ಮೈಸೂರು ದಸರಾ: ವಾರ್ತಾ ಇಲಾಖೆಯ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ.

ಬಳ್ಳಾರಿ ಅ.16

ಜಗತ್ಪ್ರಸಿದ್ಧ ಮೈಸೂರು ದಸರಾದ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಈ ಬಾರಿ ಪ್ರದರ್ಶನ ಗೊಂಡ ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳಲ್ಲಿ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿದ ಸ್ತಬ್ಧ ಚಿತ್ರವು ಪ್ರಥಮ ಬಹುಮಾನ ಗಳಿಸಿದೆ ಎಂದು ದಸರಾ ಸ್ತಬ್ಧ ಚಿತ್ರ ಉಪ ಸಮಿತಿಯ ವಿಶೇಷಾಧಿಕಾರಿಗಳು ಪ್ರಕಟಿಸಿದ್ದಾರೆ. ಸ್ತಬ್ಧ ಚಿತ್ರ ವಿಶೇಷತೆ:1924 ರ ಡಿಸೆಂಬರ್ 26 ಮತ್ತು 27 ರಂದು ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಐತಿಹಾಸಿಕ 39 ನೇ ಅಧಿವೇಶನ ನಡೆದಿತ್ತು. ಈ ವರ್ಷ ಅಧಿವೇಶನಕ್ಕೆ 100 ವರ್ಷಗಳು ತುಂಬುತ್ತಿದೆ. ವಿಶ್ವ ಗುರು ಶ್ರೀ ಜಗಜ್ಯೋತಿ ಬಸವಣ್ಣ ಅವರನ್ನು “ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ” ಎಂದು ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಮೈಸೂರು ದಸರಾ ಜಂಬೂ ಸವಾರಿಯ ಸ್ತಬ್ದ ಚಿತ್ರ ಮೆರವಣಿಗೆಯಲ್ಲಿ ಈ ಎರಡು ಮಹತ್ವದ ಘಟನೆಗಳನ್ನು ಆಕರ್ಷಕವಾಗಿ ಬಿಂಬಿಸುವ ಸ್ತಬ್ದ ಚಿತ್ರವನ್ನು ವಿನ್ಯಾಸ ಗೊಳಿಸಲಾಗಿತ್ತು. ವಿಶ್ವ ಗುರು ಶ್ರೀ ಜಗಜ್ಯೋತಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಭಾರತ ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಿದರು. ಅಸ್ಪೃಶ್ಯತೆ ವಿರುದ್ಧ ಚಳುವಳಿ ರೂಪಿಸಿ ದೀನ, ದಲಿತ, ಶೋಷಿತ ಸಮಾಜದ ಸಮಾನತೆಗೆ ಧ್ವನಿ ಎತ್ತಿದ ಇತಿಹಾಸದ ಮೊದಲ ನಾಯಕರೆನಿಸಿ ಕೊಂಡರು. ಬಸವಣ್ಣನವರ ತತ್ವಗಳಲ್ಲಿ ನಂಬಿಕೆ ಇಟ್ಟು ಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಶ್ವ ಗುರು ಶ್ರೀ ಜಗಜ್ಯೋತಿ ಬಸವಣ್ಣ ಅವರನ್ನು “ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ”ಎಂದು ಘೋಷಿಸಿ ಮಹತ್ವದ ಹೆಜ್ಜೆಯನ್ನಿಟ್ಟರು. ಎಲ್ಲಾ ಸರ್ಕಾರಿ ಇಲಾಖೆ, ನಿಗಮ, ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಲು ಆದೇಶಿಸಿದರು. ಈ ಮಹತ್ವದ ಘಟನೆಗೆ ಸಾಕ್ಷಿಯೆಂಬಂತೆ ಸ್ತಬ್ದ ಚಿತ್ರದ ಮುಂಭಾಗದಲ್ಲಿ ವಿಶ್ವ ಗುರು ಶ್ರೀ ಜಗಜ್ಯೋತಿ ಬಸವಣ್ಣ ಅವರ ಮಾದರಿ ಪ್ರತಿಕೃತಿಯನ್ನು ಚಿತ್ರಿಸಲಾಗಿತ್ತು. ಬಸವಣ್ಣನವರು