ರಾಜಾರೋಷವಾಗಿ ಪಡಿತರ ಅಕ್ಕಿ ಅಕ್ರಮ ಮಾರಾಟ – ಭೀಮ್ ಆರ್ಮಿ ಬೃಹತ್ ಪ್ರತಿಭಟನಾ ಮೆರವಣಿಗೆ.
ಗದಗ ಮೇ.02

ಪಡಿತರ ಅಕ್ಕಿಯನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ ಅಕ್ರಮವಾಗಿ ಸಾಗಣೆ ಮಾಡುವ ಜಾಲ ದಿನೇ ದಿನೇ ವಿಸ್ತರಿಸುತ್ತಾ ಸಾಗಿದೆ. ಬಡವರ ಅನ್ನ ಭಾಗ್ಯವನ್ನು ಕಸಿದು ಕೊಳ್ಳುವರ ವಿರುದ್ಧ ದಿಟ್ಟ ಕ್ರಮವನ್ನು ತೆಗೆದು ಕೊಳ್ಳಲು ಪೊಲೀಸರು ಮುಂದಾಗುತ್ತಿಲ್ಲ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ರಾಜಾರೋಷವಾಗಿ ಆಹಾರ ಸಾಗಣೆಯ ಮಾಫಿಯಾ ಸದ್ದು ಜೋರಾಗಿ ಕೇಳಿ ಬರುತ್ತಲಿದೆ ಎಂದು ಭೀಮ ಆರ್ಮಿ ಜಿಲ್ಲಾಧ್ಯಕ್ಷ ಗೋಪಾಲ ಕೋಣೆಮನಿ ನೇತೃತ್ವದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.ಗದಗ ನಗರದ ಎಸ್.ಎಂ ಕೃಷ್ಣ ನಗರ, ಶಹಪುರ ಪೇಟೆ, ವಕ್ಕಲಗೇರಿ, ಗಂಗಿಮಡಿ, ಅಂಬೇಡ್ಕರ್ ನಗರ, ಜವಳಗಲ್ಲಿ, ಮಕಾನಗಲ್ಲಿ, ಗಂಗಾಪುರ ಪೇಟೆ ಹಾಗೂ ರಾಜೀವ್ ಗಾಂಧಿ ನಗರಗಳಲ್ಲಿ ಕೆಲ ಅಮಾಯಕ ಬಡ ದಲಿತ ಜನರನ್ನು ಬಳಸಿ ಕೊಂಡು ಬಿಡಿಗಾಸು ನೀಡಿ ಸರ್ಕಾರದ ಪಡೀತರ ಲೂಟಿಗೆ ಇಳಿದಿದ್ದಾರೆ. ಎಂದು ಹೋರಾಟಗಾರರು ಖೇದ ವ್ಯಕ್ತಪಡಿಸಿ, ಅಕ್ರಮ ತಡೆಗಟ್ಟಲು ಒತ್ತಾಯಿಸಿ ನಗರದ ಕಿತ್ತೂರಾಣಿ ವೃತ್ತದಿಂದ ಜಿಲ್ಲಾಡಾಳಿತದ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಸರ್ಕಾರ ಬಡವರಿಗೆ ಉಚಿತವಾಗಿ ನೀಡುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಖರೀದಿಸುತ್ತಿರುವುದು ಕೇಳಿ ಬರುತ್ತಿದೆ. ಸರ್ಕಾರ ಬಡವರಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡುತ್ತಿದ್ದರೆ. ಆ ಅಕ್ಕಿಯನ್ನು ಹೆಚ್ಚಿನ ಬೆಲೆಯ ಆಸೆ ತೋರಿಸಿ ಖರೀದಿಸುತ್ತಿರುವುದು ಅಲ್ಲಲ್ಲಿ ಕಂಡು ಬಂದಿದೆ. ವಿಶೇಷವಾಗಿ ಹಳ್ಳಿಗಳಲ್ಲಿ ಸುತ್ತಾಡುವ ಕೆಲ ಜನರ ಗುಂಪು, ಪ್ರತಿ ಕೆಜಿಗೆ 10 ರೂ. ರಿಂದ 15 ರೂ.ವರೆಗೆ ಹಣ ನೀಡಿ ಖರೀದಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರ ಮನೆಗೆ ತೆರಳುವ ಈ ಗುಂಪು, ರೇಷನ್ ಅಕ್ಕಿ ಖರೀದಿಸಲಾಗುವುದು ಎಂದು ಹೇಳುತ್ತಾರೆ. ಮನೆ ಬಾಗಿಲಿನಲ್ಲಿಯೇ ಅಕ್ಕಿಯ ತೂಕ ನೋಡಿ, ಹಣ ನೀಡಿ ವಾಹನದಲ್ಲಿ ಹಾಕಿಕೊಂಡು ಸಾಗುತ್ತಾರೆ. ಹೀಗೆ ಸಂಗ್ರಹಿಸಿದ ಅಪಾರ ಪ್ರಮಾಣದ ಅಕ್ಕಿಯನ್ನು ಕೆಲ ದಲ್ಲಾಳಿಗಳಿಗೆ ಮರು ಮಾರಾಟ ಮಾಡುತ್ತಾರೆ. ಅವರು ಅದನ್ನು ಡೀಲರ್ಸ್ ಮುಖಾಂತರ ಲಾರಿಗಳಲ್ಲಿ ಬೇರೆ ಕಡೆಗೆ ಸಾಗಿಸುತ್ತಾರೆ ಎಂದು ದೂರಿದರು.ಈ ಅಕ್ರಮ ಪಡಿತರ ಅಕ್ಕಿ ಸಾಗಾಟ ಗದಗ ಜಿಲ್ಲೆ ಸೇರಿದಂತೆ ಗದಗ ಜಿಲ್ಲೆಯ ರೋಣ ಗಜೇಂದ್ರಗಡ ನರಗುಂದ ಶಿರಹಟ್ಟಿ ಮುಂಡರಗಿ ಲಕ್ಷ್ಮೇಶ್ವರ ಸೇರಿದಂತೆ ಇನ್ನೂ ಅನೇಕ ಬಾಗಗಳಲ್ಲಿ ರಾಜಾರೋಷವಾಗಿ ಅಕ್ಕಿ ಸಾಗಾಟ ನಡೆಯುತ್ತಿದೆ ಎಂದು ಕೇಳಿ ಬರುತ್ತಿದೆ ಸಂಬಂದಿಸಿದ ಇಲಾಖೆಯವರು ಅಕ್ರಮ ಚಟುವಟಿಗೆ ತಡೆಯುವವರೋ ಇಲ್ಲವೋ ಎಂದು ಕಾಯ್ದು ನೋಡ ಬೇಕಿದೆ.ಇದೆ ಸಂಧರ್ಭದಲ್ಲಿ ಭೀಮ್ ಆರ್ಮಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ಗೆಜ್ಜಳ್ಳಿ ಯುವರಾಜ ಕೊರವರ ವಿನಾಯಕ ಹೊಸಳ್ಳಿ ರೋಹಿತ್ ಪೂಜಾರ ಮಾಂತೇಶ ಮಾದರ ನಾಗರಾಜ್ ವಡ್ಡರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