲ್ಲಿ ಹೋಗುವ ಮತದಾರರು ಮತದಾನದ ಸ್ಥಳಕ್ಕೆ ಹೋಗಲು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.38 ಜನ ಅಭ್ಯರ್ಥಿಗಳ ಭವಿಷ್ಯ ಭದ್ರ ಪಡಿಸಿದ ಮತ ಪೆಟ್ಟಿಗೆಗಳನ್ನು ನ್ಯಾಯಾಲಯದ ತೀರ್ಪಿನ ವರೆಗೂ ಸೂಕ್ತ ಪೊಲೀಸ್ ಬಂದೂಬಸ್ತ್ ನಲ್ಲಿ ತಾಲೂಕ ಖಜಾನೆ ಇಲಾಖೆಯಲ್ಲಿ ಇರಿಸಲಾಗಿದೆ.
ಬಾಕ್ಸ್ ಸುದ್ಧಿ:- ಗುರುತಿನ ಚೀಟಿ ನೀಡುವಲ್ಲಿ ಗೊಂದಲ,
ಮತದಾನ ನಡೆಯುವ ಆವರಣದ ಮುಂಭಾಗದಲ್ಲಿರುವ ಗುರುತಿನ ಚೀಟಿ ವಿತರಿಸುವ ಸ್ಥಳದಲ್ಲಿ ಸಿಬ್ಬಂದಿಯ ಕೊರತೆ ಮತ್ತು ತಾಂತ್ರಿಕ ಅಡಚಣೆಯಿಂದ ಗುರುತಿನ ಚೀಟಿ ಪಡೆಯುವಲ್ಲಿ ಜನಸಂದಣಿಯ ಜೊತೆಗೆ ಮತದಾರರು ಪರದಾಡುವ ದೃಶ್ಯ ಕಂಡು ಬಂದಿತು. ಇದರಿಂದ ನೂರಾರು ಜನ ಮತದಾರರು ಮತದಾನದ ಪ್ರಕ್ರಿಯೆಯಿಂದ ಹಿಂದುಳಿದರು.
ಬಾಕ್ಸ್ ಸುದ್ಧಿ:- ಫಲಿತಾಂಶ ವಿಳಂಬ,
ಬ್ಯಾಂಕಿಗೆ ರವಿವಾರ ನಡೆದ ಮತದಾನದ ಫಲಿತಾಂಶ ವಿಳಂಬವಾಗುವ ಸಾಧ್ಯತೆ ಇದೆ. ಇದಕ್ಕೆ ಪ್ರಮುಖ ಕಾರಣ ಬ್ಯಾಂಕಿನ ಮತದಾರ ಅಂತಿಮ ಪಟ್ಟಿಯಿಂದ ಕೆಲ ಸದಸ್ಯರ ಹೆಸರನ್ನು ಕೈಬಿಟ್ಟಿದ್ದರಿಂದ ಅವರು ನ್ಯಾಯಾಲಯಕ್ಕೆ ಹೋಗಿ ಮತದಾನದ ಹಕ್ಕು ಪಡೆದು ಕೊಂಡು ಅವರು ಸಹ ಮತ ಚಲಾಯಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ಪ್ರಕರಣ ಇತ್ಯರ್ಥ ಆಗುವರೆಗೂ ಮತ ಎಣಿಕೆ ಮತ್ತು ಫಲಿತಾಂಶಕ್ಕಾಗಿ ಕಾಯಬೇಕಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಬಿ.ಬಂಡರಗಲ್ಲ.ಹುನಗುಂದ