ಪ್ರಾಥಮಿಕ ಶಿಕ್ಷಣ ಮನುಷ್ಯನ ಬದುಕಿಗೆ ಭದ್ರ ಬುನಾದಿ ಇದ್ದಂತೆ ಅಂತಾ ಸಾಹಿತಿ ದುರ್ಗಾಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದರು.
ಲಿಂಗಸುಗೂರು ಜನೇವರಿ.16

ಕಲಾ ಮತ್ತು ವಿಜ್ಞಾನ ವಸ್ತುಗಳ ಪ್ರದರ್ಶನ ಕಾರ್ಯಕ್ರಮ ಗುಣಮಟ್ಟದ ಕಲಿಕೆ ಮತ್ತು ಓದಿನ ಆಸಕ್ತಿ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸಾಹಿತಿ ದುರ್ಗಾಸಿಂಗ್ ಅಭಿಪ್ರಾಯಪಟ್ಟರು. ಸ್ಥಳೀಯ ಶ್ರೀ ವಿದ್ಯಾ ಲಕ್ಷ್ಮೀ ಶಿಕ್ಷಣ ಸಂಸ್ಥೆ ಸಂಚಾಲಿತ ಶ್ರೀ ಸಾಯಿ ಕಿಡ್ಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ತಯಾರಿಸಿದ ಕಲಿಕೆ ವಸ್ತುಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪಠ್ಯದ ಜೊತೆಗೆ ಛದ್ಮವೇಷ, ವಸ್ತು ಪ್ರದರ್ಶನ, ರಾಷ್ಟ್ರ ನಾಯಕರ ಪರಿಚಯ ಸೇರಿದಂತೆ ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸುವ ಮೂಲಕ ಮಕ್ಕಳ ವಿಶೇಷ ಕಲಿಕೆಗೆ ಆದ್ಯತೆ ನೀಡುವ ಸಂಸ್ಥೆಯ ಕಾರ್ಯ ಶ್ಲಾಘನೀಯ.

ಪ್ರಾಥಮಿಕ ಶಿಕ್ಷಣ ಮನುಷ್ಯನ ಬದುಕಿಗೆ ಭದ್ರ ಬುನಾದಿ ಇದ್ದಂತೆ, ಈ ಹಂತದಲ್ಲೇ ಸಂಸ್ಕಾರ ಕಲಿಸಿ, ಸತ್ವಯುತವಾದ ಶಿಕ್ಷಣ ನೀಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಸಲಹೆ ನೀಡಿದರು. ಸಂಸ್ಥೆಯ ಆಡಳಿತಾಧಿಕಾರಿ ಮಾರುತಿ ಕಟ್ಟಿಮನಿ ಪ್ರಾಸ್ತಾವಿಕ ಮಾತನಾಡಿದರು. ವೈದ್ಯರಾದ ಡಾ. ಚಂದ್ರಶೇಖರ ಸರ್ಜಾಪೂರ, ಶಿಕ್ಷಕ ಶಿವು ಯಲಗಲದಿನ್ನಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಧನಲಕ್ಷ್ಮೀ ಬೇಡರಕಾರಲಕುಂಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಶ್ರೀಮತಿ ಗೀತಾ, ಶಿಕ್ಷಕರಾದ ರವೀಂದ್ರನಾಥ, ಪುಷ್ಪಾ, ಯಾಸ್ಮೀನ್, ಅಂಜಮ್ಮ, ಅರ್ಪಿತಾ ಪಾಲಕರಾದ ಸೋಮಪ್ಪ, ಅಮರೇಗೌಡ ಕಾಚಾಪೂರು, ಅನಿಲಸಿಂಗ್ ಇದ್ದರು.