ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ ಕೂಲಿಕಾರರಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಿ.ಪರಮೇಶ್ವರಪ್ಪ ಸಲಹೆ
ಕೊಟ್ಟೂರು ಏ.24
ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಉದಾಸೀನ ತೋರದೆ ಹೆಚ್ಚಿನ ಗಮನ ಹರಿಸಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಿ.ಪರಮೇಶ್ವರಪ್ಪ ಹೇಳಿದರು.
ಕೊಟ್ಟೂರು ತಾಲೂಕಿನ ಕಂದಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ನರೇಗಾ ಯೋಜನೆದಡಿ ಕೈಗೊಂಡ ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿ ಸ್ಥಳದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಆರೋಗ್ಯ ತಪಾಣಾ ಶಿಬಿರ’ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಕೂಲಿಕಾರರ ಅನುಕೂಲಕ್ಕಾಗಿ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಹೇಳಿದರು.

ಆರೋಗ್ಯದಲ್ಲಿ ಕೊಂಚ ಏರುಪೇರಾದ ತಕ್ಷಣ ಹತ್ತಿರದ ವೈದ್ಯರ ಬಳಿ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಏನು ಆಗಲ್ಲವೆಂದು ಉದಾಸೀನ ತೋರಿದರೆ ಹೆಚ್ಚಿನ ಸಮಸ್ಯೆಗೆ ಸಿಲುಕಿಕೊಳ್ಳುವ ಸಂಭವ ಇರುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ನಾಳೆ ಆಸ್ಪತ್ರೆಗೆ ಹೋದರೆ ಆಯಿತು, ನಾಡಿದ್ದು ಹೋದರೆ ಆಯಿತು ಎಂದು ಮುಂದೂಡುವುದು ಸರಿಯಲ್ಲ ಎಂದು ಹೇಳಿದರು.
ತಾಲೂಕು ಐ.ಇ.ಸಿ ಸಂಯೋಜಕ ಪ್ರಭುಕುಮಾರ್ ಉಪ್ಪಾರ್, ಆರೋಗ್ಯ ಅಮೃತ ಅಭಿಯಾನದ ತಾಲೂಕು ಸಂಯೋಜಕಿ ನಾಗವೇಣಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾರುತೇಶ್,ತಾಂತ್ರಿಕ ಸಹಾಯಕ ಚಂದ್ರಶೇಖರ್, ಕಾರ್ಯದರ್ಶಿ ಕೊಟ್ರಗೌಡ್ರ, ಜಿಕೆಎಂ ಸವಿತಾ, ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಮೇಟಿಗಳು ಮತ್ತು ಕೂಲಿಕಾರ್ಮಿಕರು ಇದ್ದರು. ಇದೇ ವೇಳೆ ೧೫೧ ಜನ ಕೂಲಿಕಾರ್ಮಿಕರ ರಕ್ತದ ಒತ್ತಡ, ಸಕ್ಕರೆ ಖಾಯಿಲೆ ಸೇರಿ ವಿವಿಧ ಪರೀಕ್ಷೆಗಳನ್ನು ನಡೆಸಲಾಯಿತು.
ತಾಲೂಕ ವರದಿಗಾರರು:ಪ್ರಾಧಿಪ್.ಕುಮಾರ್.ಕೊಟ್ಟೂರು