ಬಸವಣ್ಣನವರ ಹೆಸರಿಗೆ ಅಂಟಿಕೊಂಡರೆ ಆನಂದ ಬಸವಣ್ಣನವರ ತತ್ವಕ್ಕೆ ಅಂಟಿಕೊಂಡರೆ ಮಹಾದಾನಂದ – ಡಿ.ಶಬ್ರಿನಾ ಮಹಮದ್ ಅಲಿ.
ಪಾಂಡೋಮಟ್ಟಿ ಜ.22

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ದಿನಾಂಕ ಜನವರಿ 19 ಭಾನುವಾರ ದಂದು ನಡೆದ ಬಸವತತ್ವ ಸಮ್ಮೇಳನ ನಡೆದಿದ್ದು ಶ್ರೀ.ಮ.ನಿ.ಪ್ರ. ಶ್ರೀ ಗುರು ಬಸವ ಮಹಾ ಸ್ವಾಮಿಜಿಯವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದರಾದ ಶ್ರೀ ಬಿ.ವೈ ರಾಘವೇಂದ್ರ ಮಾತನಾಡಿ, ಮಾನವೀಯತೆ ತುಂಬಿದ ಬಸವತತ್ವ ಎಲ್ಲಾ ಕಡೆ ಪಸರಿಸಲು ನಾವು ನೀವೆಲ್ಲಾ ಸಹಕರಿಸ ಬೇಕಿದೆ ಎಂದರು. ಪ್ರಾಸ್ತಾವಿಕ ನುಡಿಗಳನ್ನು ಮಾಡಾಳ್ ಮಲ್ಲಿಕಾರ್ಜುನ ಅವರು ಆಡುತ್ತಾ, ಪಾಂಡೋಮಟ್ಟಿಯ ಶ್ರೀಗುರು ಬಸವ ಸ್ವಾಮೀಜಿಯವರು ದಣಿವಿಲ್ಲದೆ ಬಸವತತ್ವಕ್ಕಾಗಿ ಶ್ರಮಿಸುತಿದ್ದಾರೆ. ಅವರು ನಮಗೆ ನಿಮಗೆಲ್ಲಾ ತಂದೆ ತಾಯಿಗಿಂತ ಹೆಚ್ಚಾಗಿ ಪ್ರೀತಿ ತೋರಿಸಿ ಸಲುಹುತಿದ್ದಾರೆ ಎಂದರು. ಶರಣತತ್ವದ ಅನುಭಾವವನ್ನು ಚಳ್ಳಕೆರೆಯ ಡಿ.ಶಬ್ರಿನಾ ಮಹಮದ್ ಅಲಿಯವರು ನೀಡಿ, ಬಸವಣ್ಣನವರ ಹೆಸರಿಗೆ ಅಂಟಿಕೊಂಡರೆ ಆನಂದವಾಗುತ್ತದೆ; ಬಸವಣ್ಣನವರ ತತ್ವಕ್ಕೆ ಅಂಟಿಕೊಂಡರೆ ಮಹಾದಾನಂದವಾಗುತ್ತದೆ ಎಂದು ಹೇಳಿ, ಪಂಚಾ ಚಾರಗಳಲ್ಲಿ ಒಂದಾದ ಶಿವಾಚಾರದ ಕುರಿತು ಅನುಭಾವ ನೀಡುತ್ತಾ.”ನಮ್ಮ ಬದುಕಿನ ಜಂಜಾಟ, ಕಿತ್ತಾಟ, ತೊಳಲಾಟಗಳ ಪ್ರತಿ ಹೆಜ್ಜೆಗೂ, ನನ್ನ ಮನಸ್ಸು 12 ನೇ. ಶತಮಾನದ ಶರಣರತ್ತ, ಶರಣರ ಚಿಂತನೆಗಳತ್ತ ವಾಲುತ್ತದೆ! ಕಾರಣ, 12 ನೇ. ಶತಮಾನದ ಬಸವಾದಿ ಶರಣರು ಅಂಧಕಾರದ ಕಗ್ಗತ್ತಿಲಿನಲ್ಲಿ ಮುಳುಗಿದ್ದ ಮನುಕುಲದ ಮೇಲೆ ಬೆಳಕು ಚೆಲ್ಲಿ, ಮನುಷ್ಯರನ್ನ ಮನುಷ್ಯರಂತೆ ಕಾಣುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಅತ್ಯಪರೂಪದ ಧನ್ಯತೆಯ ಯುಗವೆಂದು ಹೇಳಬಹದು. ‘ಶರಣ’ ಎನ್ನುವ ಪದ ಸಾಮನ್ಯವಾದದ್ದಲ್ಲ; ಅದೊಂದು ಬೆಳಕು! ಶರಣನಾಗುವುದೆಂದರೆ ಆಡಿದಷ್ಟು ಸುಲಭವಲ್ಲ; ಅದು ನಡೆನುಡಿ ಎರಡಲ್ಲದ ಒಂದಾದ ಆಚಾರ! ಇದೆಲ್ಲವನ್ನ ಅರ್ಥ ಮಾಡಿಸಲು ಶರಣ/ಬಸವ ತತ್ವದಲ್ಲಿ ಪಂಚಾ ಚಾರಗಳೆಂಬ 5 ಆಚಾರಗಳಿವೆ.ಅವು 1.ಲಿಂಗಾಚಾರ 2.ಶಿವಾಚಾರ 3.ಸದಾಚಾರ 4 ಗಣಾಚಾರ 5.ಭೃತ್ಯಾಚಾರ.ಶರಣ ತತ್ವವನ್ನ ಅರಿಯುವಲ್ಲಿ ಲಿಂಗಾಚಾರ ವರ್ಣ ಮಾಲೆಯಾದರೆ ಶಿವಾಚಾರ ಕಾಗುಣಿತ ಒತ್ತಕ್ಷರ ವಿದ್ದಂತೆ. ಈ ಎರಡು ಆಚಾರಗಳನ್ನು ಪರಿ ಪೂರ್ಣವಾಗಿ ಅರಿತು ಕ್ರಿಯೆಯಲ್ಲಿ ತಂದರೆ ಉಳಿದ ಮೂರು ಆಚಾರಗಳು ನಮಗರಿವಿಲ್ಲದಂತೆ ತಾವಾಗಿಯೇ ನಮ್ಮ ಆಚರಣೆಯಲ್ಲಿ ಬಂದು ಹೋಗುತ್ತವೆ ಎಂಬುದು ನನ್ನ ಅಭಿಪ್ರಾಯ. ಹಾಗಾದರೆ ಶಿವಾಚಾರದ ಅರ್ಥ,’ಇಡೀ ಜಗತ್ತಿಗೆ ಶಿವನೊಬ್ಬನೆ ದೇವಾ, ಶಿವನ ಬಿಟ್ಟು ಅನ್ಯದೈವ ಇಲ್ಲವೆಂದರಿದು ನಿರಾಕಾರ ಶಿವನಿಗೆ ಭಕ್ತರಾಗಿ, ಆ ಶಿವಭಕ್ತರಲ್ಲಿ ಕುಲಗೋತ್ರ, ಜಾತಿ ವರ್ಣಾಶ್ರಮ ವನರಸದೆ ಅವರೊಕ್ಕುದ ಕೊಂಬುದೇ ಶಿವಾಚಾರಚಾಗಿದೆ”.

ದೇವನ ಪಿತೃತ್ವ ಮಾನವರ ಭಾತೃತ್ವ ಸಾರಲು ಸಮಾಜದಲ್ಲಿ ಬಿತ್ತಲ್ಪಟ್ಟ ವಿಚಾರವೆಲ್ಲಾ ಶಿವಾಚಾರವಾಗಿದೆ.ಶಿವಾಚಾರದ ಪ್ರಮುಖ ಅಂಶವೆಂದರೆ, “ಜಗದ ಜೀವಿಗಳೆಲ್ಲಾ ಒಬ್ಬ ದೇವನ ಮಕ್ಕಳು. ಜಾತಿ, ಕುಲ ಗೋತ್ರಗಳ ಆಧಾರದ ಮೇಲೆ ಶ್ರೇಷ್ಠ, ಕನಿಷ್ಠ ಎಂದು ಜನಾಂಗವನ್ನು ಬೇರೆ ಬೇರೆ ಮಾಡದೆ ಸರ್ವರೂ ಸಮಾನರು ಎಂದು ಸಾಮಾಜಿಕ ಸಮಾನತೆ ಸಾರುವುದೇ ಆಗಿದೆ”. ಶಿವಾಚಾರವನ್ನು ಕುರಿತು ಶರಣರು ಏನು ಹೇಳುತ್ತಾರೆ ಎಂಬುದನ್ನ ನೋಡಿದಾಗ, ಅಲ್ಲಮಪ್ರಭುಗಳು “ಶಿವಾಚಾರ ಎನ್ನುವುದು ಬೀದಿಯಲ್ಲಿ ಆಡಿದ ಮಾತಿನಂತಲ್ಲ; ಕಾಮ ಕ್ರೋಧಗಳನು ಲಿಂಗಕ್ಕೆ ಅರ್ಪಿತ ಮಾಡದೆ ಶಿವಾಚಾರ ಸಾಧ್ಯವಾಗದು” ಎಂದು