ದಲಿತ ಅಧಿಕಾರಿ ಡಾll ಸುರೇಶ್.ಎಲ್.ಶರ್ಮಾ ವರ್ಗಾವಣೆ ಖಂಡನಾರ್ಹ – ಪ್ರಕಾಶ್ ವಗ್ಗೆ.
ಕಲಬುರಗಿ ಆಗಷ್ಟ.14

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ವೃತ್ತ ಕಛೇರಿ ಕಲಬುರಗಿಯಲ್ಲಿ ಅಧೀಕ್ಷಕ ಅಭಿಯಂತರರಾಗಿ ಸೇವೆ ಸಲ್ಲಿಸುತ್ತಿದ್ದ ದಕ್ಷ ಅಧಿಕಾರಿ ಡಾ. ಸುರೇಶ್ ಎಲ್. ಶರ್ಮಾ ಅವರನ್ನು ವರ್ಗಾವಣೆಗೊಳಿಸಿದ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ಕ್ರಮ ಸರಿಯಲ್ಲ ಎಂದು ದಲಿತ ಯುವ ನಾಯಕ ಪ್ರಕಾಶ್ ವಗ್ಗೆ ಖಂಡಿಸಿದ್ದಾರೆ. ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕುವ ಜಿಲ್ಲಾ ಉಸ್ತುವಾರಿ ಸಚಿವರ ಉದ್ದೇಶವೇನೊ ಸರಿಯಿದೆ. ಆದರೆ ಸರ್ಕಾರಿ ಇಲಾಖೆಯಲ್ಲಿ ಯಾವುದೇ ಆಪಾದನೆ, ಭ್ರಷ್ಟಾಚಾರದ ಆರೋಪ ಇಲ್ಲದ ದಕ್ಷ ಅಧಿಕಾರಿ ಡಾ. ಸುರೇಶ್ ಎಲ್. ಶರ್ಮಾ ಅವರನ್ನು ವರ್ಗಾವಣೆಗೊಳಿಸಿದ್ದು ಸರಿಯಾದ ನಿರ್ಧಾರವಲ್ಲ. ಜಿಲ್ಲೆಯಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚಿಗೆ ಒಂದೇ ಕಛೇರಿಯಲ್ಲಿ ಲೆಕ್ಕವಿಲ್ಲದಷ್ಟು ಲಂಚಭಾಕ ಅಧಿಕಾರಿಗಳು ಸೇವೆಯಲ್ಲಿದ್ದಾರೆ. ಆದರೆ ಈ ವಿಷಯ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬಾರದಿರುವುದು ದುರಾದೃಷ್ಟಕರ. ಡಾ. ಶರ್ಮಾ ಅವರು ಸುಮಾರು 30 ವರ್ಷಗಳ ಕಾಲ ಸರ್ಕಾರಿ ಸೇವೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಅತ್ಯಂತ ದಕ್ಷ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಸರ್ಕಾರದ ಯೋಜನೆಗಳು, ಕಾಮಗಾರಿಗಳು ಅನುಷ್ಠಾನಗೊಳಿಸಿದ್ದಾರೆ. ಮಲ್ಲಾಬಾದ್ ಏತ ನೀರಾವರಿ, ಜೇವರ್ಗಿ ಬ್ರಾಂಚ್ ಕ್ಯಾನಲ್, ಗ್ರಾಮೀಣ ರಸ್ತೆಗಳು, ಸಮುದಾಯ ಭವನಗಳು, ಶಾಲಾ ಹಾಗೂ ಆಸ್ಪತ್ರೆಗಳ ಕಟ್ಟಡಗಳ ನಿರ್ಮಾಣ ಜೊತೆಗೆ ಬೃಹತ್ ಕಾಲುವೆ ಮತ್ತು ಉಪ ಕಾಲುವೆಗಳು ನಿರ್ಮಿಸಿ ಲಕ್ಷಾಂತರ ಹೆಕ್ಟೇರ್ ಜಮೀನಿಗೆ ನೀರು ಹರಿಸಿ ರೈತರ ಬದುಕು ಹಸಿರಾಗಿಸಿದ್ದಾರೆ. ಇವರು ಕರ್ನಾಟಕ ನೀರಾವರಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಜಾತಿ ವ್ಯವಸ್ಥೆಯ ಮಧ್ಯೆ ಬಡದಲಿತ ಕುಟುಂಬದಲ್ಲಿ ಹುಟ್ಟಿ, ಸಹಾಯಕ ಅಭಿಯಂತರ ಹುದ್ದೆಯಿಂದ ಅಧೀಕ್ಷಕ ಅಭಿಯಂತರ ಹುದ್ದೆ ಅಲಂಕರಿಸಿದ್ದು ಸುಲಭದ ಮಾತಲ್ಲ. ಬುದ್ಧ , ಬಸವ, ಅಂಬೇಡ್ಕರ್ ಮಾರ್ಗದಲ್ಲಿ ನಡೆಯುವ ಇವರು, ಬಡದಲಿತ, ಕಾರ್ಮಿಕರ, ನಿರ್ಗತಿಕರ ಸಹಾಯಕ್ಕೆ ನಿಲ್ಲುವರು. ಸರ್ಕಾರಿ ಅಧಿಕಾರಿ ವಲಯ ಹಾಗೂ ಸಮಾಜದಲ್ಲಿ ಅವರದೇ ಆದ ಗೌರವವಿದೆ. ಡಾ. ಶರ್ಮಾ ಅವರ ಸರ್ಕಾರಿ ಸೇವೆ ಹಾಗೂ ಸಮಾಜ ಸೇವೆ ಪರಿಗಣಿಸಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ಅಲ್ಲದೆ ಇವರನ್ನು ಸರ್. ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಭಾರತ ವಿಕಾಸ ರತ್ನ ರಾಷ್ಟ್ರೀಯ ಪ್ರಶಸ್ತಿ ಜೊತೆಗೆ ಇನ್ನೂ ಹಲವು ಪ್ರಶಸ್ತಿಗಳು ಲಭಿಸಿವೆ. ಸ್ಚಚ್ಛ ಭಾರತ ಮಿಷನ್ ಗುರಿ ಸಾಧಿಸಿದ್ದಕ್ಕಾಗಿ ಕಲಬುರಗಿ ಜಿಲ್ಲೆಗೆ ಗೌರವ ಪ್ರಮಾಣ ಪತ್ರ ದೊರಕಿದೆ. ಇದು ಡಾ. ಶರ್ಮಾ ಅವರ ಸೇವಾ ದಕ್ಷತೆಗೆ ಹಿಡಿದ ಕನ್ನಡಿ. ಜಿಲ್ಲಾ ಉಸ್ತುವಾರಿ ಸಚಿವರು ಡಾ. ಸುರೇಶ್ ಎಲ್. ಶರ್ಮಾ ಅವರ ವರ್ಗಾವಣೆಯನ್ನು ಮರುಪರಿಶೀಲಿಸಿ ದಲಿತ ಅಧಿಕಾರಿಗೆ ನ್ಯಾಯ ದೊರಕಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಒತ್ತಾಯದ ಮನವಿ.
ಜಿಲ್ಲಾ ವರದಿಗಾರರು:ಶಿವಾನಂದ.ಎಂ.ಸಾವಳಗಿ.ಸಿರಸಗಿ