ಆಧುನಿಕ ಬದುಕಿನ ಸಾರ್ಥಕತೆಗೆ ಬಸವಾದಿ ಶಿವ ಶರಣರ ಚಿಂತನೆಗಳು ಸದಾ ಪ್ರಸ್ತುತ – ಕೆ.ಎಸ್.ತಿಪ್ಪಮ್ಮ ನಾಗರಾಜ್.
ಚಳ್ಳಕೆರೆ ಜು.04

ಆಧುನಿಕ ಬದುಕಿನಲ್ಲಿ ಸಾರ್ಥಕತೆಯನ್ನು ಕಾಣಲು ಬಸವಾದಿ ಶಿವಶರಣರ ವಚನಗಳ ಚಿಂತನೆಗಳು ಅತ್ಯಂತ ಪ್ರಸ್ತುತವಾಗಿವೆ ಎಂದು ಚಿತ್ರದುರ್ಗದ ಸಾಹಿತಿ ಮತ್ತು ನಿವೃತ್ತ ಶಿಕ್ಷಕಿ ಕೆ.ಎಸ್.ತಿಪ್ಪಮ್ಮ ನಾಗರಾಜ್ ತಿಳಿಸಿದರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ವಾರದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಆಧುನಿಕ ಬದುಕಿಗೆ ವಚನ ಸಾಹಿತ್ಯದ ಪ್ರಸ್ತುತತೆ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು.

ಆಧುನಿಕ ಯುಗದಲ್ಲಿ ಒತ್ತಡ, ದ್ವೇಷ, ಅಸೂಯೆ, ಅಸತ್ಯ, ಅನಾಚಾರ, ಅತ್ಯಾಚಾರ, ಹಿಂಸಾತ್ಮಕ ಕೃತ್ಯಗಳನ್ನು ತಡೆ ಗಟ್ಟಲು ಶಿವಶರಣರ ನುಡಿಗಳು ಅವಶ್ಯಕವಾಗಿವೆ.

ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಜೇಡರ ದಾಸಿಮಯ್ಯ, ಆಯ್ದಕ್ಕಿ ಲಕ್ಕಮ್ಮ, ಮಡಿವಾಳ ಮಾಚಿದೇವ, ಚೆನ್ನಬಸವಣ್ಣ ಸೇರಿದಂತೆ ಶಿವ ಶರಣರ ವಚನಗಳಲ್ಲಿ ತಿಳಿಸಿರುವ ಚಿಂತನೆಗಳು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸಹಕಾರಿ ಯಾಗಿವೆ.ವಿಶ್ವದ ಮೊದಲ ಸಂಸತ್ತು ಅನುಭವ ಮಂಟಪದ ಮೂಲಕ ಎಲ್ಲಾ ಜಾತಿ-ಧರ್ಮಗಳ ಶರಣರ ಮುಕ್ತ ಚಿಂತನೆಗಳ ಚರ್ಚೆಯ ಮೂಲಕ ಸಮಾ ಸಮಾಜದ ನಿರ್ಮಾಣಕ್ಕೆ ಭದ್ರವಾದ ಅಡಿಪಾಯ ಹಾಕಿ ಸ್ತೀಯರಿಗೂ ಪುರುಷರಂತೆ ಸರಿ ಸಮಾನ ಸ್ಥಾನ-ಮಾನ ನೀಡಿದ್ದು ಬಹಳ ಗಮನಾರ್ಹ ಸಂಗತಿ ಎಂದು ಅವರು ವಿವಿಧ ಶರಣರ ವಚನಗಳನ್ನು ಹೇಳುವ ಮೂಲಕ ಸವಿವರವಾಗಿ ವಿವರಿಸಿದರು.
ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಗೀತಾ ಪ್ರಕಾಶ್, ಪ್ರಮೀಳಾ ಜಗದೀಶ್, ತಿಪ್ಪಮ್ಮ ಉಮಾಶಂಕರ್, ನೇತ್ರಾ ಮಂಜುನಾಥ, ಸುನೀತಾ ಅವರಿಂದ ವಿಶೇಷ ಭಜನೆ, ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ವಿಶೇಷ ಸತ್ಸಂಗದಲ್ಲಿ ಎಚ್ ಲಕ್ಷ್ಮೀದೇವಮ್ಮ, ಎಂ ಲಕ್ಷ್ಮೀದೇವಮ್ಮ, ಸರಸ್ವತಿ ನಾಗರಾಜ್, ವಿಜಯಲಕ್ಷ್ಮೀ, ಅನುಸೂಯ ರಾಘವೇಂದ್ರ, ಪ್ರೇಮಾ ಸೇರಿದಂತೆ ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

