ಸಂಸಾರ ಮತ್ತು ದೇಹದ ದುಃಖವನ್ನು ಪರಿಹರಿಸುವವನು ಭವರೋಗ ವೈದ್ಯ ಶ್ರೀಕೃಷ್ಣ – ಪ್ರಮೋದಾ ಆನಂದ.
ಚಳ್ಳಕೆರೆ ಸೆ.16

ಭವ ಸಾಗರವಾದ ಸಂಸಾರದ ದುಃಖ ಮತ್ತು ದೇಹದ ರೋಗವನ್ನು ನಿವಾರಿಸುವವನು ಭವರೋಗ ವೈದ್ಯನಾದ ಶ್ರೀಕೃಷ್ಣ ಎಂದು ಚಳ್ಳಕೆರೆಯ ಆಧ್ಯಾತ್ಮಿಕ ಚಿಂತಕಿ ಶ್ರೀಮತಿ ಪ್ರಮೋದಾ ಆನಂದ ಅಭಿಪ್ರಾಯ ಪಟ್ಟರು.
ನಗರದ ವಾಲ್ಮೀಕಿ ನಗರದ ಸದ್ಭಕ್ತರಾದ ಶ್ರೀಮತಿ ಜಯಮ್ಮ ನರಸಿಂಹಮೂರ್ತಿ ಅವರ ಮೇಘಶ್ರೀ ನಿವಾಸದಲ್ಲಿ “ಶ್ರೀಕೃಷ್ಣ ಜನ್ಮಾಷ್ಟಮಿ”ಯ ಪ್ರಯುಕ್ತ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಶ್ರೀಮದ್ ಭಗವದ್ಗೀತೆಯ ಮಹಾದ್ವಾರಗಳು” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮನುಷ್ಯ ನಾನು,ನನ್ನದು, ನನ್ನಿಂದ ಎಂಬ ಅಹಂಕಾರದ ಭಾವನೆಯನ್ನು ತೊರೆದು ವಿಶಾಲತೆ, ನಿರ್ಲಿಪ್ತತೆಯನ್ನು ರೂಢಿಸಿ ಕೊಂಡು ಭಗವಂತನಲ್ಲಿ ಶರಣಾಗತಿಯನ್ನು ಬೆಳೆಸಿ ಕೊಂಡರೆ ಭಕ್ತನ ಯೋಗಕ್ಷೇಮವನ್ನು ಶ್ರೀಕೃಷ್ಣ ನೋಡಿ ಕೊಳ್ಳುತ್ತಾನೆಂದು ಶ್ರೀಮದ್ ಭಗವದ್ಗೀತೆಯು ತಿಳಿಸುತ್ತದೆ ಎಂಬುದಾಗಿ ಅವರು ವಿವರಿಸಿದರು.
ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ , ಶ್ರೀರಾಮಕೃಷ್ಣರ ನಾಮಸ್ಮರಣೆ, ಶ್ರೀವಿಷ್ಣು ಸಹಸ್ರನಾಮ ಪಾರಾಯಣ, ನಂದನ್ ವಿಶೃತ್ ಅವರಿಂದ ಶ್ರೀಮದ್ ಭಗವದ್ಗೀತೆಯ ಜ್ಞಾನಯೋಗದ ಶ್ಲೋಕಗಳ ಪಠಣ, ಗಾನಲಹರಿ ಸಂಗೀತ ಶಾಲೆಯ ಮುಖ್ಯಸ್ಥರಾದ ಲಕ್ಷ್ಮೀ ವಂಶಿಕೃಷ್ಣ, ಗೀತಾ ಪ್ರಕಾಶ್ , ತಿಪ್ಪಮ್ಮ ಉಮಾಶಂಕರ್, ಮೃದಂಗ ಶ್ರೀನಿವಾಸ್ ನೇತೃತ್ವದಲ್ಲಿ ವಿಶೇಷ ಶ್ರೀಕೃಷ್ಣ ಭಜನೆಗಳು, ಆರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು.
ವಿಶೇಷ ಸತ್ಸಂಗದಲ್ಲಿ ಜಯಮ್ಮ, ನರಸಿಂಹಮೂರ್ತಿ, ಹೆಚ್ ಲಕ್ಷ್ಮೀದೇವಮ್ಮ, ದಾಕ್ಷಾಯಣಿ, ಸರಸ್ವತಮ್ಮ, ಗೋವಿಂದರಾಜು, ಯತೀಶ್ ಎಂ ಸಿದ್ದಾಪುರ, ಗೋವಿಂದಶೆಟ್ಟಿ, ಗೀತಾ ಸುಂದರೇಶ್, ಸರಸ್ವತಿ, ಉಷಾ, ಗಿರಿಜಾ,ಪಂಕಜಾ, ಅನಿತಾ,ಉಮಾ,ಕಲ್ಪನಾ,ಪ್ರೇಮಾ, ವಿಶಾಲಾಕ್ಷಿ ಪುಟ್ಟಣ್ಣ ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

