ಪಪಂ ಅಧ್ಯಕ್ಷೆ ಭಾರತಿ ಸುಧಾಕರ ಪಾಟೀಲ್ ರಾಜೀನಾಮೆಗೆ ಒತ್ತಾಯ
ಕೊಟ್ಟೂರು ಮಾರ್ಚ್:29
ಸ್ಥಳೀಯ ಪಟ್ಟಣ ಪಂಚಾಯಿತಿಗೆ ಕಾಂಗ್ರೇಸ್ ಪಕ್ಷದಿಂದ ಅಧ್ಯಕ್ಷೆ ಸ್ಥಾನ ಅಲಂಕರಿಸಿರುವ ಭಾರತಿ ಸುಧಾಕರ ಪಾಟೀಲ್ ಅವರ ಪತಿ ಸುಧಾಕರ ಸೋಮವಾರ ಬಿಜೆಪಿ ಸೇರಿದ್ದರಿಂದ ಅಧ್ಯಕ್ಷರು ತಮ್ಮ ಮುಂದಿನ ನಡೆಯನ್ನು ಬಹಿರಂಗಪಡಿಸಬೇಕು ಎಂದು ಕೊಟ್ಟೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ದಾರುಕೇಶ ಒತ್ತಾಯಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅಧ್ಯಕ್ಷರ ಅವಧಿ ಇನ್ನೂ ಪೂರ್ಣಗೊಂಡಿಲ್ಲ, ಕಾಂಗ್ರೇಸ್ ಚಿಹ್ನೆಯಿಂದ ಗೆದ್ದಿದ್ದಾರೆ. ಪಕ್ಷದ ಬಗ್ಗೆ ಸಹಮತವಿಲ್ಲದಿದ್ದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮತ್ತೊಮ್ಮೆ ಆಯ್ಕೆಯಾಗಿ ಬರಲಿ ಎಂದು ಸಾವಲು ಹಾಕಿದರು.ಪತ್ನಿ ಭಾರತಿ ಪಪಂ ಅಧ್ಯಕ್ಷೆ, ಪತಿ ಸುಧಾಕರ ಬಿಜೆಪಿ, ಈ ಇಬ್ಬಗೆ ನೀತಿ, ಈ ಡ್ರಾಮ ಎಲ್ಲರಿಗೂ ಅರ್ಥವಾಗುತ್ತದೆ. ಪತಿಯ ನಿರ್ಧಾರಕ್ಕೆ ಪತ್ನಿಯೂ ಸಹಮತ ವ್ಯಕ್ತಪಡಿಸುವುದಾದರೆ ಪಪಂ ಅಧ್ಯಕ್ಷೆ ಭಾರತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದರು.
ಕಾಂಗ್ರೇಸ್ ಜಿಲ್ಲಾಧ್ಯಕ್ಷರು ಈ ಕುರಿತು ನಮಗೆ ಮಾಹಿತಿ ಕೇಳಿದ್ದು, ಕೂಡಲೆ ಮಾಹಿತಿ ನೀಡುತ್ತೇನೆ. ಅಧ್ಯಕ್ಷೆ ಭಾರತಿ ವಿರುದ್ದ ಪಕ್ಷದಿಂದ ಕ್ರಮ ಕೈಗೊಳ್ಳುತ್ತಾರೆ ಅಲ್ಲದೆ ಪಕ್ಷದಿಂದಲೂ ನೋಟೀಸ್ ನೀಡಲಾಗುವುದು ಎಂದರು.ಅಧ್ಯಕ್ಷೆ ಭಾರತಿ ಅವರ ಬದಲಾಗಿ ಪತಿ ಸುಧಾಕರ ಅವರೇ ಅಡಳಿತ ನಡೆಸಿದ್ದು ಇಡೀ ಕೊಟ್ಟೂರು ಜನತೆಗೆ ಗೊತ್ತಿದೆ. ಪಟ್ಟಣ ಪಂಚಾಯಿತಿ ಉದ್ಘಾಟನೆ ಸಂದರ್ಭದಲ್ಲಿ ಸುಧಾಕರ ಅವರು, ನನ್ನ ಪತ್ನಿಗೆ ಮಾತನಾಡಲು ಬರುವುದಿಲ್ಲವೆಂದು ವೇದಿಕೆಯೇರಿ ಭಾಷಣ ಮಾಡಿದ್ದನ್ನು ಜನರು ನೋಡಿದ್ದಾರೆ ಮರೆತ್ತಿಲ್ಲ ಎಂದರು.
ಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಗೂಳಿ ಮಲ್ಲಿಕಾರ್ಜುನ, ಪಪಂ ಉಪಾಧ್ಯಕ್ಷ ಶಫಿ, ಎಸ್.ಸಿ. ಘಟಕದ ತಾಲೂಕು ಅಧ್ಯಕ್ಷ ಪರಶುರಾಮ್, ಕಾಂಗ್ರೇಸ್ ಯುವ ಪ್ರದಾನ ಕಾರ್ಯದರ್ಶಿ ಶಿವಕುಮಾರ ಗೌಡ, ಹೊನ್ನೂರು ಸಾಹೇಬ್, ಎಂ.ಎಂ. ಉಮಾಪತಿ, ಕಾಸಲ ಪ್ರಕಾಶ, ಬಡಿಗೇರ್ ಕೊಟ್ರೇಶ, ಆಚೆಮನಿ ಮಲ್ಲಿಕಾರ್ಜುನ, ಕನ್ನಳ್ಳಿ ಮಲ್ಲಿಕಾರ್ಜುನ, ಪಪಂ ಮಾಜಿ ಸದಸ್ಯ ಪೂಜಾರ್ ನಾಗಪ್ಪ, ಅಡಕಿ ಮಂಜುನಾಥ್, ಕೆಂಪಳ್ಳಿ ಗುರುಸಿದ್ದನಗೌಡ, ಸತೀಶ, ಕಾರ್ತೀಕ್ ಮುಂತಾದವರಿದ್ದರು.
ತಾಲೂಕ ವರದಿಗಾರರು: ಪ್ರಧೀಪ ಕುಮಾರ್ ಕೊಟ್ಟೂರು