📍 ತ್ರಾಸಿ ರಾಜು ದೇವಾಡಿಗ ಅಗಲಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ – ತುಂಬಲಾರದ ನಷ್ಟ ಮಂಜುನಾಥ ಭಂಡಾರಿ.
ಕುಂದಾಪುರ ಉಡುಪಿ ಫೆ.04

ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ತ್ರಾಸಿ ರಾಜು ದೇವಾಡಿಗ ಅವರು ನಿಧನರಾಗಿದ್ದು, ಇದರಿಂದ ಪಕ್ಷ ಮತ್ತು ಇಡೀ ಸಮಾಜಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ವಿಧಾನ ಪರಿಷತ್ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರು ಆಗಿರುವ ಮಂಜುನಾಥ ಭಂಡಾರಿ ಅವರು ಕಂಬನಿ ಮಿಡಿದಿದ್ದಾರೆ.
🔹 ಅಪ್ರತಿಮ ಜನಸೇವೆ:-
ತ್ರಾಸಿ ರಾಜು ದೇವಾಡಿಗ ಅವರ ಜನಸೇವೆ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅವರ ಅಗ್ರಗಣ್ಯ ಸಾಧನೆ ಗಮನಾರ್ಹವಾಗಿದೆ. ಆಸ್ಕರ್ ಫೆರ್ನಾಂಡಿಸ್ ಅವರು ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ಅವರೊಂದಿಗೆ ಪಕ್ಷದ ಕೆಲಸ ಮಾಡಿದ ನೆನಪು ಇನ್ನೂ ಹಚ್ಚಹಸಿರಾಗಿದೆ ಎಂದು ಭಂಡಾರಿಯವರು ಸ್ಮರಿಸಿದ್ದಾರೆ.
🔹 ರಾಜಕೀಯ ಏಳಿಗೆಯ ಬೆನ್ನೆಲುಬು:-
“ನಂತರದ ದಿನಗಳಲ್ಲಿ ನನ್ನ ಅತ್ಯಂತ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡಿದ್ದ ಅವರು, ನಾನು ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ್ದಾಗ ಬೈಂದೂರು ಕ್ಷೇತ್ರದಲ್ಲಿ ಬೆನ್ನೆಲುಬಾಗಿ ನಿಂತು ನನ್ನ ಮತ್ತು ಪಕ್ಷದ ಪರವಾಗಿ ದುಡಿದಿದ್ದರು. ರಾಜು ದೇವಾಡಿಗ ಅವರು ನನ್ನ ಪ್ರತಿಯೊಂದು ರಾಜಕೀಯ ಏಳಿಗೆಯಲ್ಲೂ ಯಾರಿಗೂ ಕಾಣದ ರೀತಿಯಲ್ಲಿ ಸಂಪೂರ್ಣ ಸಹಕಾರ ನೀಡಿದ್ದರು,” ಎಂದು ಮಂಜುನಾಥ ಭಂಡಾರಿ ತಿಳಿಸಿದ್ದಾರೆ.
🔹 ಬಡವರ ಪಾಲಿನ ಅಂತ:ಕರಣದ ನೋವು:-
ಅವರ ಅಗಲಿಕೆಯು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲದೆ, ಬೈಂದೂರು ಸುತ್ತ ಮುತ್ತಲಿನ ಬಡಜನರ ಪಾಲಿಗೆ ಭರಿಸಲಾರದ ನೋವನ್ನುಂಟು ಮಾಡಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಅತ್ಯಂತ ಬೇಸರದಿಂದ ವ್ಯಕ್ತಪಡಿಸಿದ್ದಾರೆ.
🙏 ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಬಯಸುತ್ತದೆ.
ವರದಿ:ಆರತಿ.ಗಿಳಿಯಾರ.ಉಡುಪಿ

