6ನೇ ಗ್ಯಾರಂಟಿಯಾದ ಅಂಗನವಾಡಿ ಕಾರ್ಯಕರ್ತೆರಿಗೆ ಗೌರವಧನ ಹೆಚ್ಚಿಸಲು ಮನವಿ
ತರೀಕೆರೆ ಜೂನ್.27
ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಕಳೆದ ನಾಲ್ಕು ವರ್ಷಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗಿರುವ ಮೊಬೈಲ್ ಗಳು ಕಳಪೆ ಗುಣಮಟ್ಟದ್ದಾಗಿರುತ್ತದೆ ಎಂದು ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ಪ್ರಧಾನ ಕಾರ್ಯದರ್ಶಿಯಾದ ಬಿ.ಪಿ. ಕಲಾ ಇಂದು ಪ್ರತಿಭಟನೆಯ ಮೂಲಕ ತರೀಕೆರೆ ತಹಶೀಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿ ಮಾತನಾಡಿದರು .

ಕಳಪೆ ಗುಣಮಟ್ಟದ ಮೊಬೈಲ್ ಗಳಲ್ಲಿ ಮಾಹಿತಿ ಸಂಗ್ರಹ ಸೇರಿದಂತೆ ಮತ್ತಿತರ ಕೆಲಸ ನಿರ್ವಹಿಸುವುದು ಕಷ್ಟವಾಗಿರುತ್ತದೆ. ಇದರೊಂದಿಗೆ ಬೇರೆ ಇಲಾಖೆಯಾಗಿರುವ ಆರೋಗ್ಯ ಇಲಾಖೆಯ ಕಾರ್ಯಕ್ರಮದ ಆರೋಗ್ಯ ಸಮೀಕ್ಷೆಯನ್ನು ಅಂಗನವಾಡಿ ಕಾರ್ಯಕರ್ತೆಯರು ನಿರ್ವಹಿಸ ಬೇಕಾಗಿರುತ್ತದೆ.
ಇಲ್ಲವಾದರೆ ಸಮೀಕ್ಷೆ ಮಾಡದಿದ್ದಲ್ಲಿ ಸಸ್ಪೆಂಡ್ ಮಾಡುವುದಾಗಿ, ಗೌರವ ಧನ ಕಡಿತಗೊಳಿಸುವದಾಗಿ, ಶಿಸ್ತುಕ್ರಮ ಕೈಗೊಳ್ಳುವದಾಗಿ, ಬೆದರಿಕೆಯನ್ನು ಒಡ್ಡಲಾಗುತ್ತಿದೆ ಇದು ಅಂಗನವಾಡಿ ಕಾರ್ಯಕರ್ತೆಯರ ಮೇಲೆ ನಡೆಸಲಾಗುತ್ತಿರುವ ಮಾನಸಿಕ ದೌರ್ಜನ್ಯ ಮತ್ತು ಕಿರುಕುಳ ವಾಗಿರುತ್ತದೆ ಎಂದು ಆರೋಪಿಸಿದರು.

ಫೆಡರೇಶೆನ್ ನ ಅಧ್ಯಕ್ಷರಾದ ಸವಿತಾ ಮಾತನಾಡಿ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಆಗುತ್ತಿರುವ ಮೊಟ್ಟೆಗಳು ಕಳಪೆ ಮತ್ತು ಕಡಿಮೆ ಗಾತ್ರದಿಂದ ಕೂಡಿದೆ ಇದರಿಂದ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಮೊಟ್ಟೆ ಖರೀದಿಯ ಜವಾಬ್ದಾರಿಯನ್ನು ಬಾಲ ವಿಕಾಸ ಸಂಸ್ಥೆಗೆ ನೀಡಬೇಕು. ಹಾಗೂ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ಬಾಕಿ ಉಳಿದಿರುವ ಬಾಡಿಗೆ ಹಣವನ್ನು ಸರ್ಕಾರ ಬಿಡುಗಡೆಗೊಳಿಸಬೇಕು. ದೀರ್ಘಕಾಲದಿಂದ ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಮೇಲ್ವಿಚಾರಕಿಯರು ಸೇರಿದಂತೆ ಎಲ್ಲಾ ಸಿಬ್ಬಂದಿಗಳನ್ನು ವರ್ಗಾವಣೆಗೊಳಿಸಬೇಕು. ಸರ್ಕಾರ ಘೋಷಣೆ ಮಾಡಿರುವ 6ನೇ ಗ್ಯಾರಂಟಿಯಾದ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರಿಗೆ ಗೌರವಧನ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದರು. ಮನವಿ ಪತ್ರವನ್ನು ಶಿಶು ಅಭಿವೃದ್ಧಿ ಮತ್ತು ಮಹಿಳಾ ಕಲ್ಯಾಣ ಇಲಾಖೆ ಅಧಿಕಾರಿ ಜ್ಯೋತಿಲಕ್ಷ್ಮಿ ರವರಿಗೆ ತರೀಕೆರೆಯ ಶಾಸಕರಾದ ಜಿಎಚ್ ಶ್ರೀನಿವಾಸ್ ರವರಿಗೂ ನೀಡಲಾಯಿತು. ಮನವಿ ಪತ್ರ ಸ್ವೀಕರಿಸಿದ ತಹಶೀಲ್ದಾರ್ ಸಿ. ಎಸ್. ಪೂರ್ಣಿಮಾ ರವರು ಮಾತನಾಡಿ ಸರ್ಕಾರಕ್ಕೆ ಮನವಿ ಪತ್ರವನ್ನು ಕಳುಹಿಸಿಕೊಟ್ಟು ಸೂಕ್ತ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು. ಫೆಡರೇಶನಿನ ಕಾರ್ಯದರ್ಶಿಗಳಾದ ನಳಿನ,ಉಪಾಧ್ಯಕ್ಷರಾದ ಮಲ್ಲಿಗ, ಖಜಾಂಚಿ ಹೆಚ್, ಸರಸ್ವತಿ, ಸಂಘಟನಾ ಕಾರ್ಯದರ್ಶಿ ರುದ್ರಮ್ಮ, ನಿರ್ದೇಶಕರಾದ ಶಾಂತಾಬಾಯಿ,ಸರಸ್ವತಿ, ಧನಲಕ್ಷ್ಮಿ, ಪಾರ್ವತಿ, ಪ್ರೇಮ,ಶಿರೋಮಣಿ, ಶಶಿಕಲಾ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