ಒಳಮೀಸಲಾತಿ ಸರ್ಕಾರದ ಮೃದು ಧೋರಣೆಗೆ ಖಂಡನೀಯ – ಸುರೇಶ ಚಲವಾದಿ.

ಗದಗ ಮಾ.28

ರಾಜ್ಯದ ಶೋಷಿತ ಸಮುದಾಯಗಳ ನ್ಯಾಯಯುತ ಬೇಡಿಕೆಯಾದ ಒಳಮೀಸಲಾತಿ ಜಾರಿ ಗೊಳಿಸುವಲ್ಲಿ ವಿಳಂಬ ಮಾಡುತ್ತಾ ಮೃದು ಧೋರಣೆ ತೋರುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡನೀಯವೆಂದು ಭಾರತೀಯ ಜನತಾ ಪಕ್ಷದ ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ವಾಯ್.ಚಲವಾದಿ ಆರೋಪಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕಳೆದ 3 ದಶಕಗಳ ಕಾಲ ಒಳಮೀಸಲಾತಿ ಜಾರಿ ಗೊಳಿಸುವಂತೆ ದಲಿತ ಹಾಗೂ ಪ್ರಗತಿ ಪರ ಸಂಘಟನೆಗಳು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ವಿರುದ್ದ ಬ್ರಹತ್ ಕಾಲ್ನಡಿಗೆ ಜಾಥಾ ಹಾಗೂ ವಿವಿಧ ರೀತಿಯ ಹೋರಾಟವನ್ನು ಹಮ್ಮಿಕೊಂಡು ಸರ್ಕಾರಕ್ಕೆ ಸಾಕಷ್ಟು ಬಾರಿ ಛೀಮಾರಿ ಹಾಕಿದರೂ ಎಚ್ಚೆತ್ತು ಕೊಳ್ಳದ ಸನ್ಮಾನ್ಯ ಸಿದ್ದರಾಮಯ್ಯ ನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಎಚ್.ಎನ್ ನಾಗಮೋಹನ್ ದಾಸ್ ಅವರ ವರದಿ ಅಂಗೀಕರಿಸಲು ಕಾಲಹರಣ ಮಾಡುವ ಉದ್ದೇಶದಿಂದ ವೈಜ್ಞಾನಿಕ ಸಮೀಕ್ಷೆ ನೆಪವೊಡ್ಡಿ ಮತ್ತೆ 2 ತಿಂಗಳುಗಳ ಕಾಲ ಸಮಯ ತೆಗೆದುಕೊಂಡು ಈ ನೆಲದ ಅಸಂಖ್ಯಾತ ಶೋಷಿತ ಸಮುದಾಯಗಳಿಗೆ ಅನ್ಯಾಯವೆಸಗುತ್ತಿದೆ.ಕೇವಲ ಬಾಯಿ ಮಾತಿಂದ ದಲಿತರ ಓಲೈಕೆ ರಾಜಕಾರಣ ಮಾಡುತ್ತಿರುವ ಸನ್ಮಾನ್ಯ ಸಿದ್ದರಾಮಯ್ಯನವರು ಮಾತೆತ್ತಿದರೆ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಆದರೆ ದಲಿತರ ನ್ಯಾಯಯುತ ಬೇಡಿಕೆಯಾದ ನಿವ್ರತ್ತ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನ ಅಂಗೀಕರಿಸಿ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನ ಒದಗಿಸಿ ತಮ್ಮ ಬದ್ದತೆಯನ್ನ ಪ್ರದರ್ಶಿಸ ಬೇಕಾಗಿತ್ತು. ಆದರೆ ಅವರಿಗೆ ಬೇಕಾಗಿರುವದು ದಲಿತರ ಹೆಸರಿನ ಮೇಲೆ ರಾಜಕಾರಣವೇ ಹೊರತು ದಲಿತರ ಅಭಿವೃದ್ದಿ ಅಲ್ಲ ಎಂಬುವದು ಮೇಲ್ನೋಟಕ್ಕೆ ಸಾಬೀತಾಗಿದೆ.