ಕುಳಿತ ಪೀಠದ ಕೆಳ ಭಾಗದಲ್ಲಿ ಕೂಡಲ ಸಂಗಮದ ಮುಖ್ಯದ್ವಾರದ ಮಾದರಿಯನ್ನು ಚಿತ್ರಿಸಲಾಗಿತ್ತು. ರಾಷ್ಟ್ರೀಯ ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನವು ಒಂದು ಮಹತ್ವದ ಘಟನೆಯಾಗಿದೆ. ಇದು ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್ ಅಧಿವೇಶನವಾಗಿತ್ತು. ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಏಕತೆಯನ್ನು ಪುನಃ ಸ್ಥಾಪಿಸುವುದು. ಅಸ್ಪೃಶ್ಯತೆ ಮತ್ತು ಇತರ ವಿಷಯಗಳ ಜೊತೆಗೆ ಚರಕ ಮತ್ತು ಖಾದಿಯ ಪ್ರಾಮುಖ್ಯತೆಯನ್ನು ಒತ್ತಿ ಹೇಳುವುದು ಅವರ ಪ್ರಾಥಮಿಕ ಉದ್ದೇಶವಾಗಿತ್ತು. ರಾಷ್ಟ್ರೀಯ ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನದ ಸಂಪೂರ್ಣ ಆವರಣವನ್ನು ವಿಜಯನಗರ ಎಂದು ಹೆಸರಿಸಲಾಗಿತ್ತು. ಬಿಳಿ, ಹಸಿರು, ಕೇಸರಿ ಮತ್ತು ಧ್ವಜದ ಮಧ್ಯ ಭಾಗದಲ್ಲಿ ಚರಕ ಇರುವ ತ್ರಿವರ್ಣ ಧ್ವಜವನ್ನು ಇಲ್ಲಿ ಮೊದಲ ಬಾರಿಗೆ ಹಾರಿಸಿದರು. ಇದರ ಮಾದರಿ ಪ್ರತಿಕೃತಿಯನ್ನು ಮಧ್ಯ ಭಾಗದಲ್ಲಿ ತೋರಿಸಲಾಗಿದೆ. ಅಧಿವೇಶನವು ಮರದ ಚೌಕಟ್ಟುಗಳಿಂದ ಸುತ್ತುವರಿದ ಎತ್ತರದ ವೇದಿಕೆಯಲ್ಲಿ ಮಹಾತ್ಮ ಗಾಂಧಿಯವರು ತಮ್ಮ ಅಧ್ಯಕ್ಷೀಯ ಭಾಷಣವನ್ನು ಮಾಡಿದ್ದರು. ಹಾಗೂ ಸಾರ್ವಜನಿಕರು ಈ ಭಾಷಣವನ್ನು ವೀಕ್ಷಿಸುತ್ತಿರುವ ಮಾದರಿ ಪ್ರತಿಕೃತಿಯನ್ನು ಮಧ್ಯ ಹಾಗೂ ಹಿಂಭಾಗದಲ್ಲಿ ವಿನ್ಯಾಸ ಗೊಳಿಸಲಾಗಿತ್ತು. ಸ್ತಬ್ಧ ಚಿತ್ರದ ಕೆಳ ಭಾಗದ ಎರಡು ಕಡೆಗಳಲ್ಲಿ ಅಹಿಂಸೆ, ಸತ್ಯಾಗ್ರಹ, ಸ್ವರಾಜ್ಯ ಬಿಂಬಿಸುವ ಧ್ವಜವನ್ನು ಕೈಯಲ್ಲಿ ಹಿಡಿದಿರುವ ಮಾದರಿಯನ್ನು ಚಿತ್ರಿಸಲಾಗಿತ್ತು. ಗಾಂಧೀಜಿ ಕನಸು ಕರ್ನಾಟಕದಲ್ಲಿ ನನಸು ಧ್ಯೇಯ ವಾಕ್ಯದೊಂದಿಗೆ ಮಾಹಿತಿ ಆರಂಭಗೊಂಡ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿಯ ಬಗ್ಗೆ ಮಾಹಿತಿ ಫಲಕ ಅಳವಡಿಸಲಾಗಿತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಅವರ ಪರಿಕಲ್ಪನೆಯಂತೆ, ಕ್ಷೇತ್ರ ಪ್ರಚಾರ ಶಾಖೆ ಜಂಟಿ ನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ ಅವರು ಸ್ತಬ್ಧ ಚಿತ್ರ ನಿರ್ಮಾಣಕ್ಕೆ ಶ್ರಮಿಸಿದ್ದರು, ಪ್ರತಿರೂಪಿ ಕಲಾ ತಂಡದ ಶಶಿಧರ ಅಡಪ ಮತ್ತು ತಂಡದ ಕಲಾವಿದರು ಸ್ತಬ್ಧ ಚಿತ್ರ ತಯಾರಿಸಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ ಶರ್ಮಾ ಬೆಳಗಾವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button