🚨ಬ್ರೇಕಿಂಗ್ ನ್ಯೂಸ್, ಮಾನವೀಯತೆಗೆ ಸಂದ ಜಯ – ಕೊನೆಗೂ ದಲಿತ ಕುಟುಂಬಗಳ ದಾರಿ ಸಮಸ್ಯೆಗೆ ಮುಕ್ತಿ!🚨

ಬ್ರಹ್ಮಾವರ ಜೂ.19

ಕಳೆದ ಹಲವು ವರ್ಷಗಳಿಂದ ಸೂಕ್ತ ದಾರಿಯಿಲ್ಲದೆ, ಹಗಲು-ರಾತ್ರಿ ಪರದಾಡುತ್ತಿದ್ದ ದಲಿತ ಕುಟುಂಬಗಳ ಕಣ್ಣೀರಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಐರೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂಗಾರಕಟ್ಟೆ (ಮಾಬುಕಳ) ಅಂಬೇಡ್ಕರ್ ಕಾಲೋನಿಯ ಐದಾರು ದಲಿತ ಕುಟುಂಬಗಳ ದಶಕಗಳ ದಾರಿ ಸಮಸ್ಯೆ ಈಗ ಸೌಹಾರ್ದಯುತವಾಗಿ ಬಗೆಹರಿದಿದ್ದು, ಇಡೀ ಜಿಲ್ಲೆಯಾದ್ಯಂತ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

📌 ಕುಂದು-ಕೊರತೆ ಸಭೆಯಲ್ಲಿ ಮೊಳಗಿದ ಧ್ವನಿ, ತಕ್ಷಣ ಸ್ಪಂದಿಸಿದ ಖಾಕಿ…!

ಮೊನ್ನೆ ಕೋಟ ಪೊಲೀಸ್ ಠಾಣೆಯಲ್ಲಿ ನಡೆದ ದಲಿತರ ಕುಂದು-ಕೊರತೆ ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ಸದಸ್ಯರಾದ “ಶ್ರೀನಿವಾಸ್ ವಡ್ಡರ್ಸೆ” ಮತ್ತು “ಮಂಜುನಾಥ್ ಬಾಳ್ಕುದ್ರು” ಅವರು ಈ ಗಂಭೀರ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದರು. ವಿಷಯದ ಸೂಕ್ಷ್ಮತೆಯನ್ನು ಅರಿತ ಕೋಟ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ (PSI) “ಪ್ರವೀಣ್ ಕುಮಾರ್” ಕೇವಲ ಸಭೆಗೆ ಸೀಮಿತವಾಗದೆ ತಕ್ಷಣವೇ ಕಾರ್ಯ ಪ್ರವೃತ್ತರಾದರು.ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪಿ.ಎಸ್.ಐ ಪ್ರವೀಣ್ ಕುಮಾರ್ ಹಾಗೂ ಅವರ ಸಿಬ್ಬಂದಿ ವರ್ಗದವರು, ಸ್ಥಳದ ಮಾಲೀಕರಾದ “ಬಸವ ಮರಕಾಲ” ಹಾಗೂ ಐರೋಡಿ ಗ್ರಾಮ ಪಂಚಾಯತ್ ಪಿ.ಡಿ.ಓ (PDO) “ಪ್ರಶಾಂತ್” ಅವರೊಂದಿಗೆ ಸಮಾಲೋಚನೆ ನಡೆಸಿದರು. ಕಾನೂನು ಮತ್ತು ಮಾನವೀಯತೆಯ ನೆಲಗಟ್ಟಿನಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು, ವರ್ಷಗಳಿಂದ ಬಗೆಹರಿಯದಿದ್ದ ದಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

👮‍♂️ ರಕ್ಷಕನೂ ಹೌದು, ದೀನ ಬಂಧುವು ಹೌದು, ಕೋಟ ಪಿ.ಎಸ್.ಐ ನಡೆಗೆ ಸಲಾಂ…!