ಕಳೆದ 2018 ರ ವಿಧಾನ ಸಭಾ ಚುನಾವಣೆಯ ಪೂರ್ವದಲ್ಲಿ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಒಳಮೀಸಲಾತಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಬೃಹತ್ ಸಮಾರಂಭದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯನವರು ಒಳಮೀಸಲಾತಿ ಜಾರಿ ಗೊಳಿಸುವ ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದ ನಂತರ ಒಳಮೀಸಲಾತಿ ವಿಚಾರ ಪ್ರಸ್ತಾಪಿಸಲೇ ಇಲ್ಲಾ. ಅಷ್ಟೇ ಅಲ್ಲದೇ ಸಮಾರಂಭಕ್ಕೆ ಆಗಮಿಸುವ ಸಂದರ್ಭದಲ್ಲಿ ಸಹೋದರ ಸಮುದಾಯದ ಕೆಲವು ಜನ ರಸ್ತೆ ಅಪಘಾತದಲ್ಲಿ ಮೃತ ಪಟ್ಟರು. ಅಷ್ಟಾದರೂ ಕಣಿಕರ ಪಡದ ಸನ್ಮಾನ್ಯ ಮುಖ್ಯ ಮಂತ್ರಿಗಳು ದಲಿತರ ಶವಗಳ ಮೇಲೆ ರಾಜಕಾರಣ ಮಾಡಿದರೆ ಹೊರತು ಸಾಮಾಜಿಕ ನ್ಯಾಯ ದೊರಕಿಸಲಿಲ್ಲ ವೆಂದು ಬೇಸರ ವ್ಯಕ್ತ ಪಡಿಸಿದರು.ನಾಡಿನ ಸಮಾನತೆಯ ಶ್ರೇಷ್ಟ ಸಂತ.ವಿಶ್ವ ಗುರು ಬಸವಣ್ಣ ನವರ “ಆಡದೆ ಮಾಡುವವನು ರೂಢಿಯೊಳಗುತ್ತಮ” ಎಂಬ ವಾಣಿಯಂತೆ ಕಳೆದ 2021-22 ನೇ. ಸಾಲಿನಲ್ಲಿ ಸನ್ಮಾನ್ಯ ಬಸವರಾಜ ಬೊಮ್ಮಾಯಿ ನೇತ್ರತ್ವದ ಬಿಜೆಪಿ ಸರ್ಕಾರ ಬಡ ಜನತೆಗೆ ಸಾಮಾಜಿಕ ನ್ಯಾಯವನ್ನು ಒದಗಿಸ ಬೇಕೆಂಬ ಮಹತ್ತರವಾದ ಆಲೋಚನೆಗಳಿಂದ ಸಂಪುಟ ದರ್ಜೆಯ ಸಭೆ ಕರೆದು ನಿವೃತ್ತ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗವನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ತಮ್ಮ ದಿಟ್ಟತನವನ್ನು ಪ್ರದಶಿಸಿದರು. ಇದು ಶೋಷಿತ ಸಮುದಾಯದ ಬಡ ಜನತೆಯ ಮೇಲೆ ಇರ್ತಕ್ಕಂತಹ ನೈಜ ಕಾಳಜಿ. ಅಷ್ಟೇ ಅಲ್ಲದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಜನ ಸಂಖ್ಯೆಗನುಗುಣವಾಗಿ ಮೀಸಲಾತಿ ಹೆಚ್ಚಿಸಿ ಸಮುದಾಯದ ಒಳಿತಿಗಾಗಿ ಕ್ರಾಂತಿಕಾರಿ ಹೆಜ್ಜೆಯನ್ನಿಡುವದರ ಜೊತೆಗೆ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸ್ಸು ನನಸ್ಸು ಮಾಡುತ್ತಾ ದಾಪುಗಾಲು ಹಾಕಿದರು.ಆದರೆ ಮಾತೆತ್ತಿದರೆ ದಲಿತರ ಹೆಸರೇಳಿ ಅಧಿಕಾರ ಅನುಭವಿಸುತ್ತಿರುವ ಕಾಂಗ್ರೆಸ್ ದಲಿತರ ಅಭಿವೃದ್ದಿಗಿರುವ SCSP/TSP ಅನುದಾನ ಕಬಳಿಸಿರುವದಲ್ಲದೇ ದಲಿತರ ಮಹತ್ತರ ಬೇಡಿಕೆಯಾದ ಒಳಮೀಸಲಾತಿ ಜಾರಿ ಗೊಳಿಸದೇ ಮತ್ತೆ ಕಾಲಹರಣ ಮಾಡುತ್ತಿರುವುದು ವಿಪರ್ಯಾಸದ ಸಂಗತಿ.ಕಳೆದ ವಾರ ವಿವಿಧ ದಲಿತಪರ ಸಂಘಟನೆಗಳು ಹಾಸನದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ಕ್ರಾಂತಿ ಕಾರಿ ಪಾದಯಾತ್ರೆಯ ಮೂಲಕ ಒಳಮೀಸಲಾತಿ ಜಾರಿಗಾಗಿ ಆಗ್ರಹಿಸಿದ ಬೃಹತ್ ಸಮಾರಂಭದಲ್ಲಿ ಹಕ್ಕೊತ್ತಾಯ ಮಂಡಿಸಿದ್ದರು. ಅಷ್ಟಕ್ಕೂ ಜಗ್ಗದ ಎಮ್ಮೆ ಚರ್ಮದ ರಾಜ್ಯ ಸರ್ಕಾರ ಮತ್ತೆ ವೈಜ್ಞಾನಿಕ ಸಮೀಕ್ಷೆಯ ನೆಪವೊಡ್ಡಿ 2 ತಿಂಗಳುಗಳ ಕಾಲ ಸಮಯವನ್ನು ತೆಗೆದುಕೊಂಡು ದಲಿತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುವುದರ ಜೊತೆಗೆ ಅಸಂಖ್ಯಾತ ಶೋಷಿತ ಸಮುದಾಯದ ಜನರ ಭಾವನೆಗಳ ಜೊತೆಗೆ ಚೆಲ್ಲಾಟ ವಾಡುತ್ತಿದೆ. ಇನ್ನಾದರೂ ಪ್ರಜ್ಞಾವಂತ ದಲಿತ ಸಮುದಾಯ ದಲಿತರಿಗೆ ಯಾಮಾರಿಸುತ್ತಿರುವ ಸರ್ಕಾರದ ಜಾಣ ನಡೆಯನ್ನು ಅರ್ಥೈಸಿ ಕೊಳ್ಳಬೇಕೆಂದು ಹೇಳಿದರು.ಒಳ ಮೀಸಲಾತಿಯನ್ನು ಆಯಾ ರಾಜ್ಯ ಸರ್ಕಾರ ಅಂಗೀಕರಿಸ ಬಹುದೆಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ನೇತ್ರತ್ವದ 7 ಸದಸ್ಯರನ್ನೊಳ ಗೊಂಡ ಪೀಠ ಮಹತ್ತರವಾದ ತೀರ್ಪು ನೀಡಿ ಆದೇಶಿಸಿದೆ. ಆದರೆ ನ್ಯಾಯಾಲಯದ ತೀರ್ಪನ್ನು ಗೌರವಿಸದೇ ಸಂವಿಧಾನದ ಆಶಯಗಳಿಗೆ ಕೊಳ್ಳಿ ಇಟ್ಟಿರುವ ರಾಜ್ಯ ಸರ್ಕಾರ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡಿದ ದ್ರೋಹವಲ್ಲದೆ ಮತ್ತೇನು. ಅಂಬೇಡ್ಕರ್ ಅವರು ರಚಿಸಿದ ಕಾನೂನನ್ನ ಗೌರವಿಸದಿರುವವರು ಅಂಬೇಡ್ಕರ್ ವಿಚಾರ ಧಾರೆಯ‌ನ್ನ ಒಪ್ಪುತ್ತಾರೆಯೇ ಎಂದು ಪ್ರಶ್ನಿಸಿದರು. ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರ ಧಾರೆಗಳಿಗೆ ವಿರುದ್ದವಾಗಿ ನಡೆದು ಕೊಂಡು ಒಳಮೀಸಲಾತಿ ಕಲ್ಪಿಸದೇ ವಿಳಂಬ ಮಾಡಿ ಬಡ ಜನರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದೆ. ತಲ ತಲಾಂತರದಿಂದಲೂ ತುಳಿತಕ್ಕೊಳಗಾದ ಸಮುದಾಯದ ಜನತೆ ತಮ್ಮ ಹಕ್ಕನ್ನು ಪಡೆದು ಕೊಳ್ಳಲು ಇನ್ನೂ ಎಷ್ಟು ತಲೆ ಮಾರು ಬೇಕು. ಸರ್ಕಾರ ಇನ್ನೂ ಎಷ್ಟು ಜೀವವನ್ನು ಬಲಿ ತೆಗೆದು ಕೊಳ್ಳುವ ಆಲೋಚನೆಯಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸುಧೀರ್ಘ ಕಾಲ ಆಡಳಿತದಲ್ಲಿರುವ ಕಾಂಗ್ರೆಸ್ ದಲಿತರನ್ನು ಕೇವಲ ಚುನಾವಣಾ ಮೆಟ್ಟಿಲುಗಳನ್ನಾಗಿ ಬಳಸಿ ಕೊಂಡು ಅನ್ಯಾಯ ವೆಸಗುತ್ತಾ ಬಂದಿರುತ್ತದೆ. ಪ್ರಸ್ತುತ ದಿನ ಮಾನದಲ್ಲಿಯೂ ಸಹಿತ ತಮ್ಮ ಹಳೆ ಚಾಳಿ ಮುಂದುವರೆಸುತ್ತಿರುವ ಕಾಂಗ್ರೆಸ್‌ನ ಕೊಳಕು‌ ಮನಸ್ಥಿತಿಯನ್ನ ಪ್ರಜ್ಞಾವಂತ ಸಮುದಾಯ ಗಮನಿಸುತ್ತಿದೆ ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂಬರುವ ದಿನ ಮಾನಗಳಲ್ಲಿ ಸಮುದಾಯದ ಶಕ್ತಿಯನ್ನು ಸರ್ಕಾರಕ್ಕೆ ತೋರಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button