ಎ.ಸಿ.ಓ. ಶಾಲೆಯಲ್ಲಿ ಹಳ್ಳಿಯ ಸೊಗಡು – ಚಿಣ್ಣರ ಕಲರವ.
ಇಲಕಲ್ಲ ಫೆ.20

“ಗ್ರಾಮೀಣ ಕಲೆಗಾರಿಕೆ, ಜಾನಪದ ಜೀವನ ಶೈಲಿ, ಹಳ್ಳಿಯ ಜೀವನ ಶೈಲಿಯನ್ನು ಮೂಲ ಶೈಲಿಯಲ್ಲಿ ಯಾವುದೇ ಆಧುನಿಕತೆಯ ಸೋಂಕಿಲ್ಲದೆ ಪುನ ರ್ನಿಮಿಸಿರುವ ಎ.ಸಿ.ಓ ಶಾಲೆಯು ಅಭಿನಂದನಾರ್ಹವಾಗಿದೆ. ವಿದ್ಯಾರ್ಥಿಗಳಿಗೆ ನಮ್ಮ ಗ್ರಾಮೀಣ ಜೀವನ ಶೈಲಿಗಳು ಹಾಗೂ ಆಚರಣೆಗಳು ಸ್ಫೂರ್ತಿ ನೀಡುವಲ್ಲಿ ಸಫಲವಾಗಿವೆ” ಎಂದು ಶ್ರೀ ವಿಜಯ ಮಹಾಂತೇಶ ಮಠದ ಪೀಠಾಧೀಶರಾದ ಶ್ರೀ ಗುರು ಮಹಾಂತ ಶ್ರೀಗಳು ಅಭಿಪ್ರಾಯಪಟ್ಟರು.

ಇಳಕಲ್ ಕಲೆ ಮತ್ತು ಸಾಂಸ್ಕೃತಿಕ ಸಂಘದ ಅಡಿಯಲ್ಲಿ ಎ.ಸಿ.ಓ ಶಾಲೆಯು ಏರ್ಪಡಿಸಿದ ‘ಹಳ್ಳಿಯ ಸೊಗಡು’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡುತ್ತಿದ್ದರು. ಅತಿಥಿಗಳಾಗಿ ಆಗಮಿಸಿದ್ದ ಶಿರೂರು ವಿಜಯ ಮಹಾಂತ ತೀರ್ಥದ ಶ್ರೀ ಬಸವಲಿಂಗ ಸ್ವಾಮಿಜಿ ಅವರು ಕೂಡಾ ಈ ಕಾರ್ಯಕ್ರಮವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು. ಈ ಕಾರ್ಯಕ್ರಮದ ನೇತೃತ್ವವನ್ನು ಸಂಸ್ಥೆಯ ಅಧ್ಯಕ್ಷರಾದ ಪುರುಷೋತ್ತಮ ದರಕ ಅವರು ವಹಿಸಿದ್ದರು.

ಶಿಕ್ಷಕ ಮಹಾಂತೇಶ ಹವಾಲದಾರ ಅವರ ಪರಿಕಲ್ಪನೆಯಲ್ಲಿ ಮೂಡಿದ ಈ ಕಾರ್ಯಕ್ರಮವು ಎಲ್ಲಾ ವಿಭಾಗಗಳ ಶಿಕ್ಷಕರ ಸಹಕಾರ ದಿಂದ ಆಯೋಜಿಸಲ್ಪಟ್ಟಿತ್ತು. ಸಂಸ್ಥೆಯ ನಿರ್ದೇಶಕರಾದ ಬಂಡು ಕಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಹಳ್ಳಿಯ ಜೀವನದ ಉತ್ತಮ ಅಂಶಗಳ ಬಗ್ಗೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.

