ಆಯುಷ್ಮಾನ್ ಭವ ಮನೆ ಬಾಗಿಲಿಗೆ ಆರೋಗ್ಯ ಸೇವೆ-ಪರಮೇಶ್.
ತರೀಕೆರೆ ಸಪ್ಟೆಂಬರ್.13

ಪ್ರತಿಯೊಬ್ಬರೂ ಸಹ ಆರೋಗ್ಯವಾಗಿರಬೇಕು ಎಂದು ಸರ್ಕಾರವು ಆಯುಷ್ಮಾನ್ ಭವ ಕಾರ್ಯಕ್ರಮ ಜಾರಿಗೆ ತಂದಿದೆ ಎಂದು ಪುರಸಭಾ ಅಧ್ಯಕ್ಷರಾದ ಪರಮೇಶ್ ರವರು ಇಂದು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪುರಸಭೆ ತರೀಕೆರೆ ವತಿಯಿಂದ ಏರ್ಪಡಿಸಿದ್ದ ಆಯುಷ್ಮಾನ್ ಭವ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಮನೆ ಬಾಗಿಲಿಗೆ ಆರೋಗ್ಯ ಸೇವೆಯನ್ನು ಸರ್ಕಾರ ಜಾರಿಗೆ ತಂದಿದೆ ಇದರ ಉಪಯೋಗವನ್ನು ಪ್ರತಿಯೊಬ್ಬ ವ್ಯಕ್ತಿ ಸದುಪಯೋಗ ಮಾಡಿಕೊಳ್ಳಬೇಕೆಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ವೈದ್ಯಧಿಕಾರಿಯಾದ ಡಾ. ಚಂದ್ರಶೇಖರ್ ಮಾತನಾಡಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2 ರವರೆಗೆ ಆಯುಷ್ಮಾನ್ ಭವ ಕಾರ್ಯಕ್ರಮದ ಆಂದೋಲನವು ನಡೆಯಲಿದೆ ಇಂದು ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ರವರು ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ.
ಸಾರ್ವತ್ರಿಕ ಆರೋಗ್ಯ ಪೂರೈಕೆ ಅಡಿಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ, ಆಯುಷ್ಮಾನ್ ಆರೋಗ್ಯ ಖಾತೆ ನೋಂದಣಿ ಮಾಡಿಕೊಳ್ಳುವುದು. ಡಿಜಿಟಲ್ ನೋಂದಣಿ ಮೇಳ ಆಯೋಜಿಸಿದೆ. ಅಸಂಕ್ರಾಮಿಕ ರೋಗಗಳ ಪತ್ತೆ ಹಾಗೂ ತಪಾಸಣೆ ಮಾಡುವುದು, ಕ್ಷಯರೋಗ ಮತ್ತು ಕುಷ್ಟರೋಗ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ತಪಾಸಣೆ ಶಿಬಿರ ಏರ್ಪಡಿಸುವುದು, ತಾಯಿ ಮತ್ತು ಮಕ್ಕಳ ಆರೋಗ್ಯ ಹಾಗೂ ಪೌಷ್ಟಿಕ ಆರೋಗ್ಯ ಶಿಬಿರ, ಬುಡಕಟ್ಟು ಜನಾಂಗದವರಿಗೆ ಸಿಕ್ಕಲ್ ಸೆಲ್ ಅನೀಮಿಯ ತಪಾಸಣೆ, ಕಣ್ಣಿನ ತಪಾಸನೆ, ಮತ್ತು ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರಿಂದ ತಪಾಸಣೆ ಮತ್ತು ಚಿಕಿತ್ಸೆ, ರಕ್ತದಾನ ಶಿಬಿರಗಳು, ಹಾಗೂ ಅಂಗಾಂಗ ದಾನಗಳ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಪುರಸಭಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಕುಮಾರಪ್ಪ ಮಾತನಾಡಿ ರಾಷ್ಟ್ರಪತಿಗಳು ಈ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ, ಇದರ ಉಪಯೋಗ ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು. ಪುರಸಭಾ ಸದಸ್ಯರಾದ ಅಶೋಕ್ ಕುಮಾರ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ಈ ಕಾರ್ಯಕ್ರಮ ಮನೆ ಮನೆಗೆ ತಲುಪಬೇಕು. ಆರೋಗ್ಯ ಕಾರ್ಯಕರ್ತರಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು. ಸಿ ಡಿ ಪಿ ಓ ಜ್ಯೋತಿಲಕ್ಷ್ಮಿ ಮಾತನಾಡಿ ದೇಹದಲ್ಲಿರುವ ಎಲ್ಲಾ ರೀತಿಯ ಕಾಯಿಲೆಗಳ ಕುರಿತು ಡಿಜಿಟಲ್ ನಲ್ಲಿ ಶೇಖರಿಸಿ ಚಿಕಿತ್ಸೆ ಮಾಡಿಸಲು ಸಹಕಾರಿಯಾಗಿದೆ. ಒಂದೇ ಸ್ಥಳದಲ್ಲಿ ಎಲ್ಲಾ ರೀತಿಯ ಪರೀಕ್ಷೆಗಳು ಮತ್ತು ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುತ್ತದೆ ಎಂದು ಹೇಳಿದರು. ಪುರಸಭಾ ಮುಖ್ಯ ಅಧಿಕಾರಿಯದ ಹೆಚ್ ಪ್ರಶಾಂತ ರವರು ಮಾತನಾಡಿ ರೋಗ ಬಂದ ನಂತರ ಗುಣಪಡಿಸುವುದಕ್ಕಿಂತ ರೋಗ ಬರದಂತೆ ನೋಡಿಕೊಳ್ಳುವುದು ಮುಖ್ಯ,ಈ ಯೋಜನೆಯಿಂದ ಉತ್ತಮವಾದ ಗುಣಮಟ್ಟದ ಆರೋಗ್ಯ ಸೇವೆ ನೀಡುವುದೇ ಉದ್ದೇಶವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಚೇತನ್ ಕುಮಾರ್, ಪರಿಸರ ಅಭಿಯಂತರರಾದ ತಹೆರಾ ತಸ್ಮೀನ್, ಡಾ. ಪ್ರಸನ್ನ, ಡಾ. ಹೇಮಚಂದ್ರ, ಹಿರಿಯ ಆರೋಗ್ಯ ನಿರೀಕ್ಷಕರಾದ ಮಹೇಶ್ವರಪ್ಪ, ಉಪಸ್ಥಿತರಿದ್ದು ಶ್ರುತಿ ರವರು ಪ್ರಾರ್ಥಿಸಿ, ಡಾ. ಸ್ಪೂರ್ತಿ ನಿರೂಪಿಸಿ ಡಾ.ಸ್ಮಿತ ಸ್ವಾಗತಿಸಿ ಬಿ ಎಚ್ ಓ ಶಿವಪ್ಪ ವಂದಿಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