ಪಿ.ಶೇಷಾದ್ರಿ ನಿರ್ದೇಶನದಲ್ಲಿ ಭರದಿಂದ ಸಾಗಿದ – ‘ಪಂಚಾಯಿತಿ’ ಚಿತ್ರೀಕರಣ.
ಶಿವಳ್ಳಿ ಆ.09

ನೇಟಿವ್ ಕ್ರಿಯೆಶನ್ಸ್ ಅಡಿಯಲ್ಲಿ ದೊಡ್ಡ ನಾಗಯ್ಯ ನಿರ್ಮಿಸುತ್ತಿರುವ ಹಿರಿಯ ನಿರ್ದೇಶಕ ಪಿ.ಶೇಷಾದ್ರಿ ನಿರ್ದೇಶನದಲ್ಲಿ “ಪಂಚಾಯಿತಿ” ಕನ್ನಡ ಚಲನಚಿತ್ರದ ಚಿತ್ರೀಕರಣ ಧಾರವಾಡ ಸಮೀಪದ ಶಿವಳ್ಳಿಯಲ್ಲಿ ಭರದಿಂದ ಸಾಗಿದೆ.
ಹುಬ್ಬಳ್ಳಿ, ಶಿವಳ್ಳಿ, ಹೆಬಸೂರ ಗ್ರಾಮಗಳಲ್ಲಿ ಮತ್ತು ಸುತ್ತಮುತ್ತ ಕಳೆದೊಂದು ವಾರದಿಂದ ಚಿತ್ರೀಕರಣ ಭರದಿಂದ ಸಾಗಿದೆ.
ಪಿ.ಶೇಷಾದ್ರಿ ಚಿತ್ರವೆಂದರೆ ತುಂಬಾ ಅಚ್ಚುಕಟ್ಟು ಎಂಬುದರಲ್ಲಿ ಎರಡು ಮಾತಿಲ್ಲ. ರಾಷ್ಟ್ರ, ರಾಜ್ಯಗಳ ಒಟ್ಟು ೧೩ ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡಿರುವ ಪಿ.ಶೇಷಾದ್ರಿ ಚಿತ್ರರಂಗ ಕಂಡ ಒಬ್ಬ ಅತ್ಯುತ್ತಮ ಹಿರಿಯ ನಿರ್ದೇಶಕ. ಕಥೆಯ ಆಯ್ಕೆಯಿಂದ ಪಾತ್ರಗಳ ವರೆಗೆ, ಪ್ರಾದೇಶಿಕತೆಯ ವೇಷಭೂಷಣ, ಸಂಭಾಷಣೆ, ಸಂಕಲನ ವರೆಗೂ ಅತಿ ಸೂಕ್ಷ್ಮವಾಗಿ ಗಮನಿಸುತ್ತಾರೆ.
ಅವರ ಚಿತ್ರಗಳಲ್ಲಿ ಸಮಾಜಕ್ಕೊಂದು ಗಟ್ಟಿಯಾದ ಸಂದೇಶ ಖಂಡಿತ ಇರುತ್ತದೆ. ಈ ಚಿತ್ರದಲ್ಲಿ ಹಾಲಳ್ಳಿ ಉತ್ತರ ಕರ್ನಾಟಕದ ಒಂದು ಹಳ್ಳಿ. ಅಲ್ಲಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಡೆಯುವ ರಾಜಕೀಯವೇ ಈ ಚಲನ ಚಿತ್ರದ ಕಥಾವಸ್ತು.

