ವಿಶ್ವ ಪುಸ್ತಕ ದಿನ ಆಚರಣೆ ಪುಸ್ತಕಗಳು ಜೀವನಕ್ಕೆ ಬೆಳಕು ನೀಡಬಲ್ಲವು-ಸಂತೋಷ ಬಂಡೆ
ನಾಗಠಾಣ ಏ.24
ಪುಸ್ತಕ ನಮ್ಮ ಜೀವನಕ್ಕೆ ಬೆಳಕು ಕೊಡುವಂತಹದು.ಪುಸ್ತಕಗಳು ಮಾನವನ ನೈತಿಕ ಮೌಲ್ಯಗಳನ್ನು ಪೋಷಿಸುವಲ್ಲಿ ಮುಖ್ಯವಾಗಿದ್ದು,ನಮ್ಮ ಮನಸ್ಸನ್ನು ಚುರುಕುಗೊಳಿಸಿ,ಉತ್ತಮ ಕೌಶಲ್ಯಗಳನ್ನು ಹುಟ್ಟುಹಾಕುವುದರ ಜೊತೆಗೆ ಕಲ್ಪನಾ ಶಕ್ತಿಯನ್ನು ಸುಧಾರಿಸುತ್ತವೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.

ಅವರು ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಿಶ್ವ ಪುಸ್ತಕ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.
ಪುಸ್ತಕಗಳು ಇತಿಹಾಸ ಮತ್ತು ಭವಿಷ್ಯದ ನಡುವಿನ ಕೊಂಡಿಯಾಗಿ, ಸಂಸ್ಕೃತಿಗಳು ಹಾಗೂ ಪೀಳಿಗೆಗಳ ನಡುವಿನ ಸೇತುವೆಯಾಗಿವೆ. ಪುಸ್ತಕ ಓದುವದರಿಂದ 68℅ ಒತ್ತಡವನ್ನು ಕಡಿಮೆ ಮಾಡಬಹುದು.ಸ್ನೇಹಿತನಾಗಿ, ಜ್ಞಾನ ಭಂಡಾರವಾಗಿ, ಕಲ್ಪನೆಗಳಿಗೆ ರೆಕ್ಕೆಗಳನ್ನು ಮೂಡಿಸುವ ಮಾರ್ಗವಾಗಿ ಪುಸ್ತಕಗಳು ನಮ್ಮ ನಿತ್ಯ ಬದುಕಿನೊಂದಿಗೆ ಬೆರೆತು ಹೋಗಿವೆ ಎಂದು ಹೇಳಿದರು.
ಚಿಕ್ಕ ವಯಸ್ಸಿನಿಂದಲೇ ಪುಸ್ತಕಗಳನ್ನು ಓದುವುದು ಮಹತ್ವದ್ದಾಗಿದೆ.ಅದು ಶಬ್ದಕೋಶ ಮತ್ತು ಭಾಷಾ ಕೌಶಲ್ಯಗಳನ್ನು ನಿರ್ಮಿಸುತ್ತದೆ. ಉತ್ತಮ ಬರವಣಿಗೆಯು ಶೈಕ್ಷಣಿಕ ಯಶಸ್ಸಿಗೆ ಪ್ರಮುಖ ಕೌಶಲ್ಯವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳಮಾತನಾಡಿ,ಪುಸ್ತಕಗಳನ್ನು ಓದುವ ಮೂಲಕ, ಒಬ್ಬ ವ್ಯಕ್ತಿಯು ಜೀವನದ ಪ್ರತಿಯೊಂದು ಕಷ್ಟದ ಸಂದರ್ಭಗಳಲ್ಲಿಯೂ ಸಹ ಧನಾತ್ಮಕತೆಯ ಕಡೆಗೆ ತನ್ನನ್ನು ತಾನು ಮುನ್ನಡೆಸಿಕೊಳ್ಳುವ ಮೂಲಕ ಜೀವನಕ್ಕೆ ಹೊಸ ಸ್ಥಿತಿ ಮತ್ತು ನಿರ್ದೇಶನವನ್ನು ನೀಡಬಹುದು. ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಪ್ರಭಾಕರ ಎಸ್ ಅರಕೇರಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ,ಶಿಕ್ಷಕರಾದ ಜಯಶ್ರೀ ಬಂಗಾರಿ,ಬಸಮ್ಮ ವಡಗೇರಿ,ರೇಣುಕಾ ಭಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಬೀ.ಎಸ್.ಹೊಸೂರ್.ವಿಜಯಪುರ