ಭರ್ಜರಿ ಸದ್ದು ಮಾಡುತ್ತಿದೆ – “ವಿಶ್ವ ಕಂಡ ಅಯೋಧ್ಯ ರಾಮ”.
ಬೆಂಗಳೂರು ಏ.01

ಅತ್ರೇಯ ಕ್ರಿಯೇಷನ್ ಲಾಂಚನದಲ್ಲಿ ಡಾ, ಸುಮಿತಾ ಪ್ರವೀಣ್ ಹಾಗೂ ಪ್ರವೀಣ್.ಸಿ ಬಾನು ನಿರ್ಮಾಣದಲ್ಲಿ ‘ಗಂಗೆಗೌರಿ’ ‘ತಾರಕೇಶ್ವರ’ ‘ಟೆಕ್ವಾಂಡೋ ಗರ್ಲ್’ ಚಿತ್ರಗಳ ಖ್ಯಾತಿಯ ಕು.ಋತುಸ್ಪರ್ಶ ಅಭಿನಯಿಸಿರುವ ‘ವಿಶ್ವ ಕಂಡ ಅಯೋಧ್ಯ ರಾಮ’ ವಿಡಿಯೋ ಆಲ್ಬಂ ಸಾಂಗ್ ಭರ್ಜರಿಯಾಗೇ ಸದ್ದು ಮಾಡುತ್ತಿದೆ. ಚಲನ ಚಿತ್ರರಂಗ ಮತ್ತು ಪತ್ರಿಕಾ ರಂಗದಲ್ಲಿ ತೊಡಗಿ ಕೊಂಡಿರುವ ಡಿ.ಸಿ ವೀರೇಂದ್ರ ಬೆಳ್ಳಿಚುಕ್ಕಿ ಪರಿಕಲ್ಪನೆ, ಸಾಹಿತ್ಯ ಮತ್ತು ನಿರ್ದೇಶನ ಮಾಡಿರುವ ವಿಡಿಯೋ ಆಲ್ಬಂ ಹಾಡನ್ನು ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಲಕ್ಷ್ಮೀನಾರಾಯಣ ಮತ್ತು ಮಾಜಿ ಶಾಸಕ ನೆ.ಲ ನರೇಂದ್ರಬಾಬು ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದರು.

ಡಿ.ಸಿ ವೀರೇಂದ್ರ ಬೆಳ್ಳಿಚುಕ್ಕಿ ಮಾತನಾಡಿ ಈ ಹಾಡನ್ನು ಜಯನಗರ ಹಾಗೂ ರಾಜಾಜಿನಗರ ರಾಮಮಂದಿರ ದೇವಸ್ಥಾನದಲ್ಲಿ ಚಿತ್ರೀಕರಣ ಮಾಡಲಾಗಿದ್ದು ಉತ್ತರ ಪ್ರದೇಶ ಸರ್ಕಾರದ ಸ್ಪರ್ಧಾತ್ಮಕ ವಿಭಾಗಕ್ಕೆ ಸಲ್ಲಿಸಲಾಗಿದೆ. ಅಲ್ಲಿ ಕುಂಭಮೇಳ ನಡೆದ ಕಾರಣ, ಸದ್ಯದಲ್ಲೆ ಫಲಿತಾಂಶ ಪ್ರಕಟಿಸುವುದಾಗಿ ಹೇಳಿದ್ದಾರೆ. ಬೇರೆ ರಾಜ್ಯದವರು ಈಗಾಗಲೇ ಹಾಡನ್ನು ನಮ್ಮ ಭಾಷೆಗೂ ತರ್ಜುಮೆ ಮಾಡಿರೆಂದು ಕೋರಿದ್ದಾರೆ. ಸದ್ಯ ಹಿಂದಿ, ಮರಾಠಿಗೆ ಧ್ವನಿ ಗೂಡಿಸುವ ಕೆಲಸ ನಡೆಯುತ್ತಿದೆ. ಹಿರಿಯ ನಟ ಎಂ.ಎಸ್ ಸತ್ಯು ಅವರ ಮಗ ಶಿವಸತ್ಯ ಸಂಗೀತ ಸಂಯೋಜಸಿದ್ದಾರೆ. ಪೇಜಾವರ ಶ್ರೀಗಳು ತಂಡವನ್ನು ಕರೆಸಿಕೊಂಡು ವಿಶೇಷವಾಗಿ ಸನ್ಮಾನಿಸಿದ್ದಾರೆ. ಬಾಲ ನಟಿ ಋತುಸ್ಪರ್ಶ ಟೆಕ್ವಾಂಡೋ ಸಮರ ಕಲೆಯಲ್ಲಿ ನಾಲ್ಕು ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಬ್ಲಾಕ್ ಬೆಲ್ಟ್ ಪಡೆದಿದ್ದು ಜೊತೆಯಲ್ಲಿ ಅಂತಾರಾಷ್ಟ್ರೀಯ ನೃತ್ಯಗಾರ್ತಿಯೂ ಆಗಿದ್ದಾಳೆ.

ಚಿತ್ರರಂಗದಲ್ಲಿ ಋತು ಸ್ಪರ್ಷಗೆ ಉಜ್ವಲ ಭವಿಷ್ಯವಿದೆ ಎಂದರು. ಇಲ್ಲಿಯವರೆಗೂ ಸಾಕಷ್ಟು ಗೀತೆಗಳಿಗೆ ಧ್ವನಿಯಾಗಿದ್ದೇನೆ. ಆದರೆ ರಾಮನ ಬಗ್ಗೆ ಹಾಡಲು ಅವಕಾಶ ಬಂದಾಗ ಇದು ನನ್ನ ಸುಕೃತ ಅಂತ ಭಾವಿಸಿ ಭಕ್ತಿ ಭಾವದಿಂದ ಹಾಡಿದ್ದೇನೆ ಎಂದರು ಗಾಯಕಿ ಮಾನಸಹೊಳ್ಳ. ಛಾಯಾಗ್ರಹಣ ಗಗನ್, ವಿಎಫ್ಎಕ್ಸ್ ಅನಿಲ್, ಪತ್ರಿಕಾ ಸಂಪರ್ಕ ಚಂದ್ರಶೇಖರ, ಡಾ, ಪ್ರಭು. ಗಂಜಿಹಾಳ, ಡಾ, ವೀರೇಶ ಹಂಡಿಗಿ ಅವರದಿದೆ. ಸಮಾರಂಭದಲ್ಲಿ ಹಿರಿಯ ನಟ, ನಿರ್ಮಾಪಕ ಗಣೇಶ್ರಾವ್ ಕೇಸರ್ಕರ್, ಚಲನ ಚಿತ್ರ ನಿರ್ದೇಶಕರಾದ ಓಂಕಾರ್ ಪುರುಷೋತ್ತಮ್, ರವೀಂದ್ರವಂಶಿ, ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್.ಕೆ ವಿಶ್ವನಾಥ್ ಚಿತ್ರರಂಗದ ಗಣ್ಯ ಮಾನ್ಯರು ಉಪಸ್ಥಿತರಿದ್ದರು.
*****
-ಡಾ.ಪ್ರಭು ಗಂಜಿಹಾಳ
ಮೊ:9448775346