ರೈತರ ಜೋಳ ಖರೀದಿ ಮಿತಿಯನ್ನ 20 ಕ್ವಿಂಟಾಲ್ ಗೆ ಹೆಚ್ಚಿಸಿ. ರೈತರಿಗಾಗುವ ಮೋಸ, ಅನ್ಯಾಯವನ್ನು ನಿಲ್ಲಿಸಿ. ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ – ಕೆ.ಆರ್.ಎಸ್ ಪಕ್ಷ.
ಸಿಂಧನೂರು ಡಿ.31

ಸಿಂಧನೂರು ತಾಲೂಕಿನಲ್ಲಿ ಕೆಆರ್ಎಸ್ ಪಕ್ಷದ ವತಿಯಿಂದ ತಹಶೀಲ್ದಾರರು ಸಿಂಧನೂರು ಇವರ ಮುಖಾಂತರ ಬೆಂಬಲ ಬೆಲೆ ಅಡಿಯಲ್ಲಿ ಪ್ರತಿ ಎಕರೆಗೆ 20 ಕ್ವಿಂಟಲ್ ರಂತೆ ಜೋಳವನ್ನು ಖರೀದಿಸುವಂತೆ ಹಾಗೂ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸುದ್ದಿ ಗೋಷ್ಠಿ ಮತ್ತು ಮನವಿಯನ್ನ ಮುಖ್ಯಮಂತ್ರಿಗಳು ಸಿದ್ದರಾಮಯ್ಯರವರಿಗೆ ಮಾಡಲಾಯಿತು. ಸುದ್ದಿ ಗೋಷ್ಠಿ ಮತ್ತು ಮನವಿಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಯುವ ಮುಖಂಡ ನಿರುಪಾದಿ.ಕೆ ಗೋಮರ್ಸಿ ಪ್ರಸ್ತುತವಾಗಿ ರಾಜ್ಯ ಸರ್ಕಾರವು ಬೆಂಬಲ ಬೆಲೆ ಅಡಿಯಲ್ಲಿ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಪ್ರತಿ ರೈತರ ಜೋಳವನ್ನು ಎಕರೆಗೆ 10 ಕ್ವಿಂಟಲ್ ರಂತೆ ಖರೀದಿಸುವ ಮಿತಿಯನ್ನು ನಿಗದಿ ಪಡಿಸಿರುತ್ತದೆ. ಕಲ್ಯಾಣ ಕರ್ನಾಟಕ ಸೇರಿದಂತೆ ವಿಶೇಷವಾಗಿ ಸಿಂಧನೂರು ತಾಲೂಕಿನ ರೈತರು ಈ ಬಾರಿ ಹೆಚ್ಚಿನ ಜೋಳವನ್ನು ಬೆಳೆದಿದ್ದು ಎಕರೆಗೆ 35 ರಿಂದ 40 ಕ್ವಿಂಟಲ್ ಹೆಚ್ಚಿನ ಇಳುವರಿ ಕೂಡ ಬಂದಿರುತ್ತದೆ. ರೈತರು ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಜೋಳವನ್ನು ಮಾರಾಟ ಮಾಡಲು ಪ್ರಸ್ತುತವಾಗಿ ರಾಜ್ಯ ಸರ್ಕಾರವು ನಿಗದಿ ಪಡಿಸಿದ ಕಡಿಮೆ ಮಿತಿಯಿಂದಾಗಿ ಕಂಗಾಲಾಗಿದ್ದಾರೆ. ಈ ಯೋಜನೆ ರೈತರಲ್ಲಿ ನಿರಾಶಕ್ತಿ ಮೂಡಿಸಿದೆ.

