ಬೀಜ ಗೊಬ್ಬರ ಕಳಪೆ ಅಥವಾ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ – ಅಮರೇಶ್ ಜಿ.ಕೆ ತಹಶೀಲ್ದಾರ್.
ಕೊಟ್ಟೂರು ಮೇ.29

ಕೊಟ್ಟೂರು ತಾಲೂಕಿನಲ್ಲಿ ಪೂರ್ವ ಮುಂಗಾರು ಮಳೆ ಪ್ರಾರಂಭವಾಗಿದ್ದು. ರೈತರಿಗೆ ಉತ್ತಮ ಬೀಜ ಮತ್ತು ಗೊಬ್ಬರ ಸಿಗಬೇಕೆನ್ನುವ ಉದ್ದೇಶ ದಿಂದ ತಾಲೂಕಾ ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಬೀಜ/ಗೊಬ್ಬರ ಮಾರಾಟಗಾರರ ಸಭೆಯನ್ನು ನಡೆಸಲಾಯಿತು. ಸದರಿ ಸಭೆಯಲ್ಲಿ ರೈತ ಮುಖಂಡರು, ರೈತರು ಹಾಗೂ ಬೀಜ ಗೊಬ್ಬರ ಮಾರಾಟಗಾರರು ತಮ್ಮ ತಮ್ಮ ಅಹವಾಲುಗಳನ್ನು ನೀಡಿದರು. ಸಹಾಯಕ ನಿರ್ದೇಶಕರಾದ ಸುನಿಲ್ ಕುಮಾರ್ ಎಂ ಟಿ ಇವರು ಸ್ವಾಗತವನ್ನು ಕೋರುತ್ತಾ, ಡಿಎಪಿ ಮತ್ತು ಯೂರಿಯಾ ಸಹಿತ ಎಲ್ಲಾ ರಸಗೊಬ್ಬರಗಳು ಸಾಕಷ್ಟು ಪೂರೈಕೆ ಇದ್ದು, ರೈತರು ಯಾವುದೇ ಒಂದು ಕಂಪನಿ/ವಿಧದ ಬೀಜ/ರಸಗೊಬ್ಬರಗಳ ಮೇಲೆ ಅವಲಂಬನೆಯಾಗದೇ ಪರ್ಯಾಯ ಬೀಜ/ರಸಗೊಬ್ಬರಗಳನ್ನು ಬಳಸುವಂತೆ ಸಲಹೆ ನೀಡಿದರು. ವೆಂಕಟಸ್ವಾಮಿ ಸಿಪಿಐ ಇವರು ಹಳ್ಳಿಗಳಲ್ಲಾಗಲೀ ಎಲ್ಲಿಯಾದರೂ ಬಂದು ಕಡಿಮೆ ದರಕ್ಕೆ ಯಾವುದೇ ಅನುಮಿತಿ ಇಲ್ಲದೇ ಅನಧಿಕೃತವಾಗಿ ಬೀಜ ಅಥವಾ ಗೊಬ್ಬರವನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡಿದಲ್ಲಿ ನಿಯಮಾನುಸಾರ ಪರಿಶೀಲಿಸಿ ಮುಂದೆ ರೈತರಿಗಾಗುವ ತೊಂದರೆ ತಪ್ಪಿಸಬಹುದು ಎಂದು ಸಲಹೆ ನೀಡಿದರು. ತಹಶೀಲ್ದಾರರಾದ ಅಮರೇಶ್ ಜಿ ಕೆ ಇವರು ಈ ಬಾರಿ ಪೂರ್ವ ಮುಂಗಾರು ಉತ್ತಮ ಮಳೆಯಾಗುತ್ತಿದ್ದು ಕಳೆದ ಬಾರಿಯ ರೈತರ ನೋವನ್ನು ಮರೆಸಿ ಸ್ವಲ್ಪ ಸಂತಸವನ್ನು ತಂದಿದೆ.

