ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸರ್ಕಾರಿ ನೌಕರರಿಗೆ ಉಚಿತ ಹೃದಯ ತಪಾಸಣಾ ಶಿಬಿರ.
ಕೂಡ್ಲಿಗಿ ಡಿಸೆಂಬರ್.18

ಕಚೇರಿಗಳ ಕಾರ್ಯಭಾರ ಒತ್ತಡಗಳಿಂದ ಗಂಭೀರ ಕಾಯಿಲೆಗಳಿಗೆ ಸರ್ಕಾರಿ ನೌಕರರು ತುತ್ತಾಗುತ್ತಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾ ಘಟಕದ ಅಧ್ಯಕ್ಷ ಪಾಲ್ತೂರ್ ಶಿವರಾಜ್ ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ಹಿರೇಮಠ ಕಲ್ಯಾಣ ಮಂಟಪದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ ಉಚಿತ ಹೃದಯ ತಪಾಸಣಾ ಶಿಬಿರದ ಅಧ್ಯಕ್ಷತೆವಹಿಸಿ ಮಾತನಾಡಿದರು. ಇಂದಿನ ಕಂಪ್ಯೂಟರ್ ಯುಗದ ನಾಗಲೋಟದ ಬದುಕಿಗೆ ತನ್ನನ್ನು ತಾನು ಮರೆಯುವಷ್ಟು ನೌಕರರು ಒತ್ತಡವನ್ನು ಅನುಭವಿಸಿ ಮಾನಸಿಕವಾಗಿ ನಲುಗಿ ಹೋಗಿದ್ದಾರೆ. ತಾಳಲಾರದ ತೊಳಲಾಟಕ್ಕೆ ಗುರಿಯಾಗಿ ಕೆಲವರು ಆತ್ಮಹತ್ಯೆಯಂತಹ ಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ. ಅನಾರೋಗ್ಯ ಸಮಸ್ಯೆಯಿಂದ ಬಳಲುವ ನೌಕರರು ಅನಿವಾರ್ಯವಾಗಿ ಕಚೇರಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿರುವುದು ಕಂಡು ಬಂದಿದೆ. ಇದರಿಂದ ಸಂಘವು ನೌಕರರ ಆರೋಗ್ಯ ದೃಷ್ಠಿಯಿಂದ ಉಚಿತ ಹೃದಯ ತಪಾಸಣೆ ಶಿಬಿರಗಳನ್ನು ಆಯೋಜಿಸಿದೆ. ದೂರದ ಪ್ರತಿಷ್ಠಿತ ಬೆಂಗಳೂರಿನ ನಾರಾಯಾಣ ಹೃದಯಾಲಯದ ವಿಶೇಷ ತಜ್ಞರು ಆಗಮಿಸಿರುವುದರಿಂದ ಇಲ್ಲಿ ತಪಾಸಣೆ ಹಾಗೂ ಸಮಾಲೋಚನೆಯ ಮೂಲಕ ಪರಿಹಾರ ಕಂಡು ಕೊಳ್ಳಬಹುದಾಗಿದೆ ಎಂದರು.

ಧಿವ್ಯ ಸಾನಿಧ್ಯವಹಿಸಿದ ಪೂಜ್ಯ ಷ.ಬ್ರ. ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿಗಳು ಆರ್ಶೀವಚನ ನೀಡಿ, ಹೃದಯ ಪೂರ್ವಕವಾಗಿ ಇದೊಂದು ಒಳ್ಳೆಯ ಕಾರ್ಯಕ್ರಮ ನೌಕರರು ಕಾರ್ಯದ ಒತ್ತಡದಿಂದ ಬಳಲುತ್ತಿದ್ದಾರೆ. ತಮಗೆ ಅರಿವಿಲ್ಲದೆ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹೃದಯ ಸಂಬಂಧಿ ಕಾಯಿಲೆಗಳನ್ನು ನಿರ್ಲಕ್ಷ್ಯವಹಿಸದೆ ಎಲ್ಲರೂ ಆರೋಗ್ಯದ ಕಡೆ ಲಕ್ಷ್ಯ ವಹಿಸುವಂತೆ ಹಾಗೂ ಸಧೃಡವಾಗುವಂತೆ ಶುಭ ಹಾರೈಸಿದರು. ನಾರಾಯಾಣ ಹೃದಯಾಲಯದ ಡಾ. ಗುರುರಾಜ್, ತಾಪಂ ಇ.ಓ ವೈ. ರವಿಕುಮಾರ್, ಬಿಇಓ ಪದ್ಮನಾಭ ಕರಣಂ, ಕಜಾಪ ಅಧ್ಯಕ್ಷ ಕೆ.ಯಂ.ವೀರೇಶ್, ಶಿಕ್ಷಕಿ ಇಂದಿರಾ ಮಾತನಾಡಿದರು. ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಎಸ್. ಜಗದೀಶ್, ಸಹಶಿಕ್ಷಕರಾದ ಹೆಚ್.ಡಿ. ಉಡುಚಪ್ಪ, ಎಸ್.ವಿ. ಸಿದ್ಧರಾಧ್ಯ, ಕೆ.ಎಸ್. ವೀರೇಶ್, ಆರ್.ಬಿ. ಬಸವರಾಜ್, ಕೆ.ಹೆಚ್.ಎಂ.ಶಶಿಧರ, ಟಿ. ತಿಂದಪ್ಪ ಸೇರಿದಂತೆ ಇತರರಿದ್ದರು. ಮುನ್ನ ಜಾನಪದ ಕಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ರಾಜ್ಯೋತ್ಸವ ಪುರಸ್ಕೃತ ತಾಲೂಕಿನ ಬಿಸ್ನಳ್ಳಿ ಗ್ರಾಮದ ಸಿದ್ಧಪ್ಪ ದಳವಾಯಿ ಇವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