ದೇವರ ಎತ್ತುಗಳ ಸೇವೆಯ ಮೂಲಕ ಬಸವ ಜಯಂತಿಯ ಆಚರಣೆ ಶ್ಲಾಘನೀಯ – ಗೋಪ್ರೇಮಿ.ಮಹೇಶ್.
ಚಳ್ಳಕೆರೆ ಮೇ.05

ಶ್ರೀಶಾರದಾಶ್ರಮದ ಸದ್ಭಕ್ತರು ದೇವರ ಎತ್ತುಗಳ ಸೇವೆಯ ಮೂಲಕ ಬಸವ ಜಯಂತಿಯನ್ನು ಆಚರಿಸುತ್ತಿರುವ ಬಹಳ ಅರ್ಥ ಪೂರ್ಣವಾಗಿದೆ ಎಂದು ದೇವರ ಎತ್ತುಗಳ ಮೇಲ್ವಿಚಾರಕ ಮಹೇಶ್ ತಿಳಿಸಿದರು. ತಾಲೂಕಿನ ನಾಯಕನಹಟ್ಟಿ ಹೋಬಳಿಯ ನೆಲಗೇತನಹಟ್ಟಿ ಸಮೀಪದ ಚೆನ್ನಕೇಶವ ಸ್ವಾಮಿಯ ದೇವರ ಎತ್ತುಗಳಿಗೆ ಜಗಜ್ಯೋತಿ ಬಸವೇಶ್ವರರ 892 ನೇ. ಜಯಂತ್ಯುತ್ಸವದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಹಮ್ಮಿಕೊಂಡಿದ್ದ “ಗೋಪೂಜೆ ಮತ್ತು ಒಂದು ಲೋಡ್ ರಾಗಿ ಹುಲ್ಲಿನ ವಿತರಣಾ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಾತ್ಮರ ಜಯಂತಿಗಳ ಹೆಸರಿನಲ್ಲಿ ಲಕ್ಷಗಟ್ಟಲೆ ಹಣ ದುಂದುವೆಚ್ಚ ಮಾಡುವ ಬದಲು ಈ ರೀತಿ ದೇವರ ಎತ್ತುಗಳಿಗೆ ಬೇಕಾದ ಹುಲ್ಲು, ನೀರು ಮತ್ತು ನೆರಳಿನ ವ್ಯವಸ್ಥೆ ಮಾಡುವ ಮೂಲಕ ಆಚರಿಸ ಬೇಕಿದ್ದು ಇದಕ್ಕೆ ಮಾದರಿಯಾಗಿ ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರು ಗೋ ಸೇವೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಯಾಗಿದೆ ಎಂದರು.ಇಂತಹ ದೇವರ ಎತ್ತುಗಳನ್ನು ಉಳಿಸಿ ಸಂರಕ್ಷಿಸುವ ಅಗತ್ಯವಿದೆ ಎಂದು ಹೇಳಿದರು.
ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥೆ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಮಾತನಾಡಿ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗೋವು ಜನ ಜೀವನದ ಮೇಲೆ ಆಳವಾದ ಪ್ರಭಾವ ಬೀರಿದ್ದು ಪ್ರತಿಯೊಂದು ಶುಭ ಕಾರ್ಯಗಳಲ್ಲಿ ಗೋವನ್ನು ಪೂಜಿಸುವ ಸಂಸ್ಕೃತಿಯನ್ನು ಕಾಣುತ್ತೇವೆ. ದೇವರ ಎತ್ತುಗಳಿಗೆ ಗೋಪೂಜೆ ಮತ್ತು ಹುಲ್ಲು ವಿತರಣೆಯ ಮೂಲಕ ಬಸವ ಜಯಂತಿಯನ್ನು ಮಾಡುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ಹೇಳಿದರು.

ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ಗೋಪೂಜೆ ಮತ್ತು ರಾಗಿ ಹುಲ್ಲಿನ ವಿತರಣಾ ಕಾರ್ಯಕ್ರಮದ ಮೂಲಕ ಬಸವ ಜಯಂತಿ ಆಚರಣೆಯ ಹಿನ್ನೆಲೆ ಮತ್ತು ಮಹತ್ವದ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ದೇವರ ಎತ್ತುಗಳಿಗೆ ಬಾಳೆಹಣ್ಣು, ಇಂಡಿ ಮತ್ತು ಒಂದು ಲೋಡ್ ರಾಗಿ ಹುಲ್ಲನ್ನು ವಿತರಿಸಿ ಕಿಲಾರಿ ಮತ್ತು ಗೋಪಾಲಕರನ್ನು ಶ್ರೀಶಾರದಾಶ್ರಮದ ವತಿಯಿಂದ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಎಂ.ಗೀತಾ ನಾಗರಾಜ್, ಜಯಮ್ಮ, ನರಸಿಂಹಮೂರ್ತಿ, ಗೀತಾ ಸುಂದರೇಶ್, ಶಿಕ್ಷಕ ಬೋರಯ್ಯ, ಕಿಲಾರಿ ಶಿವಕುಮಾರ್, ಶಿವಮೂರ್ತಿ , ಪಾಪಯ್ಯ, ಪುರಂದರ, ಕುಮಾರ್, ಶಿವು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.