ರೈತರು ಬಿತ್ತನೆ ಕಾರ್ಯವನ್ನು ಪ್ರಾರಂಭಿಸಿದ್ದು. ಅವರಿಗೆ ಉತ್ತಮ ಗುಣಮಟ್ಟದ ಬೀಜ ಹಾಗೂ ರಸ ಗೊಬ್ಬರವನ್ನು ವ್ಯಾಪಾರಸ್ಥರು ಮಾರಾಟ ಮಾಡಬೇಕು. ಲಾಭದ ಆಸೆಗಾಗಿ ಕಳಪೆ ಗುಣಮಟ್ಟದ ಬೀಜ-ಗೊಬ್ಬರ ಮಾರಾಟ ಮಾಡಿದರೆ ಅಥವಾ ಸರ್ಕಾರ ನಿಗಧಿ ಪಡಿಸಿದ ದರಕ್ಕಿಂತ ಹೆಚ್ಚಿಗೆ ಮಾರಾಟ ಮಾಡಿದರೆ ಅಂತಹವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ವ್ಯಾಪಾರಸ್ಥರು ತಾವು ಸಂಗ್ರಹ ಮಾಡಿರುವ ಗೋಧಾಮಿನ ಮುಂದೆ ತಮ್ಮ ಅಂಗಡಿಯ ಮಾಹಿತಿ ಫಲಕವನ್ನು ಹಾಕಬೇಕು. ಅಂಗಡಿಯಲ್ಲಿ ಪ್ರತಿದಿನ ಬೀಜ ಗೊಬ್ಬರದ ದಾಸ್ತಾನು ಹಾಗೂ ದರ ಪಟ್ಟಿಯನ್ನು ಕಡ್ಡಾಯವಾಗಿ ಹಾಕಿರಬೇಕು. ಯಾರಾದರೂ ಗೊಬ್ಬರ ಬೀಜಗಳನ್ನು ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಮಾಡಿ ಹೆಚ್ಚಿನ ಧರಕ್ಕೆ ಮಾರಾಟ ಮಾಡುವ ಪ್ರಯತ್ನ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು. ನಿಗಧಿತ ಬೆಲೆಯಲ್ಲಿ ಬೀಜ/ರಸ ಗೊಬ್ಬರಗಳನ್ನು ಪೂರೈಸಿ ತಾಲೂಕಿನಲ್ಲಿ ಯಾವುದೇ ರೀತಿಯ ದೂರುಗಳು ಬಾರದಂತೆ ವ್ಯಾಪಾರವನ್ನು ಮಾಡುವಂತೆ ಸಲಹೆ ನೀಡಿದರು. ಈ ಸಭೆಯಲ್ಲಿ ಕು.ಅಶ್ವಿನಿ ಡಿ, ಎಹೆಚ್ಒ ತೋಟಗಾರಿಕೆ ಇಲಾಖೆ, ನೀಲಾನಾಯ್ಕ ಕೃಷಿ ಅಧಿಕಾರಿ(ತಾಂತ್ರಿಕ) ಕುಮಾರಸ್ವಾಮಿ ಕೆ ಜಾರಿದಳ, ಹೊಸಪೇಟೆ, ರೈತ ಮುಖಂಡರಾದ ರಾಮಪ್ಪ, ಶ್ರೀಧರ, ಜಯಪ್ರಕಾಶನಾಯ್ಕ, ಸುರೇಶನಾಯ್ಕ , ಬೀಜ ಗೊಬ್ಬರ ವ್ಯಾಪಾರಿಗಳ ಸಂಘದ ತಾಲೂಕಾ ಅಧ್ಯಕ್ಷರಾದ ಶ್ರೀಧರಶೆಟ್ಟಿ ಹಾಗೂ ಇತರೆ ವ್ಯಾಪಾರಸ್ಥರು ಹಾಜರಿದ್ದರು. ಸಿ.ಮ.ಗುರುಬಸವರಾಜ ನಿರ್ವಹಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್. ಕುಮಾರ್.ಸಿ.ಕೊಟ್ಟೂರು.