ವಿಜೃಂಭಣೆಯಿಂದ ನಡೆದ ಹಾನಗಲ್ಲ ಗುರು ಕುಮಾರೇಶ್ವರರ – ಮಹಾ ರಥೋತ್ಸವ.
ನರೇಗಲ್ಲ ಫೆ.22

ಹಾನಗಲ್ಲ ಗುರು ಕುಮಾರೇಶ್ವರರ ಮಹಾ ರಥೋತ್ಸವ ಜನ ಸಾಗರದ ಮಧ್ಯೆ ಸಂಭ್ರಮ ದಿಂದ ಜರುಗಿತು. ಕಳೆದ ಆರು ದಿನಗಳಿಂದ ಶ್ರೀಮಠ ವೈಶಿಷ್ಟ್ಯ ಪೂರ್ಣ ಪುಣ್ಯ ಸ್ಮರಣೋತ್ಸವ ಹಾಗೂ ನುಡಿ ಹಬ್ಬ ಆಚರಿಸಿದ್ದ ಹಿನ್ನೆಲೆ ಈ ವರ್ಷ ಶ್ರೀಮಠ ಜನ ಸಾಗರದಿಂದ ತುಂಬಿತ್ತು. ಜಾತ್ರೋತ್ಸವ ನಿಮಿತ್ತ ಶುಕ್ರವಾರ ಬೆಳಗ್ಗೆ 6 ಕ್ಕೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ಕೈಂಕರ್ಯಗಳು ಜರುಗಿದವು. ಹರಗುರು ಚರ ಮೂರ್ತಿಗಳು ಮಹಾ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ‘ಹಾನಗಲ್ಲ ಕುಮಾರೇಶ್ವರರ ಮಹಾರಾಜ ಕೀ ಜೈ’ ಎಂಬ ಜಯಘೋಷ ಕೇಳಿ ಬಂದವು. ಅಬ್ಬಿಗೇರಿ, ರೋಣ, ಕೊತಬಾಳ, ಸೂಡಿ ನಿಡಗುಂದಿ, ಜಕ್ಕಲಿ, ಹಾಲಕೆರೆ, ನಿಡಗುಂದಿ, ಯಲಬುರ್ಗಾ, ಕುಕನೂರ, ಕೊಪ್ಪಳ, ಗದಗ, ಮುಂಡರಗಿ ವಿವಿಧೆಡೆ ಯಿಂದ ಭಕ್ತರು ಆಗಮಿಸಿದ್ದರು. ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮದ ಸದ್ಭಕ್ತರು ತೇರಿನ ಕಳಸದೊಂದಿಗೆ ಭಜನೆ, ಡೊಳ್ಳು, ಕಹಳೆ ಹಾಗೂ ವಿವಿಧ ವಾದ್ಯ ಮೇಳಗಳೊಂದಿಗೆ ಆಗಮಿಸಿದ್ದರು. ಮುಧೋಳ ಗ್ರಾಮದ ಸದ್ಭಕ್ತರು ಪಾಲಕಿ ಹಾಗೂ ನಂದಿ ಕೋಲಿನೊಂದಿಗೆ ಆಗಮಿಸಿದ್ದರು. ಮಾರನಬಸರಿ ಗ್ರಾಮದ ಸದ್ಭಕ್ತರು ತೇರಿನ ಹಗ್ಗದೊಂದಿಗೆ ಆಗಮಿಸಿದ್ದರು. ನಿಡಗುಂದಿ ಸದ್ಭಕ್ತರು ಕುಮಾರೇಶ್ವರರ ಭಾವಚಿತ್ರ ಮೆರವಣಿಗೆ ಯೊಂದಿಗೆ ಆಗಮಿಸುವ ಮೂಲಕ ರಥೋತ್ಸವದಲ್ಲಿ ಭಾಗವಹಿಸಿದ್ದರು. ರಥ ಪಾದ ಗಟ್ಟಿವರೆಗೆ ತೆರಳಿ ಮೂಲ ಸ್ಥಳಕ್ಕೆ ಬಂದು ಸಂಪನ್ನ ಗೊಂಡಿತು ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್. ವಿ ಸಂಕನಗೌಡ್ರ.ರೋಣಗದಗ