ಈಗಾಗಲೇ ಜೋಳದ ಕಟಾವು ಪ್ರಕ್ರಿಯೆ ಮುಗಿಯುವ ಹಂತದಲ್ಲಿ ಇದ್ದು, ಬೆಂಬಲ ಬೆಲೆ ಅಡಿಯಲ್ಲಿ ಪ್ರತಿ ರೈತನಿಂದ ಪ್ರತಿ ಎಕರೆಗೆ ಕಳೆದ ವರ್ಷದ ಮಾದರಿಯಂತೆ 20 ಕ್ವಿಂಟಲ್ ಮಾರಾಟ ಮಾಡಲು ನೂತನ ಆದೇಶವನ್ನು ಮುಖ್ಯಮಂತ್ರಿಗಳ ಕಾರ್ಯಾಲಯ ದಿಂದ ಹೊರಡಿಸ ಬೇಕೆಂದು ಒತ್ತಾಯಿಸಿದರು. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದ್ದು ಖಾಸಗಿ ದಲ್ಲಾಳಿಗಳಿಗೆ, ಮಧ್ಯವರ್ತಿಗಳಿಗೆ ಕಡಿಮೆ ದರಕ್ಕೆ ಜೋಳ ಮಾರಾಟ ಮಾಡುವ ವ್ಯವಸ್ಥೆ ನಿಲ್ಲಿಸಬಹುದು ಎಂದು ತಿಳಿಸಿದರು. ಸರ್ಕಾರದ ಜೋಳ ಖರೀದಿ ಕೇಂದ್ರದ ನೀತಿ-ನಿಯಮಗಳು, ಉದ್ದೇಶಗಳು ಉಲ್ಲಂಘನೆ ಆಗದಂತೆ ಕಟ್ಟು ನಿಟ್ಟಿನ ಕ್ರಮ ವಹಿಸಬೇಕು ಹಾಗೂ ತೂಕದಲ್ಲಿ ಮೋಸ,ಅನ್ಯಾಯ, ತಾರತಮ್ಯ ನೀತಿ ಮತ್ತು ಮಧ್ಯ ವರ್ತಿಗಳ ಹಾವಳಿ ತಡೆಯಲು ಜೋಳ ಖರೀದಿ ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ ಅಳವಡಿಸ ಬೇಕು ಎಂದು ಒತ್ತಾಯಿಸಿದರು. ಸಾಲ ಸುಲ ಮಾಡಿ ಹಗಲಿರುಳು ಎನ್ನದೆ ಜೋಳ ಬೆಳೆದ ರೈತನಿಗೆ ಅನ್ಯಾಯವಾಗದಂತೆ 2024-25 ನೇ. ಸಾಲಿನಲ್ಲಿ ರೈತರಿಂದ ಖರೀದಿ ಮಾಡಿದ ಜೋಳ ಮತ್ತು ತೊಗರಿ ಹಣವನ್ನು ಆದಷ್ಟು ಶೀಘ್ರ ಗತಿಯಲ್ಲಿ ಬಿಡುಗಡೆ ಮಾಡಿ ರೈತರಿಗೆ ಆಗುವಂತ ನಷ್ಟ ಕಷ್ಟಗಳನ್ನ ತಪ್ಪಿಸ ಬೇಕೆಂದು ತಿಳಿಸಿದರು. ಕೆ.ಆರ್.ಎಸ್ ಪಕ್ಷದ ರೈತರ ಪರವಾದ ಮನವಿ ಉಲ್ಲಂಘನೆ ಆದಲ್ಲಿ ಮುಂದಿನ ದಿನಗಳಲ್ಲಿ ಸಾವಿರಾರು ರೈತರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ, ಜಿಲ್ಲಾಡಳಿತದ ವಿರುದ್ಧ, ತಾಲೂಕ ಆಡಳಿತದ ವಿರುದ್ಧ ಉಗ್ರವಾದ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ನಿರುಪಾದಿ.ಕೆ ಗೋಮರ್ಸಿ ಎಚ್ಚರಿಸಿದರು.ಇದೇ ಸಂದರ್ಭದಲ್ಲಿ ಸಿಂಧನೂರು ತಾಲೂಕ ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ಮೇಟಿ, ತಾಲೂಕ ಕಾರ್ಯದರ್ಶಿಗಳಾದ, ಕೃಷ್ಣ ಸುಕಾಲಪೇಟೆ, ವೀರೇಶ್ ಕೋಟೆ, ಶರಣಪ್ಪ ಬೇರಗೀ, ಚನ್ನಬಸವ ಸೋಮಲಾಪುರ್, ಕಣಪ್ಪ ಜನತಾ ಕಾಲೋನಿ, ಶರಣಯ್ಯ ಸ್ವಾಮಿ ಸೇರಿದಂತೆ ಹಲವಾರು ಮುಖಂಡರು ಭಾಗವಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