ಹಿರಿಯ ಸದಸ್ಯರಾದ ಡಾ, ಜಿ.ಕೆ ಕಾಖಂಡಕಿ, ಎಮ್.ವಿ ಪಾಟೀಲ, ವಿಜಯಕುಮಾರ ಹಂಚಾಟೆ, ವೆಂಕಣ್ಣ ಸೂಳಿಕಲ್, ವಿಶ್ವನಾಥ ಪತ್ತಾರ ಬಸವರಾಜ ಮದಗಲ್, ಹರೀಶ ದೀವಟೆ, ವಿದ್ಯಾಧರ ರ್ಯಾವಣಕಿ, ಯಮನೂರ ಸಾಕಾ, ಕಾರ್ಯದರ್ಶಿ ಸಂತೋಷ ಗೋಟೂರ, ಖಜಾಂಚಿ ಚಂದ್ರಕಾಂತ ಮಾರಾ ಮುಂತಾದವರು ವೇದಿಕೆಯ ಮೇಲಿದ್ದರು. ಕಾರ್ಯಕ್ರಮವು ಕೇವಲ ಅಣಕು ಪ್ರದರ್ಶನಗಳಾಗಿರದೆ ನಿಜವಾಗಿಯೂ ಹಳ್ಳಿಯನ್ನು ಮರು ಸೃಷ್ಟಿಗೊಳಿಸಲಾಗಿತ್ತು. ಹಳ್ಳಿಗಳ ಕೂಡು ಕುಟುಂಬಗಳ ಅಡುಗೆಮನೆಯನ್ನು ಪ್ರದರ್ಶಿಸಿ ಬಂದವರಿಗೆಲ್ಲ ನಿಜವಾಗಿಯೂ ಬಿಸಿಬಿಸಿ ರೊಟ್ಟಿ-ಪಲ್ಯಗಳನ್ನು ತಿನ್ನಲು ಕೊಡುವ ದೃಶ್ಯವು ಜನರಲ್ಲಿ ಸಂಚಲವನ ಮೂಡಿಸಿತು. ಅಲ್ಲಿಯೇ ತಾಜಾ ಮಜ್ಜಿಗೆಯನ್ನು ಕಡೆದು ಕುಡಿಯಲು ಕೊಡಲಾಗುತ್ತಿತ್ತು. ಕೇರುವುದು, ಬೀಸುವುದು, ಕುಟ್ಟುವುದು, ಶಾವಿಗೆ ಹೊಸೆಯುವುದು, ಗೌರಿಗೆ ಆರತಿ ಮಾಡುವುದು, ಜನರನ್ನು ಆಕರ್ಷಿಸಿದವು. ಒರಳು ಕಲ್ಲಿನ ಪೂಜೆಯು ವಿಭಿನ್ನವಾಗಿತ್ತು. ವಿದ್ಯಾರ್ಥಿನಿಯರು ನಿಜವಾದ ಹಳ್ಳಿಯ ಹಾಡುಗಳನ್ನು ಹೇಳಿ ಆರತಿ ಮಾಡಿ ಪೂಜೆ ಮಾಡುವ ಸೊಬಗು ಜನರಿಗೆ ಇಷ್ಟವಾಯಿತು. ಹಳ್ಳಿಯ ಮದುವೆ, ಬಳೆ ಇಡಿಸುವ ಕಾರ್ಯಕ್ರಮ, ಆರತಕ್ಷತೆ, ಮಗುವಿನ ನಾಮಕರಣ, ಆಯುಧ ಪೂಜೆ, ಚೌಕಾಬಾರ ಆಟಗಳು ಮುಂತಾದ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಪರಿ ಪೂರ್ಣತೆಯಿಂದ ಮಾಡಿದರು.

ವಿಜಯ ಮಹಾಂತ ಸ್ವಾಮಿಗಳ ಜಾತ್ರಾ ಮಹೋತ್ಸವದ ಪ್ರದರ್ಶನದಲ್ಲಿ ಗಡಿಗೆ, ಬಟ್ಟೆ, ಅಲಂಕಾರ ಸಾಮಗ್ರಿ ಮುಂತಾದ ಹಾಗೂ ಹಣ್ಣು ಮುಂತಾದ ತಿನ್ನುವ ಪದಾರ್ಥಗಳ ನೈಜ ಅಂಗಡಿ ಮುಗ್ಗಟ್ಟುಗಳ ಸಾಲುಗಳು ಚೇತೋಹಾರಿ ಯಾಗಿದ್ದವು. ಅಂಗಡಿಕಾರನ ವೇಷದ ವಿದ್ಯಾರ್ಥಿಯು ಬಂದವರಿಗೆ ಕುಡಿಯಲು ನಿಜವಾಗಿಯೂ ಹಾಲು ನೀಡುತ್ತಿದ್ದ. ನಾಗಪಂಚಮಿ ಹಾಲೆರೆಯುವುದು, ಮೊಹರಂ ದೇವರು, ಅಲಾಯಿ ಆಡುವುದು, ಡೊಳ್ಳು ಬಾರಿಸುವುದು, ಜಡಿಬೂಟಿ, ಹಳ್ಳಿಯ ಟೇಲರ್ಗಳು, ರಾಶಿಕಣದಲ್ಲಿ ಜೋಳವನ್ನು ಶೇಖರಿಸುವುದು ಮುಂತಾದವು ಪ್ರದರ್ಶಿತ ವಾಗಿದ್ದವು. ಕಣಿ ಹೇಳುವವರು, ಹೆಳವರು, ಸಾರುವ ಅಯ್ಯನವರು ಜನರ ಗಮನ ಸೆಳೆದರು. ಸರಸ್ವತಿ ಹಾಗೂ ಗಣೇಶನ ದೇವಾಲಯಗಳನ್ನು ನಿರ್ಮಿಸಲಾಗಿತ್ತು. ವಿಜಯ ಮಹಾಂತೇಶ ಮಠದಿಂದ ಡೊಳ್ಳು ಮೆರವಣಿಗೆಯಲ್ಲಿ ಉಭಯ ಶ್ರೀಗಳು ಪಾದಯಾತ್ರೆಯ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದರು. ಪಾಲಕರು ಹಾಗೂ ಸಾರ್ವಜನಿಕರು ಅತ್ಯುತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್. ವಾಯ್.ಕಿಳ್ಳಿ.ಇಲಕಲ್ಲ