ಮಹಾತ್ಮರ ಜಯಂತಿಗಳು ಜಾತ್ಯತೀತವಾಗಿ ಆಚರಿಸಲ್ಪಡಬೇಕು – ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅಭಿಪ್ರಾಯ.

ಚಳ್ಳಕೆರೆ ಮೇ.01

ಮಹಾತ್ಮರ ಜಯಂತಿಗಳನ್ನು ಜಾತ್ಯತೀತವಾಗಿ ಆಚರಿಸುವ ಅಗತ್ಯವಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅಭಿಪ್ರಾಯ ಪಟ್ಟರು. ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಜಗಜ್ಯೋತಿ ಬಸವೇಶ್ವರರ 892 ನೇ. ಜಯಂತ್ಯುತ್ವದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಬಸವಣ್ಣನವರ ಜೀವನ ಮತ್ತು ಸಂದೇಶಗಳ ಬಗ್ಗೆ ಉಪನ್ಯಾಸ ನೀಡಿದರು. ಬಸವಣ್ಣನವರ ಕಾಯಕ ತತ್ವ, ಸಮ ಸಮಾಜ ನಿರ್ಮಾಣದ ಪರಿಕಲ್ಪನೆ, ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾದರೂ ಅವರ ಸರಳ ವ್ಯಕ್ತಿತ್ವ ಮತ್ತು ಸಾವಿರಾರು ವಚನಗಳ ರಚನೆಯ ಮೂಲಕ ಸುಸ್ಥಿರ ಸಮಾಜದ ನಿರ್ಮಾಣದಲ್ಲಿ ಅವರ ಸಂದೇಶಗಳು ಪ್ರಸ್ತುತವಾಗಿವೆ ಎಂದರು. ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ಮಹಾತ್ಮರ ಜಯಂತಿಗಳನ್ನು ಕೇವಲ ಒಂದು ಸಮುದಾಯ ಜಾತಿ-ವರ್ಗಕ್ಕೆ ಸೀಮಿತ ಗೊಳಿಸದೆ ಸಾಮುದಾಯಿಕವಾಗಿ ಆಚರಿಸಲ್ಪಡುವಂತಾಗ ಬೇಕೆಂದು ಕರೆ ನೀಡಿದರು.

ಶ್ರೀಶಾರದಾಶ್ರಮದ ಸ್ವಯಂ ಸೇವಕ ಯತೀಶ್.ಎಂ ಸಿದ್ದಾಪುರ ಅವರು ಬಸವಣ್ಣನವರ ಜೀವನ ಮತ್ತು ವಚನಗಳ ಪ್ರಸ್ತುತತೆಯ ಬಗ್ಗೆ ಮಾತನಾಡಿ ಜಗತ್ತಿನಲ್ಲೇ “ಪ್ರಥಮ ಸಂಸತ್ತು” ಎಂಬ ಹೆಗ್ಗಳಿಕೆಗೆ ಪಾತ್ರವಾದ “ಅನುಭವ ಮಂಟಪ” ವನ್ನು ರಚಿಸುವ ಮೂಲಕ ಸರ್ವ ಜನಾಂಗದ ಶರಣ-ಶರಣಿಯರ ಅನುಭಾವಗಳ ಅಭಿವ್ಯಕ್ತಿಗೆ ಮುಕ್ತ ವಾತಾವರಣ ನಿರ್ಮಿಸಿದ್ದರು. ಬಸವಣ್ಣನವರ ಕ್ರಾಂತಿಕಾರಕ ಹೆಜ್ಜೆಗಳು ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಜಾತಿ ವ್ಯವಸ್ಥೆ ಸೇರಿದಂತೆ ಇತರೆ ಅನಿಷ್ಟ ಪದ್ಧತಿಗಳ ನಿರ್ಮೂಲನೆಯ ಉದ್ದೇಶವನ್ನು ಹೊಂದಿದ್ದವು. ಆದ್ದರಿಂದ ಬಸವಾದಿ ಶಿವ ಶರಣರ ವಚನಗಳನ್ನು ಅಧ್ಯಯನ ಮತ್ತು ಅನುಸಂಧಾನ ಮಾಡಬೇಕು ಎಂದು ತಿಳಿಸಿದರು. ಬಸವ ಜಯಂತಿಯ ಪ್ರಯುಕ್ತ ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಎಂ.ಗೀತಾ ನಾಗರಾಜ್ ಅವರು ಬಸವಣ್ಣ ನವರ ಕುರಿತ ಭಜನೆಗಳನ್ನು ಹಾಡಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿ ಸ್ತುತಿ ಪಠಣ ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು. ಈ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಪ್ರೇಮಲೀಲಾ ರಾಮಣ್ಣ, ಜಯಶೀಲಮ್ಮ, ಶೈಲಜ ಶ್ರೀನಿವಾಸ್, ಪಿ.ಎಸ್, ಮಾಣಿಕ್ಯ ಸತ್ಯನಾರಾಯಣ, ಕೃಷ್ಣವೇಣಿ ವೆಂಕಟೇಶ್, ರಶ್ಮಿ ರಮೇಶ್, ವಿಜಯಲಕ್ಷ್ಮೀ, ಶಾರದಾಮ್ಮ, ಸಂಗೀತ ವಸಂತಕುಮಾರ್, ಭ್ರಮರಂಭಾ, ಗೀತಾಲಕ್ಷ್ಮೀ, ಯುಕ್ತ,ನಿಖಿಲೇಶ್ ಯಾದವ್ ಉಪಸ್ಥಿತರಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button