ಪೊಲೀಸ್ ಇಲಾಖೆ ಎಂದರೆ ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದಷ್ಟೇ ಅಲ್ಲ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಸಂಕಷ್ಟಕ್ಕೂ ಹೆಗಲಾಗಬಲ್ಲದು ಎಂಬುದನ್ನು ಕೋಟ ಪಿ.ಎಸ್.ಐ ಪ್ರವೀಣ್ ಕುಮಾರ್ ಮತ್ತು ಅವರ ತಂಡ ಸಾಬೀತು ಪಡಿಸಿದೆ. ಇಲಾಖೆಯ ಮೇಲಿನ ಸಾರ್ವಜನಿಕರ ಗೌರವವನ್ನು ಇಮ್ಮಡಿ ಗೊಳಿಸಿದ ಇಂತಹ ಜನ ಸ್ನೇಹಿ ಹಾಗೂ ದಕ್ಷ ಅಧಿಕಾರಿಯನ್ನು ಕೋಟ ವ್ಯಾಪ್ತಿಗೆ ನಿಯೋಜಿಸಿದ “ಪೊಲೀಸ್ ವರಿಷ್ಠಾಧಿಕಾರಿಗಳಿಗೆ (SP) ಸಾರ್ವಜನಿಕರು ಹಾಗೂ ದಲಿತ ಮುಖಂಡರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.” ಸೂಕ್ತ ಸಮಯದಲ್ಲಿ ಇಂತಹ ಕ್ರಾಂತಿಕಾರಿ ನಿರ್ಧಾರ ಕೈಗೊಂಡ ಉನ್ನತ ಅಧಿಕಾರಿಗಳ priority ದೂರದೃಷ್ಟಿ ಇಂದು ಐದಾರು ಕುಟುಂಬಗಳ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿದೆ.

🤝 ಕೃತಜ್ಞತೆ ಸಲ್ಲಿಸಿದ ಅಂಬೇಡ್ಕರ್ ಕಾಲೋನಿ ನಿವಾಸಿಗಳು:-

ನಿರಂತರ ಹೋರಾಟದ ಮೂಲಕ ದಲಿತರ ಧ್ವನಿಯಾದ ಡಿ.ಎಸ್.ಎಸ್ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿಯ ಮಂಜುನಾಥ್ ಬಾಳ್ಕುದ್ರು, ಶ್ರೀನಿವಾಸ್ ವಡ್ಡರ್ಸೆ, ಕುಸುಮ ಕಟ್ಕೆರೆ, ಮಾನವೀಯತೆಯಿಂದ ದಾರಿ ಬಿಟ್ಟುಕೊಟ್ಟ ಸ್ಥಳದ ಮಾಲೀಕರಾದ ಬಸವ ಮರಕಾಲ, ಸಕಾರಾತ್ಮಕವಾಗಿ ಸ್ಪಂದಿಸಿದ ಪಿ.ಡಿ.ಓ ಪ್ರಶಾಂತ್ ಹಾಗೂ ಇಡೀ ಕಾರ್ಯಾಚರಣೆಯ ಸಾರಥ್ಯ ವಹಿಸಿದ ಕೋಟ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರವೀಣ್ ಕುಮಾರ್ ಹಾಗೂ ಸಿಬ್ಬಂದಿ ವರ್ಗಕ್ಕೆ ಅಂಬೇಡ್ಕರ್ ಕಾಲೋನಿಯ ಎಲ್ಲಾ ನಿವಾಸಿಗಳು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

“ಹೋರಾಟಕ್ಕೆ ಸಿಕ್ಕ ನ್ಯಾಯ, ಸೌಹಾರ್ದತೆಗೆ ಸಂದ ಜಯ!” – ಜೈ ಭೀಮ್!

📰 ವರದಿ:ಆರತಿ ಗಿಳಿಯಾರು ಉಡುಪಿ ಉಪ-ಸಂಪಾದಕರು,

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button