ಪೌರ ಕಾರ್ಮಿಕರು ನಿಜವಾದ ಕಾಯಕ ಯೋಗಿಗಳು – ಮಹೇಶ ನಿಡಶೇಸಿ.
ನರೇಗಲ್ ಸ.23

ಮಳೆ, ಗಾಳಿ, ಚಳಿ, ಬಿಸಿಲು ಎನ್ನದೆ ಸದಾಕಾಲ ಸಾರ್ವಜನಿಕರ ಸೇವೆಯಲ್ಲಿ ತೊಡಗಿರುವ ಪೌರ ಕಾರ್ಮಿಕರು ನಿಜವಾದ ಕಾಯಕ ಯೋಗಿಗಳು. ಅವರನ್ನು, ಅವರ ಕಾರ್ಯವನ್ನು ಗೌರವಿಸುವ ಕಾರ್ಯವನ್ನು ಸಾರ್ವಜನಿಕರು ಮಾಡಬೇಕು ಎಂದು ನರೇಗಲ್ಲ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಹೇಶ ನಿಡಶೇಸಿ ಹೇಳಿದರು.ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಕಚೇರಿ ಚಿತ್ರದುರ್ಗ ಮತ್ತು ನರೇಗಲ್ಲ ಘಟಕ ಹಾಗೂ ನರೇಗಲ್ಲ ಪಟ್ಟಣ ಪಂಚಾಯತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಡೆದ ೧೩ ನೆ. ವರ್ಷದ ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಿತ್ಯವೂ ಬೆಳಗಿನ ಜಾವ ಎದ್ದು ಪಟ್ಟಣದ ಪ್ರಮುಖ ಬೀದಿಗಳ ಕಸ ಗೂಡಿಸಿ, ಓಣಿಗಳಲ್ಲಿನ ಕಸ ತಗೆದು ಸಾರ್ವಜನಿಕರ ಆರೋಗ್ಯದ ಕಡೆಗೆ ಗಮನ ನೀಡುವ ಅವರ ಕಾರ್ಯ ಶ್ಲಾಘನೀಯವಾದುದು. ಕೊರೊನಾದಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ಅವರು ಎದೆ ಗುಂದದೆ ತಮ್ಮ ಕಾರ್ಯವನ್ನು ನಿರ್ವಹಿಸಿ, ನಮ್ಮೆಲ್ಲರ ಜೀವ ಮತ್ತು ಜೀವನವನ್ನು ಕಾಪಾಡಿದ್ದಾರೆ. ಆದ್ದರಿಂದ ಈ ವೇದಿಕೆಯ ಮೂಲಕ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ನಿಡಶೇಸಿ ಹೇಳಿದರು.ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಶಿವಾನಂದ ಗೋಗೇರಿ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಕಾಯಕ ದೊಡ್ಡದು. ಅವರು ಎಂದಿಗೂ ತಮ್ಮ ಕಾಯಕದ ಬಗ್ಗೆ ನಿರಾಸಕ್ತಿಯನ್ನು ತೋರಿಸಬಾರದು. ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಬೇಕು. ಸಾರ್ವಜನಿಕರೂ ಸಹ ಪೌರ ಕಾರ್ಮಿಕರನ್ನು ವರ್ಷಕ್ಕೊಮ್ಮೆ ಯಾದರೂ ಗೌರವಿಸಿ ಸನ್ಮಾನಿಸುವಂತಹ ಕಾರ್ಯವನ್ನು ಮಾಡ ಬೇಕೆಂದರು.ವೇದಿಕೆಯ ಮೇಲೆ ಪಟ್ಟಣ ಪಂಚಾಯತಿ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಪೌರ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷರಮೇಶ ಹಲಗಿಯವರ, ಪೌರ ಕಾರ್ಮಿಕ ಸಂಘದ ಉಪಾಧ್ಯಕ್ಷ ಶಂಕ್ರಪ್ಪ ದೊಡ್ಡಣ್ಣವರ, ಪಟ್ಟಣ ಪಂಚಾಯತಿ ಸದಸ್ಯರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು. ನರೇಗಲ್ಲ ಘಟಕದ ಅಧ್ಯಕ್ಷ ನೀಲಪ್ಪ ಚಳ್ಳಮರದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಆರೀಫ್ಬೇಗ್ ಮಿರ್ಜಾ ನಿರೂಪಿಸಿ, ಸ್ವಾಗತಿಸಿದರು. ಎ.ಎಸ್. ಮೆಣಸಿಗಿ ವಂದಿಸಿದರು. ಸಮಾರಂಭದಲ್ಲಿ ಅನೇಕ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ನರೇಗಲ್ಲದಲ್ಲಿ ನಡೆದ ಪೌರ ಕಾರ್ಮಿಕ ದಿನಾಚರಣೆಯನ್ನು ಪಟ್ಟಣ ಪಂಚಾಯತಿ ಅಧ್ಯಕ್ಷ ಫಕೀರಪ್ಪ ಮಳ್ಳಿ ಮತ್ತಿತರ ಗಣ್ಯರು ಉದ್ಘಾಟಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ. ಎಫ್.ತೋಟಗುಂಟಿ.ಗದಗ