ಮಹಾನ್ ಮಾನವತಾವಾದಿ ಜಗಜ್ಯೋತಿ ಬಸವೇಶ್ವರರು – ಶ್ರೀಮತಿ ಹೆಚ್.ಲಕ್ಷ್ಮೀದೇವಮ್ಮ ಅಭಿಪ್ರಾಯ.
ಚಳ್ಳಕೆರೆ ಮೇ.02

ಜಗಜ್ಯೋತಿ ಬಸವೇಶ್ವರರು ಮಹಾನ್ ಮಾನವತಾವಾದಿ ಆಗಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರು ಮತ್ತು ನಿವೃತ್ತ ಶಿಕ್ಷಕಿ ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ ಅಭಿಪ್ರಾಯ ಪಟ್ಟರು. ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಯಮ್ಮ ನರಸಿಂಹಮೂರ್ತಿ ಅವರ ವಾಲ್ಮೀಕಿ ನಗರದ ಮೇಘಶ್ರೀ ನಿವಾಸದಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸಹಯೋಗದಲ್ಲಿ ಜಗಜ್ಯೋತಿ ಬಸವೇಶ್ವರರ 892 ನೇ. ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಬಸವಣ್ಣನವರ ಜೀವನ ಮತ್ತು ಸಂದೇಶಗಳ ಬಗ್ಗೆ ಉಪನ್ಯಾಸ ನೀಡಿದರು.
ಬಸವಣ್ಣ ನವರ ವಚನಗಳು ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ವಚನಗಳ ಪಾರಾಯಣ ಮತ್ತು ಅನುಸಂಧಾನ ದಿಂದ ಉತ್ತಮ ಬದುಕು ಸಾಧ್ಯವಾಗುತ್ತದೆ. ಬಸವಾದಿ ಶಿವಶರಣರ ವಚನಗಳು ನಮ್ಮ ನಿತ್ಯ ಬದುಕಿಗೆ ದಾರಿ ದೀಪವಾಗಿವೆ. ಆದ್ದರಿಂದ ವಚನಗಳ ಸಂದೇಶಗಳ ನೆಲೆಗಟ್ಟಿನಲ್ಲಿ ಮಾದರಿ ಸಮಾಜವನ್ನು ನಿರ್ಮಿಸಬಹುದು ಎಂದು ತಿಳಿಸಿದರು.
ಸದ್ಭಕ್ತೆ ಶ್ರೀಮತಿ ಜಯಮ್ಮ ನರಸಿಂಹಮೂರ್ತಿ ಅವರು ಅಕ್ಷಯ ತೃತೀಯದ ವಿಶೇಷತೆಯ ಬಗ್ಗೆ ಮಾತನಾಡಿ-ತ್ರೇತಾಯುಗ ಆರಂಭವಾಗಿದ್ದು, ಭಗೀರಥ ಗಂಗೆಯನ್ನು ಭೂಲೋಕಕ್ಕೆ ತಂದಿದ್ದು, ಗಣೇಶನಿಂದ ವೇದವ್ಯಾಸರು ಮಹಾ ಭಾರತವನ್ನು ಬರೆಸಿದ್ದು, ಕೃಷ್ಣಾ-ಸುಧಾಮರು ಭೇಟಿಯಾಗಿದ್ದು, ಮಹಾವಿಷ್ಣು ಪರಶುರಾಮರ ಅವತಾರ ಎತ್ತಿದ್ದು, ಆದಿಶಂಕರರು “ಕನಕದಾರ ಸ್ತೋತ್ರ” ವನ್ನು ರಚನೆ ಮಾಡಿದ್ದು,ದ್ರೌಪದಿಗೆ ಶ್ರೀಕೃಷ್ಣನು ಅಕ್ಷಯ ಪಾತ್ರೆಯನ್ನು ನೀಡಿದ್ದು, ಜಗಜ್ಯೋತಿ ಬಸವೇಶ್ವರರು ಭುವಿಗೆ ಅವತಾರಿಸಿದ್ದು ಅಕ್ಷಯ ತೃತೀಯ ದಿನವಾಗಿದೆ ಎಂದು ತಿಳಿಸಿದರು. ಇಂತಹ ಶುಭದಿನದಂದು ಜನರು ಚಿನ್ನ-ಬೆಳ್ಳಿ-ಹೊಸ ವಸ್ತುಗಳನ್ನು ಸಂಭ್ರಮದಿಂದ ಖರೀದಿಸುತ್ತಾರೆ. ಈ ವಿಶೇಷ ದಿನದಂದು ಮಾಡಲಾಗುವ ಜಪ-ಧ್ಯಾನಾದಿ ಸಾಧನೆಗಳಿಗೆ ಅಧಿಕ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಶ್ರೀರಾಮರಕ್ಷಾ ಸ್ತೋತ್ರ ಪಠಣ,ವಚನ ಗಾಯನ ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮವನ್ನು ಯತೀಶ್ ಎಂ ಸಿದ್ದಾಪುರ ನಡೆಸಿ ಕೊಟ್ಟರು. ಈ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಗೀತಾ ಸುಂದರೇಶ್, ಎಂ.ಗೀತಾ ನಾಗರಾಜ್,ವಿಜಯ ಚೆನ್ನಬಸವರೆಡ್ಡಿ, ಮೋಹಿನಿ ಸತ್ಯನಾರಾಯಣ, ಅನಿತಾ ಜಗದೀಶ್ ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.