ಹೇಳುತ್ತಾರೆ. ಬಸವಣ್ಣನವರು ಅವರ ನಡೆಯೊಂದು ನುಡಿಯೊಂದಾದಡೆ ಶಿವಾಚಾರಕ್ಕವರು ಸಲ್ಲರಯ್ಯ ಬಲ್ಲನು ಸಾತ್ವಿಕ ರಲ್ಲದವರ ನೊಲ್ಲನು ಶಿವಾಚಾರವ ಬಲ್ಲನು, ಅಲ್ಲಿ ನಿಲ್ಲನು, ಪ್ರಪಂಚಿಯ ಮನವನೊಲ್ಲನು ಕೂಡಲ ಸಂಗಮದೇವಾ” ಎಂದು ಹೇಳುತ್ತಾರೆ. ಒಂದೇ ವಾಕ್ಯದಲ್ಲಿ ಶಿವಾಚಾರವನ್ನ ಹೇಳುವುದಾದರೆ ಜಾತ್ಯಾತೀತವಾಗಿ ಮಾನವೀಯತೆಯಿಂದ ಸಮಾನತೆಯಿಂದ ಬದುಕುವುದಾಗಿದೆ. ಆ ಭಾವೈಕ್ಯತೆಯ ಬದುಕು ನಮ್ಮದಾಗಬೇಕಾದರೆ ಶಿವಾಚಾರ ಸಾರುವ ಸಕಲ ತತ್ವಗಳನ್ನು ನಮ್ಮ ನಡೆ – ನುಡಿಯಲ್ಲಿ ತರಬೇಕಿದೆ. ಹಾಗಾದಾಗ ಮಾತ್ರ ನಾವು ಶರಣರು ನಡೆದ ಶಿವಾಚಾರದ ಮಾರ್ಗದಲ್ಲಿ ಸಾಗಲು ಸಾಧ್ಯ ಎಂದರು. ಮುಖ್ಯ ಅತಿಥಿಗಳಾಗಿ, ವಿಧಾನ ಸಭಾ ಸದಸ್ಯರಾದ ಸಿ.ಪುಟ್ಟಣ್ಣ ಅವರು ಮಾತನಾಡಿ, ಬಸವತತ್ವ ಬರಿ ಬಾತಿ ಮಾತಿನಲ್ಲಿ ಬರುವುದಕ್ಕಿಂತ ಕ್ರಿಯೆಯಲ್ಲಿ ಬಂದರೆ ಸಾರ್ಥಕವಾಗುತ್ತದೆ ಎಂದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎಸ್.ಷಡಕ್ಷರಿ ಅವರು ಮಾತನಾಡಿ ಶರಣತತ್ವ ಅನುಷ್ಠಾನಕ್ಕೆ ನಮ್ಮ ಸಹಾಕಾರ ಸದಾ ಇರುತ್ತದೆ ಎಂದರು. ಚನ್ನಗಿರಿ ತಾಲೂಕಿನ ಮಾಜಿ ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪನವರು ಮಾತನಾಡಿ ಪಾಂಡೋಮಟ್ಟಿ ನಿಜ ಅರ್ಥದ ಬಸವತತ್ವ ಪಾಲಿಸುತ್ತಿದೆ ಇದು ನಮ್ಮೆಲ್ಲರ ಪುಣ್ಯ ಎಂದರು. ಹೊಳಲ್ಕೆರೆ ತಾಲ್ಲೂಕಿನ ಶಾಸಕರಾದ ಚಂದ್ರಪ್ಪನವರು ಮಾತನಾಡಿ ಬಸವತತ್ವ ಪರಿಪಾಲಿಸುವಲ್ಲಿ ಮಕ್ಕಳಿಗೆ ಕಲಿಸುವಲ್ಲಿ ತಾಯಂದಿಯರ ಮಾತ್ರ ಮಹತ್ವದ್ದಾಗಿದೆ ಎಂದರು. ಸಕಲೇಶಪುರದ ಶಾಸಕರಾದ ಸಿಮೆಂಟ್ ಮಂಜುನಾಥ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ್ರು, ಶನಿವಾರ ಸಂತೆಯ ಡಿ.ಎಸ್ ಪ್ರವೀಣ್ ಮತ್ತಿತರ ಗಣ್ಯಾತಿಗಣ್ಯರು ಭಾಗವಹಿಸಿದ್ದರು.