ಮುಖ್ಯ ಪಾತ್ರಧಾರಿ ಪಾಟೀಲ ಇಲ್ಲಿ ಒಬ್ಬ ವ್ಯಕ್ತಿ ಮಾತ್ರವಲ್ಲ ಇಂದಿನ ರಾಜಕೀಯ ವ್ಯವಸ್ಥೆಯ ಪ್ರತಿನಿಧಿ. ಪಂಚಾಯಿತಿಯ ಅಧ್ಯಕ್ಷನ ಹಠಾತ್ ನಿಧನದಿಂದ ಆರಂಭವಾಗುವ ಸಂಘರ್ಷ ಕ್ರಮೇಣ ಇಡೀ ಊರಿನ ರಾಜಕೀಯ ಸ್ವರೂಪವನ್ನೇ ಬದಲಿಸುತ್ತದೆ. ಇಲ್ಲಿ ಸಿದ್ಧಾಂತಕ್ಕಿಂತ ಅವಕಾಶ ಮುಖ್ಯವಾಗುತ್ತದೆ.
ಚುನಾವಣಾ ಕಣಕ್ಕೆ ಸ್ಥಳೀಯ ಶಾಸಕರ ಪ್ರವೇಶ, ಹಣ, ಜಾತಿ-ಸಾಮಾಜಿಕ ಸಮೀಕರಣ ಮತ್ತು ಸ್ಥಳೀಯ ಅಸಮಾಧಾನಗಳು ಒಂದೊಂದಾಗಿ ಸೇರುತ್ತವೆ. ಇಲ್ಲಿ ಅಂತಿಮವಾಗಿ ಎಲ್ಲರೂ ಗೆಲ್ಲಲು ಪ್ರಯತ್ನಿಸುತ್ತಾರೆ. ಆದರೆ ಎಲ್ಲರೂ ಸೋಲುತ್ತಾರೆ. “ಪಂಚಾಯಿತಿ” ಯ ಅಂತ್ಯದಲ್ಲಿ ಉಳಿಯುವ ಪ್ರಶ್ನೆ — ಯಾರು ಗೆದ್ದರು? — ಎನ್ನುವುದಲ್ಲ. “ಈ ಆಟದಲ್ಲಿ ಉಳಿದದ್ದು ಏನು?” ಎಂಬುದು.

ಈ ಚಿತ್ರವನ್ನು ರಾಷ್ಟ್ರಪ್ರಶಸ್ತಿ ವಿಜೇತ ಹಿರಿಯ ನಿರ್ದೇಶಕ ಪಿ.ಶೇಷಾದ್ರಿ ಚಿತ್ರಕತೆ ಬರೆದು ನಿರ್ದೇಶಿಸುತ್ತಿದ್ದಾರೆ. ಕಥೆ ಅರವಿಂದ ಮಿತ್ರ, ಛಾಯಾಗ್ರಹಣ ಗುರುಪ್ರಸಾದ್ ಕಾಶಿ. ಸಂಕಲನ ಕೆಂಪರಾಜ್. ಪಿ ಆರ್ ಓ ಆಗಿ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ್ ಹಂಡಿಗಿ, ಸಹ ನಿರ್ದೇಶಕರಾಗಿ ಟಿ.ಆರ್. ಪ್ರಭು, ವಿದ್ಯಾಶ್ರೀ , ಪ್ರಕಾಶ್ ಬದ್ನಿ ಕಾರ್ಯ ನಿರ್ವಹಿಸಿದ್ದಾರೆ. ದೊಡ್ಡ ನಾಗಯ್ಯ ಬಂಡವಾಳ ಹೂಡಿದ್ದಾರೆ.
ವಿಶೇಷವೆಂದರೆ ಚಿತ್ರದಲ್ಲಿ ಸಂಪೂರ್ಣ ಉತ್ತರ ಕರ್ನಾಟಕದ ಸ್ಥಳೀಯ ಕಲಾವಿದರನ್ನು ಒಳ ಗೊಂಡಿದ್ದು ಮುಖ್ಯ ಭೂಮಿಕೆಯಲ್ಲಿ ಗೋಕುಲ್ ರಾಜ್, ಬಿಂದು, ಜಗದೀಶ್ ಮೂಕಿ, ಶ್ರುತಿ ಬಿಸರಹಳ್ಳಿ, ಬಸವರಾಜ್ ತಿರ್ಲಾಪುರ ಮುಂತಾದವರು ಇದ್ದಾರೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ
