ಶಿಕ್ಷಣ ದಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಆಗಬೇಕು – ಚೇತನ್ ಕುಮಾರ್ ಅನಿಸಿಕೆ.
ಚಳ್ಳಕೆರೆ ಆ.05

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇಂದಿನ ಶಿಕ್ಷಣ ವ್ಯವಸ್ಥೆ ಆದ್ಯತೆ ನೀಡಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಚೇತನ್ ಕುಮಾರ್ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ದಲ್ಲಿ ಪಾಲ್ಗೊಂಡ ಅವರು ಸ್ವಾಮಿ ಪುರುಷೋತ್ತಮಾನಂದಜೀ ಬರೆದಿರುವ “ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣ” ಎಂಬ ಪುಸ್ತಕದ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು.

ಸಮರ್ಥ ವ್ಯಕ್ತಿತ್ವ ನಿರ್ಮಾಣದಲ್ಲಿ “ಶಾರೀರಿಕ ಶಕ್ತಿ, ಬೌದ್ಧಿಕ ಶಕ್ತಿ, ನೈತಿಕ ಶಕ್ತಿ ಹಾಗೂ ಆಧ್ಯಾತ್ಮಿಕ ಶಕ್ತಿಗಳು ಪ್ರಧಾನ ಪಾತ್ರ ವಹಿಸುತ್ತವೆ. ಆದ್ದರಿಂದ ಈ ಅಂಶಗಳ ಕಟ್ಟು ನಿಟ್ಟಿನ ಪಾಲನೆ ಅಗತ್ಯ ಎಂದು ಪ್ರತಿಪಾದಿಸಿದ ಅವರು ಪ್ರಸ್ತುತ ಶಿಕ್ಷಣ ಪದ್ಧತಿಯು ಮಕ್ಕಳ ಸಮಗ್ರ ಪ್ರಗತಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ಈ ಶಿಬಿರದ ಆರಂಭದಲ್ಲಿ ಭಜನೆಯನ್ನು ಯತೀಶ್.ಎಂ ಸಿದ್ದಾಪುರ ಹಾಗೂ ಕುಮಾರಿ ಪ್ರತೀಕ್ಷಾ, ಯಶಸ್ವಿ ಮತ್ತು ನಿಶೀಕಾ ನಡೆಸಿ ಕೊಟ್ಟರೆ ವಿದ್ಯಾರ್ಥಿಗಳಿಂದ ಓಂಕಾರ, ಪ್ರಣಾಮ ಮಂತ್ರ, ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ ಹಾಗೂ ಸ್ವದೇಶ ಮಂತ್ರದ ಪಠಣ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಸದ್ಭಕ್ತರಾದ ಶ್ರೀಮತಿ ಸುಧಾಮಣಿ ಅವರು ಆಟಗಳನ್ನು ಆಡಿಸಿದರು.

ಕಾರ್ಯಕ್ರಮದಲ್ಲಿ ಮಾತಾಜೀ ತ್ಯಾಗಮಯೀ, ಡಾ, ಅಮಿತಗುಪ್ತ, ಹೂವಿನ ಲಕ್ಷ್ಮೀದೇವಮ್ಮ, ಶಿಕ್ಷಕ ನಾಗೇಶ್, ಸಂತೋಷ್, ಪುಷ್ಪಲತಾ, ಸಿದ್ಧಾರ್ಥ, ಕೋಮಲಸಿರಿ, ವೈಷ್ಣವಿ, ಸಾಯಿ ಸಮರ್ಥ್, ಶಶಾಂಕ್, ವಿವಿಕ್ತ, ವಿಷ್ಣು, ಸೂರ್ಯಪ್ರಕಾಶ್, ಶ್ರೀನಿಹಾಂತ್, ಯುಕ್ತ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ:ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.