ಕಷ್ಟಗಳ ಕುಲಕ್ಕೆ ಮಾರಕ ನಲಿವಿನ ಬದುಕಿಗೆ ತಾರಕ ಶ್ರೀರಾಮರಕ್ಷಾ ಸ್ತೋತ್ರ – ಶಿವಮಾಲಾ ಜೈರಾಮ್ ಅನಿಸಿಕೆ.
ಚಳ್ಳಕೆರೆ ಜು.17

ಬುಧಕೌಶಿಕ ಋಷಿ ವಿರಚಿತ ಶ್ರೀರಾಮರಕ್ಷಾ ಸ್ತೋತ್ರ ಪಠಣವು ಕಷ್ಟಗಳ ಕುಲಕ್ಕೆ ಮಾರಕ ನಲಿವಿನ ಬದುಕಿಗೆ ತಾರಕ ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯೆ ಹಾಗೂ ಶಿಕ್ಷಕಿ ಶ್ರೀಮತಿ ಶಿವಮಾಲಾ ಜೈರಾಮ್ ತಿಳಿಸಿದರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ವಾರದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಕಷ್ಟಗಳ ಕುಲಕ್ಕೆ ರಾಮಬಾಣ ಶ್ರೀರಾಮರಕ್ಷಾ ಸ್ತೋತ್ರ ಪಠಣ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು.

ಶ್ರೀರಾಮರಕ್ಷಾ ಸ್ತೋತ್ರದ ಶ್ಲೋಕಗಳು ಶಿವನೇ ಬುಧಕೌಶಿಕ ಋಷಿಗೆ ದರುಶನವಿತ್ತು ಶ್ರುತಿರೂಪದಲ್ಲಿ ತಿಳಿಸಿದವುಗಳಾಗಿದ್ದು ಬೆಳಗ್ಗೆ ಎದ್ದು ಋಷಿಯಿಂದ ಬರೆಯಲ್ಪವುಗಳಾಗಿವೆ. ಶ್ರೀರಾಮರಕ್ಷಾ ಸ್ತೋತ್ರವನ್ನು ನಿಷ್ಠೆಯಿಂದ ಪಾರಾಯಣ ಮಾಡಿದರೆ ಅದು ವಜ್ರಪಂಜರದಂತೆ ವ್ಯಕ್ತಿಯನ್ನು ಎಂಥ ಕಷ್ಟನಷ್ಟಗಳ ಹೊಡೆತದಿಂದಲೂ ರಕ್ಷಿಸುತ್ತದೆ.

ಈ ಸ್ತೋತವು ವ್ಯಕ್ತಿಯ ದೇಹದ ಎಲ್ಲಾ ಅಂಗಾಂಗಗಳನ್ನು ರಕ್ಷಿಸಿ ಕಾಪಾಡುತ್ತದೆ. ಜೀವನದ ಸಕಲ ಸಂಕಟ ಕಂಟಕಗಳನ್ನು ದೂರಮಾಡಿ ಸರ್ವ ಸಂಪತ್ತನ್ನೂ ಕೊಡಿಸುವ ಈ ಸ್ತೋತ್ರವನ್ನು ಪ್ರತಿಯೊಬ್ಬರೂ ಪ್ರತಿದಿನ ಭಕ್ತಿಯಿಂದ ಪಠಿಸಿ ಸಾರ್ಥಕ ಜೀವನ ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.
ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಗೀತಾ ಪ್ರಕಾಶ್, ತಿಪ್ಪಮ್ಮ ಉಮಾಶಂಕರ್, ಪ್ರಮೀಳಾ ಜಗದೀಶ್, ನಾಗರತ್ನಮ್ಮ, ಸುವರ್ಣ ನಾಗರಾಜ್, ಶೋಭಾ ರಮೇಶ್ ಅವರಿಂದ ವಿಶೇಷ ಭಜನೆ, ಯತೀಶ್ ಎಂ ಸಿದ್ದಾಪುರ ಅವರಿಂದ ಶ್ರೀಶಾರದಾದೇವಿ ಜೀವನಗಂಗಾ ಗ್ರಂಥ ಪಾರಾಯಣ, ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ವಿಶೇಷ ಸತ್ಸಂಗ ಸಭೆಯಲ್ಲಿ ಎಚ್ ಲಕ್ಷ್ಮೀದೇವಮ್ಮ, ಪ್ರೇಮಾ, ದ್ರಾಕ್ಷಾಯಣಿ, ಭೀಮಕ್ಕ, ಅನುಸೂಯ, ರಾಘವೇಂದ್ರ, ಸೌಮ್ಯ ಪ್ರಸಾದ್, ಗೀತಾ ಸುಂದರೇಶ್ ದೀಕ್ಷಿತ್, ಸರಸ್ವತಿ ನಾಗರಾಜ್ ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
