ಮೊಬೈಲ್ ಬಿಟ್ಟು ಪುಸ್ತಕ ಹಿಡಿಯುವ ಅಗತ್ಯವಿದೆ – ಶರಣ ತತ್ವ ಚಿಂತಕಿ ಡಿ.ಶಬ್ರಿನಾ ಮಹಮ್ಮದ್ ಅಲಿ ಅಭಿಪ್ರಾಯ.
ಚಳ್ಳಕೆರೆ ಮೇ.14

ಇಂದಿನ ಮಕ್ಕಳು ಮತ್ತು ಯುವ ಜನಾಂಗ ಮೊಬೈಲ್ ಬಿಟ್ಟು ಪುಸ್ತಕ ಹಿಡಿಯುವ ಅಗತ್ಯವಿದೆ ಎಂದು ಚಳ್ಳಕೆರೆ ನಗರದ ಶರಣ ತತ್ವ ಚಿಂತಕಿ ಡಿ.ಶಬ್ರಿನಾ ಮಹಮ್ಮದ್ ಅಲಿ ಅಭಿಪ್ರಾಯ ಪಟ್ಟರು. ನಗರದ ತಮ್ಮ ಕನ್ನಡ ಕೌಸ್ತುಭ ಮನೆಯಲ್ಲಿರುವ ಡಾ, ಬಿ.ಆರ್ ಅಂಬೇಡ್ಕರ್ ಗ್ರಂಥಾಲಯಕ್ಕೆ ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಯತೀಶ್.ಎಂ ಸಿದ್ದಾಪುರ ಅವರು ನೀಡಿದ ನೂರಕ್ಕೂ ಹೆಚ್ಚು ಸದ್ಗ್ರಂಥಗಳನ್ನು ಕೊಡುಗೆಯಾಗಿ ಸ್ವೀಕರಿಸಿ ಅವರು ಮಾತನಾಡಿದರು. ಗ್ರಂಥಾಲಯದ ಪುಸ್ತಕಗಳ ಓದಿನಿಂದ ಒಳ್ಳೆಯ ಜ್ಞಾನ ದೊರೆಯುವುದಲ್ಲದೆ ಉತ್ತಮ ಜೀವನದ ನಿರ್ಮಾಣಕ್ಕೆ ನೆರವಾಗುತ್ತದೆ. ಅಲ್ಲದೆ ಸ್ಪರ್ಧಾತ್ಮಕ ಪುಸ್ತಕಗಳ ಅಧ್ಯಯನದಿಂದ ವಿವಿಧ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಿ ಉದ್ಯೋಗ ಪಡೆಯಲು ಸಹಾಯ ಮಾಡುತ್ತದೆ.

ಆದ್ದರಿಂದ ಓದುಗರು ಈ ಗ್ರಂಥಾಲಯದ ಸದುಪಯೋಗ ಪಡೆದು ಕೊಳ್ಳುವಂತೆ ಹಾಗೂ ಪುಸ್ತಕಗಳನ್ನು ದಾನವಾಗಿ ಕೊಡುಗೆಯಾಗಿ ನೀಡುವಂತೆ ಕರೆ ನೀಡಿದರು. ಈ ನಿಟ್ಟಿನಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗುತ್ತಿರುವ ಸಮಾಜ ಸೇವಕ ಯತೀಶ್.ಎಂ ಸಿದ್ದಾಪುರ ಅವರ ಸಮಾಜ ಮುಖಿ ಚಿಂತನೆಗಳು ಮತ್ತು ಕಾರ್ಯಗಳು ಇಂದಿನ ಯುವ ಜನಾಂಗಕ್ಕೆ ಆದರ್ಶವಾಗ ಬೇಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜ ಸೇವಕ ಯತೀಶ್.ಎಂ ಸಿದ್ದಾಪುರ ಮಾತನಾಡಿ ನೂರಕ್ಕೂ ಹೆಚ್ಚು ವಿವಿಧ ಭಾಷೆಯ ಸದ್ಗ್ರಂಥಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡುತ್ತಿರುವುದು ಸಂತಸ ತಂದಿದ್ದು ಓದುಗರು ಇದರ ಸದುಪಯೋಗ ಪಡೆದು ಕೊಳ್ಳಬೇಕು. ಹಾಗೇ ಪ್ರತಿಯೊಂದು ಮನೆಯಲ್ಲಿಯೂ ಈ ತರಹದ ಗ್ರಂಥಾಲಯಗಳ ನಿರ್ಮಾಣದ ಅವಶ್ಯಕತೆಯಿದೆ ಎಂದು ಪ್ರತಿಪಾದಿಸಿದರು.

ಈ ಸಂದರ್ಭದಲ್ಲಿ ಯತೀಶ್.ಎಂ ಸಿದ್ದಾಪುರ ಅವರನ್ನು ಡಿ.ಶಬ್ರಿನಾ ಮಹಮ್ಮದ್ ಅಲಿ ದಂಪತಿಗಳು ಮತ್ತು ಮಕ್ಕಳು ಸನ್ಮಾನಿಸಿದರು. ಈ ಕಾರ್ಯಕ್ರಮದಲ್ಲಿ ಕವಿ ಎಂ.ಓ ಮಹಮ್ಮದ್ ಅಲಿ, ಓದುಗ ಪುಟಾಣಿಗಳಾದ ಇನ್ಷಾ ಎಂ.ಎಸ್, ಶಿಫಾ ಎಂ.ಎಸ್ ವಿಹಾನ್ ಅಲಿ ಎಂ.ಎಸ್ ಉಪಸ್ಥಿತರಿದ್ದರು.
ವರದಿ:ಯತೀಶ್.ಎಂ ಸಿದ್ದಾಪುರ,ಚಳ್ಳಕೆರೆ.